ಮೈಸೂರಿನ ಕುಖ್ಯಾತ ಸರಗಳ್ಳರ ಬಂಧನ: ಬಿಡುಗಡೆಯಾದ 5 ದಿನಕ್ಕೆ ಮತ್ತೆ ಸೆರೆಸಿಕ್ಕಿದ್ದೇಗೆ..?
ಮೈಸೂರು, ನವೆಂಬರ್ 04: ಜೈಲಿನಿಂದ ಬಿಡುಗಡೆಯಾಗಿ 5 ದಿನಕ್ಕೇ ಸರಗಳ್ಳತನ ಮಾಡಿದ ಇಬ್ಬರು ಖದೀಮರನ್ನು ಮೈಸೂರಿನ ಕುವೆಂಪು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 90 ಸಾವಿರ ಮೌಲ್ಯದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಸುಜುಕಿ ಆಕ್ಸಿಸ್ ಸ್ಕೂಟರ್ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರದ ಮಂಜ ಅಲಿಯಾಸ್ ಕಳ್ ಮಂಜ(32) ಹಾಗೂ ಮೈಸೂರಿನ ಚಂದನ್ ಅಲಿಯಾಸ್ ಚಂದು (29) ಬಂಧಿತ ಆರೋಪಿಗಳು ಂದು ತಿಳಿದು ಬಂದಿದೆ. ಸರಗಳ್ಳತನ ಪ್ರಕರಣದಲ್ಲಿ ಸಾಕಷ್ಟು ಬಾರಿ ಜೈಲು ವಾಸ ಅನುಭವಿಸಿರುವ ಆರೋಪಿಗಳು ಅಕ್ಟೋಬರ್ 25 ರಂದು ಬಿಡುಗಡೆ ಆಗಿದ್ದಾರೆ.

ಬಿಡುಗಡೆಯಾದ ಕೇವಲ 5 ದಿನಗಳಲ್ಲಿ ಮತ್ತೆ ತಮ್ಮ ಹಳೆ ಚಾಳಿ ಮುಂದುವರಿಸಿದ್ದಾರೆ. ಇತ್ತೀಚಿಗೆ ಕುವೆಂಪು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದು ಹೋಗುತ್ತಿದ್ದ ವೃದ್ದ ಮಹಿಳೆ ವಿಜಯಲಕ್ಷ್ಮಿ ಎಂಬುವರ ಸರ ಕಸಿದು ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಸುಜುಕಿ ಆಕ್ಸಿಸ್ ಸ್ಕೂಟರ್ ಬಳಸಿದ್ದಾರೆ. ಕೂಡಲೇ ಸರಗಳವು ಪ್ರಕರಣ ದಾಖಲಿಸಿಕೊಂಡ ಕುವೆಂಪು ನಗರ ಠಾಣೆ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನ ಪರಿಶೀಲಿಸಿ ಆರೋಪಿಗಳ ಜಾಡು ಹಿಡಿದಿದ್ದಾರೆ.
ದಟ್ಟಗಳ್ಳಿಯ ಬಾರ್ ಒಂದರ ಸಮೀಪ ನಿಂತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ .ಕೃತ್ಯಕ್ಕೆ ಬಳಸಿದ ಸ್ಕೂಟರ್ ಸಹ ಕಳುವು ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಬಂಧಿತ ಆರೋಪಿಗಳು ಮೈಸೂರು ಜಿಲ್ಲೆಯಾದ್ಯಂತ ಸುಮಾರು 30ಕ್ಕೂ ಹೆಚ್ಚು ಸರಗಳುವು ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಿಳಿದು ಬಂದಿದೆ. ಆರೋಪಿಗಳು ಸರಗಳ್ಳತನ ಮಾಡಿದ ಕೇವಲ 24 ಗಂಟೆಯೊಳಗೆ ಪೊಲೀಸರ ಅತಿಥಿಯಾಗಿದ್ದಾರೆ.
ಅಪರಾಧ ಮತ್ತು ಸಂಚಾರ ಡಿಸಿಪಿ ಎಸ್.ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ಕೆ.ಆರ್ ವಿಭಾಗದ ಎಸಿಪಿ ರಮೇಶ್ ಕುಮಾರ್ ಉಸ್ತುವಾರಿಯಲ್ಲಿ ಕುವೆಂಪು ನಗರ ಇನ್ಸ್ಪೆಕ್ಟರ್ ಎಲ್.ಅರುಣ್ ಪಿಎಸ್ಸೈ ಗಳಾದ ಗೋಪಾಲ್ ಮತ್ತು ಮದನ್ ರವರ ನೇತೃತ್ವದಲ್ಲಿ ಸಿಬ್ಬಂದಿ ಆನಂದ್, ಮಂಜುನಾಥ್ ಕೆ.ಟಿ, ಮಹೇಶ್ವರ, ಮಂಜುನಾಥ್ ಎಂಪಿ, ಮಂಜು ಹೆಚ್ ವಿ, ನಾಗೇಶ್, ಯಶವಂತ್, ಹಜರತ್ ಹಾಗೂ ಸುರೇಶ್ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ. ಆರೋಪಿಗಳ ಪತ್ತೆ ಕಾರ್ಯಾಚರಣೆಯನ್ನು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಹಾಗೂ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಪ್ರಶಂಸಿಸಿದ್ದಾರೆ.












Click it and Unblock the Notifications