ಮುಕ್ತ ವಿವಿ ವಿದ್ಯಾರ್ಥಿಗಳ ಮೇಲೆ ಯುಜಿಸಿ ಚಪ್ಪಡಿಕಲ್ಲು
ಮೈಸೂರು, ಆಗಸ್ಟ್ 8 : ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಮಾನ್ಯತೆ ಸಿಗಬಹುದೇನೋ ಎಂದು ಚಾತಕಪಕ್ಷಿಗಳಂತೆ ಕಾದು ಕುಳಿತಿದ್ದ ವಿದ್ಯಾರ್ಥಿಗಳ ತಲೆಯ ಮೇಲೆ ಯುಜಿಸಿಯ ಹೊಸ ನಿಯಾಮವಳಿಗಳು ಚಪ್ಪಡಿ ಕಲ್ಲು ಎಳೆದಿದೆ. ಕೆಎಸ್ಓಯು ಕುರಿತಂತೆ ಯುಜಿಸಿ ಹೊರ ತಂದಿರುವ ಹೊಸ ನಿಯಮಾವಳಿಗಳ ಪ್ರಕಾರ ಕೆಎಸ್ಒಯುಗೆ ಮಾನ್ಯತೆ ಸಿಗೋದೆ ಡೌಟ್ ಆಗಿದೆ.
ಯುಜಿಸಿ ಕಾರ್ಯದರ್ಶಿ ರಾಕೇಶ್ ಶುಕ್ಲಾರವರು ಹೊಸ ನಿಯಮಾವಳಿ ಜಾರಿಗೆ ಆದೇಶ ಹೊರಡಿಸಿದ್ದು, ಇನ್ನು ಮುಂದೆ ವಿವಿಗೆ ಯುಜಿಸಿ ಮಾನ್ಯತೆ ಸಿಗುವುದು ಹಗಲುಗನಸು..!

ಹೊಸ ನಿಯಮಾವಳಿಯಲ್ಲಿ ಏನಿದೆ?
10 ದಶಕಗಳ ಬಳಿಕ ಯುಜಿಸಿ ಮಾರ್ಗಸೂಚಿ ಬದಲು ಮಾಡಿದ್ದು, ಹೊಸ ನಿಯಮಾವಳಿ ಪ್ರಕಾರ ವಿವಿ ಮಾಡುವಂತಹ ಪ್ರತಿ ಕಾರ್ಯಕ್ರಮಕ್ಕೂ ತಿದ್ದುಪಡಿ ತರಲಾಗಿದೆ. ಬಿಎ, ಬಿಕಾಂ,ಎಂಎ, ಎಂಕಾಂ ಯಾವುದೇ ಆದರೂ ಸರಿ, ಪ್ರತಿ ವಿಷಯವಲ್ಲ, ಪ್ರತಿ ಪಾಠಕ್ಕೂ ಮಾರ್ಗಸೂಚಿ ಅಳವಡಿಸಿಕೊಳ್ಳಬೇಕು. ಮಾರ್ಗಸೂಚಿ ಜೊತೆಗೆ ಇದು ಪಠ್ಯದಲ್ಲೂ ಸಹ ಇರಬೇಕು. ಹೀಗಾಗಿ ಇನ್ಮುಂದೆ ಮಾನ್ಯತೆ ಸಿಗುವುದು ಕೋರ್ಸ್ ಗಳಿಗಲ್ಲ, ಕೇವಲ ವಿಷಯಕ್ಕೆ ಮಾತ್ರ ಎಂದು ಹೇಳಲಾಗುತ್ತಿದೆ.
ಆದರೆ ಇದು ಕೆ ಎಸ್ ಓಯು ಅಧಿಕಾರಿಗಳಿಗೆ ಅಸಾಧ್ಯ. ಮುಂದಿನ ಸಾಲಿಗೂ ಅಂದರೆ 2017-2018ನೇ ಸಾಲಿಗೂ ಮಾನ್ಯತೆ ಸಿಗುವುದು ಅನುಮಾನವಾಗಿದೆ. ಹೊಸ ನಿಯಮಾವಳಿ ಪ್ರಕಾರ ಆರು ತಿಂಗಳ ಮುನ್ನ ಮಾನ್ಯತೆ ಸಿಗಬೇಕು. ಕೋರ್ಸ್ ಆರಂಭಿಸಲು ಆರು ತಿಂಗಳ ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕು. ಯುಜಿಸಿಯಿಂದ ಕ್ಲಿಯರೆನ್ಸ್ ತೆಗೆದುಕೊಳ್ಳಬೇಕು. ಆದರೆ, ಯುಜಿಸಿ ಇದರ ಪ್ರಯತ್ನವನ್ನೇ ಮಾಡಿಲ್ಲ.
