Siddu vs V Somanna: ವರುಣಾದಲ್ಲಿ ನನ್ನ ಮೇಲಿನ ಜನಪ್ರಿಯತೆ ಕುಗ್ಗಿಸುವ ಉದ್ದೇಶವಿದೆ' ಬಿಜೆಪಿಗೆ ಗುಮ್ಮಿದ ಟಗರು
ಮೈಸೂರು ಏಪ್ರಿಲ್ 22: 'ವರುಣಾದಲ್ಲಿ ನನ್ನ್ ಮೇಲಿನ ಜನಪ್ರಿಯತೆ ಕುಗ್ಗಿಸುವ ಉದ್ದೇಶವಿದೆ' ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ರಾಜ್ಯ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಚಾರದ ಭರಾಟೆ ಜೋರಾಗಿದೆ. ಅದರಲ್ಲೂ ಈ ಬಾರಿ ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ವಿ ಸೋಮಣ್ಣ ಸ್ಪರ್ಧಿಸುತ್ತಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ. ಮೊನ್ನೆಯಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಸಚಿವ ವಿ ಸೋಮಣ್ಣ ಅವರಿಗೆ ನಾಮಪತ್ರ ಸಲ್ಲಿಕೆ ವೇಳೆ ಸಾಥ್ ನೀಡಿದರು. ಈ ವೇಳೆ ರೋಡ್ ಶೋ ನಡೆಸುವ ಮೂಲಕ ಮತಯಾಚನೆ ಮಾಡಿದರು.

ಸಿದ್ದರಾಮಯ್ಯ ಕೂಡ ತಮ್ಮ ಕ್ಷೇತ್ರ ವರುಣಾದಲ್ಲಿ ಜಯ ಸಾಧಿಸೇ ತೀರಬೇಕು ಎನ್ನುವ ಪಣ ತೊಟ್ಟಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರಿಗೆ ಪ್ರಚಾರದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬೆಂಬಲ ಸಿಕ್ಕಿರುವುದು ಕಂಡು ಬಂದಿದೆ. ಇದರಿಂದ ವರುಣಾದಲ್ಲಿ ಸೋಮಣ್ಣ ಹಾಗೂ ಸಿದ್ದರಾಮಯ್ಯ ತೀವ್ರ ಪೈಪೋಟಿಗಿಳಿಯುವ ಸಾಧ್ಯತೆ ಇದೆ. ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ ಇನ್ನಿಲ್ಲದ ರಣತಂತ್ರಗಳನ್ನು ಹೆಣೆಯುತ್ತಿದೆ. ಹೀಗಾಗಿ ವರುಣಾ ರಣಕಣ ರಂಗೇರುತ್ತಿದೆ.
ಕಾರೇಪುರ ಗ್ರಾಮದಲ್ಲಿ ಸಿದ್ದರಾಮಯ್ಯ ಇಂದು ಪ್ರಚಾರ ಮಾಡಿದರು. ಈ ವೇಳೆ ಅವರಿಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಸಿಕ್ಕಿದೆ. ಸಿದ್ದರಾಮಯ್ಯ ಅವರನ್ನು ವರುಣಾದಲ್ಲಿ ಪಟಾಕಿ ಸಿಡಿಸಿ, ವಾದ್ಯ ಮೇಳದೊಂದಿಗೆ ಹೂವಿನ ಮಳೆ ಸುರಿಸಿ ಸ್ವಾಗತ ಕೋರಲಾಗಿದೆ. ಸಿದ್ದರಾಮಯ್ಯ ಅವರಿಗೆ ಜೈಕಾರ ಹಾಕುತ್ತಾ ಅಭಿಮಾನಿಗಳು ಕಾರ್ಯಕರ್ತರು ಸ್ವಾಗತ ಕೋರಿದರು. ಈ ವೇಳೆ ಅಧಿಕ ಸಂಖ್ಯೆಯಲ್ಲಿ ಜನ ನೆರೆದಿರುವುದು ಕಂಡು ಬಂದಿದೆ.
ವರುಣಾ ಅಖಾಡಕ್ಕೆ ಸಿದ್ದರಾಮಯ್ಯ ಎಂಟ್ರಿ
ವರುಣಾದ ಕಾರೇಪುರ ಗ್ರಮದಲ್ಲಿ ರೋಡ್ ಶೋ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, 'ಸೋಮಣ್ಣ ಆರ್ಎಸ್ಎಸ್ ಏನೇ ಮಾಡಿದರೂ ಜನ ನನ್ನ ಕೈ ಹಿಡಿಯುತ್ತಾರೆ. ಈ ಕ್ಷೇತ್ರದಲ್ಲಿ ನನ್ನನ್ನು ಕಟ್ಟಿ ಹಾಕೋ ಉದ್ದೇಶ ಇದೆ. ಬಿಜೆಪಿ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನ್ನ್ ಮೇಲಿನ ಜನಪ್ರಿಯತೆ ಕುಗ್ಗಿಸುವ ಉದ್ದೇಶ ಬಿಜೆಪಿಗೆ ಇದೆ. ನಮ್ಮ ಕ್ಷೇತ್ರಕ್ಕೆ ಸೋಮಣ್ಣ ಏನೂ ಮಾಡಿಲ್ಲ. ಸೋಮಣ್ಣ ಅವರ ಕೊಡುಗೆ ಏನೂ ಇಲ್ಲ. ಆದರೂ ವರುಣಾದಲ್ಲಿ ಅವರನ್ನು ನಿಲ್ಲಿಸಿದ್ದಾರೆ. ಜನರಿಗೆ ಇವೆಲ್ಲಾ ಗೊತ್ತಿದೆ. ಅವರು ಏನೋ ಕುತಂತ್ರ ಮಾಡಿದರೂ ಜನ ನಂಬಲ್ಲ' ಎಂದು ಸಿದ್ದರಾಮಯ್ಯ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಪ್ರಚಾರದ ಬಗ್ಗೆ ವಿ ಸೋಮಣ್ಣ ಹೇಳಿದ್ದೇನು?
ಸಿದ್ದರಾಮಯ್ಯ ಪ್ರಚಾರದ ಬಗ್ಗೆ ಮಾತನಾಡಿದ ವಿ ಸೋಮಣ್ಣ, 'ಸಿದ್ದರಾಮಯ್ಯ ಜೊತೆ ನಾನೂ ಕೆಲಸ ಮಾಡಿದ್ದೇನೆ. ನಾನೇನು ಭೂತನೂ ಅಲ್ಲ, ಪಿಶಾಚಿನೂ ಅಲ್ಲ. ನಾನೊಬ್ಬ ಮನುಷ್ಯ. ನನಗಿಂತ ದೊಡ್ಡ ವ್ಯಕ್ತಿ ಅವರು. ಅವರ ಪಾಡಿಗೆ ಅವರು ಪ್ರಚಾರ ಮಾಡುತ್ತಾರೆ. ನಾನು ನನ್ನ ಪಾಡಿಗೆ ಪ್ರಚಾರ ಮಾಡುತ್ತಾರೆ' ಎಂದರು.
ಹೀಗೆ ಚುನಾವಣಾ ಪ್ರಚಾರದ ಕಿಚ್ಚು ಎರಡೂ ಪಕ್ಷಗಳ ನಡುವೆ ಹೆಚ್ಚಾಗಿದ್ದು, ಮುಂಬರುವ ಚುನಾವಣೆಯಲ್ಲಿ ಮತದಾರರು ಯಾರ ಕೈ ಹಿಡಿಯುತ್ತಾರೆ ಎಂದು ಕಾದು ನೋಡಬೇಕಿದೆ.












Click it and Unblock the Notifications