ಚಪ್ಪಲಿ ಕಳಚಿಟ್ಟು ಊಟಕ್ಕೆ ಬನ್ನಿ, ಇದು ಮೈಸೂರಿನ ಮಧ್ವ ಭವನ!
ಮನೆಯಲ್ಲಿ ಊಟ ಮಾಡುವಾಗ ಚಪ್ಪಲಿ ಅಂಗಳದ ಹೊರಗೆ ಬಿಟ್ಟಿರ್ತೀವಿ. ಬಹುತೇಕ ಸಂದರ್ಭಗಳಲ್ಲಿ ನೆಲದ ಮೇಲೆ ಕೂರ್ತೀವಿ. ಆದರೆ ಹೋಟೆಲ್ ಗಳಲ್ಲಿ ಈ ರೀತಿಯಲ್ಲಿ ಇರುತ್ತಾ? ಖಂಡಿತವಾಗಿಯೂ ಇದೆ ಕಣ್ರೀ. ಮೈಸೂರಿನಲ್ಲಿ ಒಂದು ಹೋಟೆಲ್ ಇದೆ. ಇಲ್ಲಿ ಊಟ ಮಾಡಬೇಕು ಎಂದರೆ ಹೋಟೆಲ್ ಹೊರ ಭಾಗದಲ್ಲೇ ಚಪ್ಪಲಿ ಕಳಚಿಟ್ಟು ಬರಬೇಕು.
ಊಟಕ್ಕಾಗಿ ನೆಲದ ಮೇಲೇ ಕೂರಬೇಕು. ಹೌದು, ಇದು ಮನೆಯಂತಿರುವ ಹೋಟೆಲ್. ಇದರ ಹೆಸರು ಅನಿಮ ಮಧ್ವ ಭವನ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ಇಲ್ಲಿಗೆ ನಿತ್ಯವೂ ಹೆಚ್ಚಿನ ಸಂಖ್ಯೆಯಲ್ಲಿ ಬರುವವರು ವಿದೇಶಿಗರೇ. ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಮಧ್ವಭವನ ಹೋಟೆಲ್ ನಲ್ಲಿ ಅಂಥದ್ದೊಂದು ವಿಶೇಷ ಇದೆ.
ಇಲ್ಲಿನ ಅಡುಗೆಗೆ ಮನೆ ರುಚಿಯ ಸ್ಪರ್ಶ ನೀಡಲಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಯಾವುದೇ ಅಡುಗೆಗೆ ಈರುಳ್ಳಿ, ಬೆಳ್ಳುಳ್ಳಿ ಬಳಸುವುದಿಲ್ಲ. ಏಕೆ ಅಂತ ಕೇಳಿದರೆ, ಕೆಲವರಿಗೆ ಈರುಳ್ಳಿ- ಬೆಳ್ಳುಳ್ಳಿ ಬಳಸದ ಅಡುಗೆ ಊಟ ಮಾಡಬೇಕು ಅಂತ ಇರುತ್ತದೆ. ಆದ್ದರಿಂದಲೇ ಹಾಗೆ ಅಡುಗೆ ಮಾಡುತ್ತೇವೆ ಎಂಬ ಉತ್ತರ ದೊರೆಯುತ್ತದೆ. ಇನ್ನು ಅಡುಗೆಯ ಬಗ್ಗೆ ಇನ್ನಷ್ಟು ವೈಶಿಷ್ಟ್ಯ ತಿಳಿಯಲು ಮುಂದೆ ಓದಿ.

ವಿಶೇಷ ದಿನಗಳಲ್ಲಿ ಬಾಳೆ ಎಲೆಯ ಪಾಯಸದೂಟ
ಅಡುಗೆಯ ಮೆನು ಅಂದರೆ ಉಪ್ಪಿನಕಾಯಿ, ಚಟ್ನಿ ಪುಡಿ, ಕೋಸಂಬರಿ, ಪಲ್ಯ, ಚಿತ್ರಾನ್ನ, ಅನ್ನ, ಹುಳಿ, ಸಾರು, ಪಾಯಸ, ಹೋಳಿಗೆ, ಬೋಂಡಾ, ಚಪಾತಿ, ಸಾಗು, ಮೊಸರು, ಮಜ್ಜಿಗೆ. ಬಡಿಸುವವರು ಸಹ ಸಾಂಪ್ರದಾಯಿಕವಾಗಿಯೇ ಕಾಣಸಿಗುತ್ತಾರೆ ಎಂಬುದು ಅನಿಮ ಮಧ್ವ ಭವನದ ವಿಶೇಷ. ಭಾನುವಾರ ಹಾಗೂ ಹಬ್ಬದ ದಿನಗಳಲ್ಲಿ ಇಲ್ಲಿನ ಊಟಕ್ಕೆ ಮತ್ತಷ್ಟು ವಿಶೇಷ ಸೇರಿಕೊಳ್ಳುತ್ತದೆ. ವಿಶೇಷ ದಿನಗಳಲ್ಲಿ ಬಾಳೆ ಎಲೆ ಪಾಯಸದೂಟ, ಹೋಳಿಗೆಯೂಟ ಹಬ್ಬದೂಟವನ್ನು ಇಲ್ಲಿ ಸವಿಯುವ ಸಂಭ್ರಮವೇ ಬೇರೆ. ಅಕಸ್ಮಾತ್ ನೀವು ಏಕಾಂಗಿಯಾಗಿದ್ದರೆ, ಮನೆಯೂಟದ ಸವಿಗೋಸ್ಕರ ಮಧ್ವ ಭವನಕ್ಕೆ ಹೋಗಬಹುದು. ಸಂಸಾರ ಸಮೇತ ಸೇರಿ ಹಬ್ಬದೂಟ ಸವಿಯಬಹುದು.

ಚಪ್ಪಲಿಯನ್ನು ಹೊರಗೆ ಬಿಡಬೇಕು
ಅನಿಮ ಮಧ್ವ ಭವನ ಸಾಂಪ್ರದಾಯಿಕ ಹೋಟೆಲ್. ಈ ಹೋಟೆಲ್ ನಲ್ಲಿ ಊಟ ಮಾಡಬೇಕು ಅಂದರೆ ಚಪ್ಪಲಿಯನ್ನು ಹೊರಗೆ ಬಿಡಬೇಕು. ಜೊತೆಗೆ ಕೆಳಗೆ ಚಾಪೆ ಮೇಲೆ ಕುಳಿತುಕೊಳ್ಳಬೇಕು. ವಯಸ್ಸಾದವರಿಗೆ ಕುರ್ಚಿ ಮೇಲೆ ಕೂತು ಊಟ ಮಾಡುವುದಕ್ಕೂ ವ್ಯವಸ್ಥೆ ಇದೆ. ಇನ್ನು ಸಂಪೂರ್ಣ ಹೋಟೆಲ್ ಅನ್ನು ಗ್ರಾಮೀಣ ಸೊಗಡಿನಲ್ಲಿ ಅಲಂಕಾರ ಮಾಡಿದ್ದಾರೆ. ಚಾಪೆ ಹಾಸಿ, ಗೋಡೆಯ ಮೇಲೆ ರಂಗೋಲಿ ಬಿಡಿಸಿ.. ಹೀಗೆ ಗ್ರಾಮೀಣ ಸೊಗಡನ್ನು ಈ ಹೋಟೆಲ್ ಬಿಂಬಿಸುತ್ತದೆ.

ಮೈಸೂರು ಶೈಲಿಯ ಬ್ರಾಹ್ಮಣರ ಊಟ
ಇಲ್ಲಿ ಸಿಗುವುದು ಮೈಸೂರು ಶೈಲಿಯ ಬ್ರಾಹ್ಮಣರ ಊಟ. ಎಸೆನ್ಸ್, ಸೋಡಾ, ಡಾಲ್ಡಾ, ಪಾಮಾಯಿಲ್ ಕಡ್ಡಾಯವಾಗಿ ಬಳಸುವುದಿಲ್ಲ. ದಿನದೂಟಕ್ಕೆ 140 ರುಪಾಯಿ, ವಾರಾಂತ್ಯದ ಊಟಕ್ಕೆ 170 ರುಪಾಯಿ. ದಿನವೂ ಪಾಯಸದೂಟ ಇರುತ್ತದೆ. ವಾರಾಂತ್ಯದ ಊಟದಲ್ಲಿ ಹೋಳಿಗೆ ಇರುತ್ತದೆ. ಬಿಸಿಬಿಸಿ ಊಟಕ್ಕೆ ಇಷ್ಟೇ ಹಾಕುವುದು ಎಂದು ಪ್ರಮಾಣದಲ್ಲಿ ಮಿತಿ ಏನೂ ಇಲ್ಲ್. ನಿಧಾನವಾಗಿ ಬಡಿಸುತ್ತಾರೆ. ಊಟವಾದ ಮೇಲೆ ಎಲೆ- ಅಡಿಕೆ ವ್ಯವಸ್ಥೆಯೂ ಇದೆ. ಮಧ್ವ ಭವನವು ಊಟಕ್ಕೆ ಮಾತ್ರ ಸೀಮಿತವಾದದ್ದಲ್ಲ. ಸಂಜೆ ಹೊತ್ತಿಗೆ ಇಲ್ಲಿ ಗೊಜ್ಜವಲಕ್ಕೆ, ಒತ್ತು ಶಾವಿಗೆ, ಶಾವಿಗೆ ಉಪ್ಪಿಟ್ಟು, ಪಡ್ಡು, ವಿವಿಧ ರೀತಿಯ ದೋಸೆ, ಹಯಗ್ರೀವ, ಬೋಂಡಾ...ಹೀಗೆ ಹೇಳುತ್ತಾ ಹೋದರೆ ಪಟ್ಟಿ ಸಾಗುತ್ತಲೇ ಇರುತ್ತದೆ.

ಅಭಿಲಾಷ್- ದರ್ಶನ್ ಗಂಡ-ಹೆಂಡತಿ ಸಾಹಸ
ಎಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ವಿಪ್ರೋದಲ್ಲಿ ಕೆಲಸಕ್ಕೆ ಸೇರಿದ ಬೆಂಗಳೂರಿನ ಮೂಲದ ಅಭಿಲಾಷ್ ಗೆ ಹೋಟೆಲ್ ಉದ್ಯಮದಲ್ಲಿ ಹೆಚ್ಚಿನ ಆಸಕ್ತಿ. ಅಲ್ಲಿನ ಕೆಲಸದಲ್ಲಿ ತೃಪ್ತಿ ಇರಲಿಲ್ಲ. ಈ ಬಗ್ಗೆ ಹೆಂಡತಿ, ದೆಹಲಿ ಮೂಲದ ದರ್ಶನ್ ಬಾವಾ ಜೊತೆ ಚರ್ಚೆ ಮಾಡಿದಾಗ ಅವರು ಕೂಡ ಹೋಟೆಲ್ ಉದ್ಯಮ ಪ್ರಾರಂಭ ಮಾಡೋಣ ಎಂದು ಸಲಹೆ ನೀಡಿದ್ದಾರೆ. ಆದರೆ ಬೇರೆ ಹೋಟೆಲ್ ಮಾದರಿಯಲ್ಲಿ ಇರಬಾರದು ಎಂದು ಯೋಚಿಸಿದ್ದರು. ವಿಪ್ರೋದಲ್ಲಿ ಕೆಲಸ ಮಾಡುತ್ತಿದ ಅಭಿಲಾಷ್, ಎಚ್ಡಿಎಫ್ಸಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಹೆಂಡತಿ ದರ್ಶನ್ ಬಾವಾ, ಇಬ್ಬರೂ ತಮ್ಮ ವೃತ್ತಿ ಬದಲಾಯಿಸಿ ಅನಿಮ ಮಧ್ವ ಭವನ ಹೋಟೆಲ್ ನಡೆಸುತ್ತಿದ್ದಾರೆ.












Click it and Unblock the Notifications