ಹೊಸ ಕಾಯ್ದೆ ಬಗ್ಗೆ ಅಧಿಕಾರಿಗಳಿಗೆ ಗೊತ್ತೇ ಇಲ್ಲ!
ಇನ್ನು ಹೊಸ ಕಾಯ್ದೆಗಳ ಬಗ್ಗೆ ಕೆ ಎಸ್ ಓಯು ಅಧಿಕಾರಿಗಳಿಗೆ ಗೊತ್ತಿಲ್ಲ. ಇದೀಗ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ತಲೆ ಮೇಲೆ ಯುಜಿಸಿ ಅಧಿಕಾರಿಗಳು ಚಪ್ಪಡಿ ಕಲ್ಲೆಳೆದಿದ್ದಾರೆ. ಲಕ್ಷ ಲಕ್ಷ ವಿದ್ಯಾರ್ಥಿಗಳ ಬದುಕು ಬೀದಿಗೆ ಬಿದ್ದಿದೆ.
ಹೊಸ ನಿಯಮಾವಳಿ ಪ್ರಕಾರ, ಯುಜಿಸಿ ಮಾನ್ಯತೆ ಸಿಗುವುದು ಅನುಮಾನವಿದ್ದರೂ ಕೆಎಸ್ ಓಯು ಅಧಿಕಾರಿಗಳು ಮಾನ್ಯತೆ ಸಿಗುತ್ತೆ ಅಂತ ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಮಾನ್ಯತೆ ಸಿಗುತ್ತೆ ಅಂತ ರಿಜಿಸ್ಟ್ರಾರ್ ಚಂದ್ರಶೇಖರ್ ಹೇಳುತ್ತಿದ್ದಾರೆ. ಆದರೆ, ಹೊಸ ನಿಯಮಾವಳಿ ಬಗ್ಗೆ ಅವರಿಗೆ ತಿಳಿದೇ ಇಲ್ಲ. ಇನ್ನು ಮಾನ್ಯತೆ ಪಡೆಯಲು ಈಗ ಪ್ರಯತ್ನ ಪಡದೇ ಇದ್ದರೆ ಹೊಸ ನಿಯಮಾವಳಿ ಪ್ರಕಾರ ಮುಂದಿನ ಸಾಲಿಗೂ ಮಾನ್ಯತೆ ಸಿಗುವುದು ಅನುಮಾನವಾಗಿದೆ.
ಕೆಎಸ್ ರಂಗಪ್ಪ ಸವಾಲು
ಈ ಬಗ್ಗೆ ಮಾತನಾಡಿರುವ ಮೈಸೂರು ವಿವಿ ವಿಶ್ರಾಂತ ಕುಲಪತಿ ಕೆ. ಎಸ್ ರಂಗಪ್ಪ, ಮಾನ್ಯತೆ ತರಲು ತಾಕತ್ತು ಬೇಕು. ಕೇವಲ ಆರು ತಿಂಗಳು ನನಗೆ ಅಧಿಕಾರ ನೀಡಲಿ ಮೂರು ತಿಂಗಳ ಒಳಗೆ ಮಾನ್ಯತೆ, ಆರು ತಿಂಗಳ ಒಳಗೆ ಎಲ್ಲವೂ ಸರಿ ಮಾಡುವೆ ಎಂದಿದ್ದಾರೆ. ಇಂದಿನ ಕುಲಪತಿಗಳಿಗೆ ಹೋರಾಡುವ ಮನೋಭಾವವಿಲ್ಲ. ಮೂರೇ ದಿನ ಆದರೂ ನಾನು ಹೋರಾಡಿ ಬದುಕುವೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಕಂಡು ಆತಂಕವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ರದ್ದಿ ಪೇಪರಿನಂತಾಗಿದೆ ಅಂಕಪಟ್ಟಿಗಳು!
