ಮೈಸೂರು ಒಡೆಯರ್ ಆಸ್ತಿ ಕಬಳಿಕೆ, ನಾಲ್ವರ ಬಂಧನ
ಮೈಸೂರು, ಜೂ. 6 : ನಕಲಿ ದಾಖಲೆ ಸೃಷ್ಟಿಸಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಆಸ್ತಿ ಕಬಳಿಸಲು ಯತ್ನಿಸುತ್ತಿದ್ದ ನಾಲ್ವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತ ರಿಯಲ್ ಎಸ್ಟೇಟ್ ಉದ್ಯಮಿ, ಉಪನೋಂದಣಾಧಿಕಾರಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತರನ್ನು ಉಪ ನೋಂದಣಾಧಿಕಾರಿ ಗಿರೀಶ್, ರಿಯಲ್ ಎಸ್ಟೇಟ್ ಉದ್ಯಮಿಗಳಾದ ಜೆ.ಪಿ. ನಗರದ ಆರ್.ಮಹದೇವ್, ರಾಮಕೃಷ್ಣ ನಗರದ ರವಿಕುಮಾರ್ ಹಾಗೂ ಸೋಮವಾರಪೇಟೆ ತಾಲೂಕು ಸುಳಗಳಲೆ ಗ್ರಾಮದ ಬಿ.ಕೆ.ಸುಂದರ್ ಎಂದು ಗುರುತಿಸಲಾಗಿದೆ. [ಒಡೆಯರ್ ಅಂತಿಮಯಾತ್ರೆ ಚಿತ್ರಗಳು]

ಲೋಕಾಯುಕ್ತರ ಪತ್ರಿಕಾ ಹೇಳಿಕೆಯಲ್ಲಿ ಬಂಧನದ ಕುರಿತು ಮಾಹಿತಿ ನೀಡಲಾಗಿದ್ದು, ಒಡೆಯರ್ ಅವರ ಖಾಸಗಿ ಒಡೆತನದಲ್ಲಿರುವ ಸುಮಾರು 30 ಕೋಟಿ ಬೆಲೆಬಾಳುವ ಮೈಸೂರಿನ ಸರ್ವೆ ನಂ.1 ರ 200/250 ಅಡಿ ವಿಸ್ತೀರ್ಣದ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲು ಆರೋಪಿಗಳು ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. [ಒಡೆಯರ್ ಅವರಿಗೆ ಚಿತ್ರ ನಮನ]
ಬಂಧಿತ ಬಿ.ಕೆ.ಸುಂದರ್ ಮಹಾರಾಜರು 1961ರಲ್ಲಿ ತನಗೆ ದಾನಪತ್ರದ ಮೂಲಕ ಈ ಭೂಮಿಯನ್ನು ನೀಡಿದ್ದರು ಎಂದು ನಕಲಿ ದಾಖಲೆ ಸೃಷ್ಟಿಸಿದ್ದರು. ಇದನ್ನು ಆಧಾರವಾಗಿಟ್ಟುಕೊಂಡು ಮೈಸೂರು ಪೂರ್ವ ವಿಭಾಗದ ಉಪ ನೊಂದಣಾಧಿಕಾರಿ ಗಿರೀಶ್ ಅವರು, ಒಡೆಯರ್ರನ್ನು ಭೇಟಿ ಮಾಡಿ, ಅವರಿಂದ ಹೆಬ್ಬೆಟ್ಟಿನ ಮುದ್ರೆ ಹಾಗೂ ಸಹಿ ಪಡೆದಿರುವುದಾಗಿ ಮತ್ತೊಂದು ನಕಲಿ ದಾಖಲೆ ತಯಾರಿಸಿದ್ದರು.
ಈ ಆಸ್ತಿಯನ್ನು ನೋಂದಣಿ ಮಾಡಿಸುವಾಗ ಬಿ.ಕೆ.ಸುಂದರ್ ಪರವಾಗಿ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಆರ್.ಮಹದೇವ ಮತ್ತು ರವಿಕುಮಾರ್ ಮುದ್ರಾಂಕ ಶುಲ್ಕವನ್ನು ಪಾವತಿ ಮಾಡಿದ್ದರು. ಆದ್ದರಿಂದ ಎಲ್ಲರನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಎಸ್.ಎಂ.ಜಗದೀಶ್ ಪ್ರಸಾದ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ತಮ್ಮ ಸೇವೆಯನ್ನು ದುರುಪಯೋಗ ಮಾಡಿಕೊಂಡು ವೈಯುಕ್ತಿಕ ಲಾಭಕ್ಕಾಗಿ ಹಾಗೂ ಖಾಸಗಿ ವ್ಯಕ್ತಿಗಳಿಗೆ ಲಾಭ ಮಾಡಿ ಕೊಡುವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದಲ್ಲಿ ಇನ್ನೂ ಕೆಲವು ಅಧಿಕಾರಿಗಳು ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.












Click it and Unblock the Notifications