ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜಾದ ಸಾಂಸ್ಕೃತಿಕ ನಗರಿ
ಮೈಸೂರು, ಮೇ 10:ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆಯೇ ಮೈಸೂರಿನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದೆ.ಕಳೆದ ಬಾರಿ ಕಾಂಗ್ರೆಸ್ - ಜೆಡಿಎಸ್ ನಡುವೆ ಪುರಸಭೆ ಚುನಾವಣೆಗೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿತ್ತು.
ಈ ಬಾರಿ ನಂಜನಗೂಡು ನಗರಸಭೆ, ಕೆಆರ್ ನಗರ, ಬನ್ನೂರು ಪುರಸಭೆಗೆ ಚುನಾವಣೆ ನಡೆಯುತ್ತಿದೆ.ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಯಾಗಿ ಬಿಜೆಪಿಯನ್ನು ಎದುರಿಸಿ ಆಯಿತು. ಆದರೆ ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಿದೆ. ಇದಕ್ಕೆ ತಕ್ಕಂತೆ ಕಾಂಗ್ರೆಸ್ - ಜೆಡಿಎಸ್ ಜಿದ್ದಾಜಿದ್ದಿ ಹೋರಾಟ ನಡೆಸಲು ಸಜ್ಜಾಗುತ್ತಿದೆ.
ನಗರಸಭೆ ಹಾಗೂ ಪುರಸಭೆಗಳಿಗೆ ಮೇ.29ರಂದು ಚುನಾವಣೆ ನಡೆಯಲಿದೆ. ಇಲ್ಲಿ ಕಾಂಗ್ರೆಸ್ - ಜೆಡಿಎಸ್ ಪಕ್ಷಗಳೇ ಪರಸ್ಪರ ಪ್ರಮುಖ ಎದುರಾಳಿಗಳು. ಈ ಮಧ್ಯೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಹಿನಕಲ್ , ಚಿಕ್ಕನಹಳ್ಳಿ, ಹುಣಸೂರು ಕ್ಷೇತ್ರದ ಹನಗೋಡು, ಕೆ ಆರ್ ನಗರ, ಸಿದ್ದಾಪುರ ಪಿರಿಯಾಪಟ್ಟಣದ ದೊಡ್ಡ ಕಮರಹಳ್ಳಿ ಗ್ರಾಮ ಪಂಚಾಯಿತಿಯ ವಿವಿಧ ಕಾರಣಗಳಿಗೆ ತೆರವಾಗಿರುವ ಸ್ಥಾನಗಳಿಗೆ ಈ ಚುನಾವಣೆ ಘೋಷಣೆಯಾಗಿದೆ.

ಈ ಎಲ್ಲಾ ಸ್ಥಾನಗಳಿಗೆ ಕಾಂಗ್ರೆಸ್ - ಜೆಡಿಎಸ್ ನಡುವೆಯೇ ಜಿದ್ದಾಜಿದ್ದಿ ಹೋರಾಟವಿರುವುದು ಗಮನಾರ್ಹ ವಿಷಯವಾಗಿದೆ. ಕೆ ಆರ್ ನಗರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಸಚಿವ ಸಾ ರಾ ಮಹೇಶ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಹಿರಂಗವಾಗಿಯೇ ಕಾಂಗ್ರೆಸ್ ವಿರುದ್ಧ ಎದುರಾಗಬೇಕಾಗಿದೆ.
ಟಿ ನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನ್ನೂರು ಪುರಸಭೆಯ ಚುನಾವಣೆಯಲ್ಲಿ ಗೆಲ್ಲುವುದು ಮಾಜಿ ಸಚಿವರು ಆಗಿರುವ ಡಾ.ಮಹದೇವಪ್ಪ ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಮಹದೇವಪ್ಪ ಇಲ್ಲಿ ಜೆಡಿಎಸ್ ವಿರುದ್ಧ ಮತ್ತೊಂದು ಸುತ್ತಿನ ಹೋರಾಟ ನಡೆಸಲೇಬೇಕಾಗಿದೆ.
ಕೆಆರ್ ನಗರ ಪುರಸಭೆಯಲ್ಲಿ 23 ವಾರ್ಡ್ ಗಳಲ್ಲಿ ಜೆಡಿಎಸ್ ಆಳ್ವಿಕೆ ಇದೆ. ಸಚಿವ ಮಹೇಶ್ ಹಾಗೂ ಕಳೆದ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸೋತ ಮೈಸೂರು ಜಿಲ್ಲಾ ಪಂಚಾಯತ್ ಸದಸ್ಯ ರವಿಶಂಕರ್ ಮಧ್ಯೆ ಜಿದ್ದಾಜಿದ್ದಿ ಹೋರಾಟ ನಡೆಯಲಿದೆ. ಈ ಬಾರಿ ಪುರಸಭೆ ಆಡಳಿತಕ್ಕೋಸ್ಕರ ಜೆಡಿಎಸ್ ಗಿಂತ ಹೆಚ್ಚು ಕಾಂಗ್ರೆಸ್ ತಾಲೀಮು ನಡೆಸಿದೆ.
ಪುರಸಭೆಯಲ್ಲಿ ಜೆಡಿಎಸ್ ಪ್ರಾಬಲ್ಯ ಉಳಿಸಿಕೊಳ್ಳುವುದು ಸಚಿವ ಮಹೇಶ್ ಅವರಿಗೆ ಒಂದು ಅಗ್ನಿ ಪರೀಕ್ಷೆ ಹೌದು. ನಂಜನಗೂಡು ನಗರಸಭೆಯಲ್ಲಿ 31 ವಾರ್ಡ್ ಗಳಿದ್ದು, ಕಾಂಗ್ರೆಸ್ ಆಡಳಿತದಲ್ಲಿದೆ. ಇಲ್ಲಿ ಕಾಂಗ್ರೆಸ್ - ಜೆಡಿಎಸ್- ಬಿಜೆಪಿ ಮೂರು ಪಕ್ಷಗಳ ಪ್ರಾಬಲ್ಯವಿದ್ದು, ಜೆಡಿಎಸ್ ಸ್ವಲ್ಪ ದುರ್ಬಲವಾಗಿದೆ ಅಷ್ಟೇ.












Click it and Unblock the Notifications