ಯುಜಿಸಿ ಜಾರಿಗೆ ತಂದಿರುವ ನೂತನ ನಿಯಮಾವಳಿ ಪ್ರಕಾರ 2012ನೇ ಸಾಲಿನಿಂದ ಈವರಗೆ ಎಲ್ಲವೂ ಅಮಾನ್ಯವಾಗಿರುತ್ತದೆ. ಹೀಗಾಗಿ ಆಗಿನ ಹಳೆ ಅಂಕಪಟ್ಟಿಗಳು ರದ್ದಾದ 500, 1000 ರು. ನೋಟಿನಂತಾಗುತ್ತವೆ. ಇದರಿಂದ ಲಕ್ಷ ಲಕ್ಷ ವಿದ್ಯಾರ್ಥಿಗಳ ಬದುಕು ಬೀದಿಗೆ ಬೀಳಲಿದ್ದಾರೆ. ಈ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ವಿವಿ, ಯುಜಿಸಿ ಅಧಿಕಾರಿಗಳು ಕಲ್ಲೆಳೆದಿದ್ದಾರೆ.
ಕೆಲಸ ಕಳೆದುಕೊಳ್ಳಲಿದ್ದಾರೆ ವಿವಿ 300 ಸಿಬ್ಬಂದಿ :
ಸ್ಟಡಿ ಮೆಟಿರೀಯಲ್ ಬದಲಿಸಬೇಕು. ಯುಜಿಸಿ ಮಾಡೆಲ್ ಸಿಲಬಸ್ ಅನುಸರಿಸಿ ಮಾರ್ಗಸೂಚಿ ತಯಾರಿಸಬೇಕು. ಪ್ರತಿ 5 ವರ್ಷಕ್ಕೊಮ್ಮೆ ತಿದ್ದುಪಡಿ ಕೂಡ ಮಾಡಬೇಕು ಎಂದು ಯುಜಿಸಿ ಸೂಚನೆ ನೀಡಿದ್ದು, ಇದರಿಂದ ಹೊಸ ನಿಯಮಾವಳಿಗೆ ಕೆ ಎಸ್ ಓಯು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.
ಕಲಿಕಾ ಸಾಮಗ್ರಿ ಆಧಾರದ ಮೇಲೆ ಕೋರ್ಸ್ ಗೆ ಮಾನ್ಯತೆ ಸಿಗುತ್ತದೆ. ಹೀಗಾಗಿ ಆ ಲೆಕ್ಕ ನೋಡಿದರೆ ಒಂದೇ ಒಂದು ಕೋರ್ಸ್ ಫಿಟ್ ಆಗಲ್ಲ. ಏಕೆಂದರೆ ಮಾನ್ಯತೆಗೆ ಡಿಜಿಟಲ್ ಸಾಮಗ್ರಿ, ಮುದ್ರಿತ ಸಾಮಗ್ರಿ ಎರಡನ್ನೂ ಸಹ ನೀಡಬೇಕು. ಆದರೆ ಕೆ ಎಸ್ ಓಯು ಅಲ್ಲಿ ಇರೋದು ಮುದ್ರಿತ ಸಾಮಗ್ರಿ ಮಾತ್ರ. ಇದರಿಂದಾಗಿ ಬಹಳಷ್ಟು ವಿಷಯಗಳಿಗೆ ಮಾನ್ಯತೆ ಸಿಗೋದಿಲ್ಲ.
ಹೊಸ ನಿಯಮದ ಪ್ರಕಾರ, ಪ್ರತಿ ಅಧ್ಯಾಪಕರಿಗೆ ಇಬ್ಬರು ಸಹಾಯಕರಂತೆ 300 ಮಂದಿ ನೌಕರರು ಸಾಕು. ಆದರೆ ಕೆ ಎಸ್ ಓ ಯು ಅಲ್ಲಿ 600ಕ್ಕೂ ಹೆಚ್ಚು ಮಂದಿ ನೌಕರರಿದ್ದಾರೆ. ಇದರಿಂದ ಕೆ ಎಸ್ ಓಯುನ ಹೊಸ ನಿಯಮಾವಳಿಯಿಂದ ನೌಕರರಿಗೆ ಆತಂಕ ಉಂಟಾಗಿದ್ದು ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.












Click it and Unblock the Notifications