ಎಸ್ಸೆಸ್ಸೆಲ್ಸಿಯಲ್ಲಿ ನಪಾಸಾದ ಇಬ್ಬರು ನೇಣಿಗೆ ಶರಣು
ಮೈಸೂರು, ಮೇ 17 : ಪರೀಕ್ಷೆಯಲ್ಲಿ ಪಾಸಾಗುವುದೊಂದೇ ಜೀವನದ ಏಕೈಕ ಉದ್ದೇಶವಲ್ಲ. ಪರೀಕ್ಷೆಯಲ್ಲಿ ಫೇಲ್ ಆದರೂ ಸಾಧನೆಗೆ ಬೇಕಾದಷ್ಟು ಮಾರ್ಗಗಳಿವೆ. ಅನುತ್ತೀರ್ಣರಾದರೂ ಜೀವನ ಕಳೆದುಕೊಳ್ಳುವಂಥ ಕ್ರಮಕ್ಕೆ ಕೈಹಾಕಬೇಡಿ ಎಂಬ ಉತ್ತೇಜನದ ಮಾತುಗಳನ್ನು ಲೆಕ್ಕಿಸದೆ, ಎಸ್ಸೆಸ್ಸೆಲ್ಸಿಯಲ್ಲಿ ನಪಾಸಾದ ಇಬ್ಬರು ವಿದ್ಯಾರ್ಥಿನಿಯರು ಜೀವ ತೆತ್ತಿದ್ದಾರೆ.
ಹಳೇ ಮೈಸೂರು ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಕ್ಕಾಗಿ ನೊಂದು ಮೂವರು ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಒಬ್ಬಾಕೆ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾಳೆ.
ಮೈಸೂರಿನ ಎಚ್.ಡಿ.ಕೋಟೆ ಬಳಿಯ ಶಿಂಡೇನಹಳ್ಳಿಯ ವಿದ್ಯಾರ್ಥಿನಿ ತೇಜು(16), ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ಎಂಇಎಂ ಶಾಲೆಯ ಜಾಹ್ನವಿ(16) ಸಾವನ್ನಪ್ಪಿದ್ದರೆ, ಮದ್ದೂರು ತಾಲೂಕಿನ ಚಿನ್ನನದೊಡ್ಡಿ ಗ್ರಾಮದ ಪಾವನಾ(16) ಎಂಬಾಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. [SSLC ಟಾಪರ್ ಶಿರಸಿಯ ಮಹಿಮಾ ಭಟ್ ಸಂದರ್ಶನ]
ಎಚ್.ಡಿ.ಕೋಟೆ ತಾಲೂಕಿನ ಶಿಂಡೇನಹಳ್ಳಿಯ ತೇಜು ಮೈಸೂರಿನ ಗಂಗೋತ್ರಿ ವಿದ್ಯಾ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈಕೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದು ಸೋಮವಾರ ಫಲಿತಾಂಶವನ್ನು ವೆಬ್ಸೈಟ್ನಲ್ಲಿ ನೋಡಿ ತಾನು ಅನುತೀರ್ಣರಾಗಿರುವುದನ್ನು ತಿಳಿದು, ಮನನೊಂದ ಈಕೆ ಮನೆಗೆ ತೆರಳಿ ನೇಣಿಗೆ ಶರಣಾಗಿದ್ದಾಳೆ.
ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ಎಂಇಎಂ ಶಾಲೆಯ ಜಾಹ್ನವಿ ಕೂಡ ವೆಬ್ಸೈಟ್ನಲ್ಲಿ ಫಲಿತಾಂಶ ನೋಡಿ ಅನುತ್ತೀರ್ಣಳಾಗಿದ್ದರಿಂದ ಮನೆಯಲ್ಲಿ ತಾನು ಅನುತ್ತೀರ್ಣಳಾಗಿರುವುದು ತಿಳಿದರೆ ಬೇಸರ ಮಾಡಿಕೊಳ್ಳುತ್ತಾರೆಂದು ಭಯಗೊಂಡಿದ್ದಾಳೆ. ಮನನೊಂದು ಮನೆಗೆ ತೆರಳಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. [ಬಳ್ಳಾರಿಯ ಯಶ್ವಿತಾ ಸಾಧನೆಗೆ ಅಡ್ಡಿಯಾಗದ ಬಡತನ]
ಮದ್ದೂರು ತಾಲೂಕಿನ ಚಿನ್ನನದೊಡ್ಡಿ ಗ್ರಾಮದ ಪಾವನಾ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಂಡ್ಯದ ಮಿಮ್ಸ್ನಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೌಲಭ್ಯ ಇಲ್ಲದ ಕಾರಣ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಲಾಗಿದೆ.