ಮೈಸೂರು : ರಸ್ತೆಯಲ್ಲಿ ಆತಂಕ ಸೃಷ್ಟಿಸಿದ ಎರಡು ಕುದುರೆಗಳು!
ಮೈಸೂರು, ನವೆಂಬರ್ 12 : ಮೈಸೂರು ನಗರದಲ್ಲಿ ಎರಡು ಕುದುರೆಗಳು ರಂಪಾಟ ಮಾಡಿ ಜನರಲ್ಲಿ ಆತಂಕ ಉಂಟು ಮಾಡಿದ್ದವು. ಜನನಿಬೀಡ ರಸ್ತೆಯಲ್ಲಿ ಓಡಿದ ಕುದುರೆಗಳು ಜನರನ್ನು ಕಚ್ಚಿ ಗಾಯಗೊಳಿಸಿವೆ.
ನಗರದ ಅತ್ಯಂತ ಹೆಚ್ಚು ಜನಸಂದಣಿ ಇರುವ ದೇವರಾಜ ಅರಸು ರಸ್ತೆಯಿಂದ ಚಾಮರಾಜ ಜೋಡಿ ರಸ್ತೆಯವರೆಗೆ ಎರಡು ಕುದುರೆಗಳು ಶನಿವಾರ ರಾತ್ರಿ ಹುಚ್ಚೆದ್ದು ಓಡಿವೆ. ದಾರಿಯಲ್ಲಿ ಅಡ್ಡ ಸಿಕ್ಕವರಿಗೆ ಕಚ್ಚಿವೆ. ಕುದುರೆಗಳ ವರ್ತನೆಯಿಂದಾಗಿ ಜನರು ಕೆಲಕಾಲ ಆತಂಕಗೊಂಡಿದ್ದರು.

ಏಕಾಏಕಿ ಕುದುರೆಗಳು ದಾಳಿ ಮಾಡಿದ್ದರಿಂದ ಜನರು ಓಡಿದರು. ಕುದುರೆ ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ವಾಹನಗಳನ್ನು ರಸ್ತೆಗಳಲ್ಲಿಯೇ ಬಿಟ್ಟು ಜನರು ದೂರಕ್ಕೆ ಓಡಿ ಹೋದರು.
ಕುದುರೆಗಳ ರಂಪಾಟದಿಂದಾಗಿ ವಾಹನಗಳಿಂದ ಗಿಜಿ ಗುಡುತ್ತಿದ್ದ ದೇವರಾಜ ಅರಸು ರಸ್ತೆಯಲ್ಲಿ ಕೆಲವು ಸಮಯಗಳ ಕಾಲ ನೀರವ ಮೌನ ಆವರಿಸಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಮಹಾನಗರ ಪಾಲಿಕೆ ಸಿಬ್ಬಂದಿಗಳು ಕುದುರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದರು.

ಹುಚ್ಚು ಕುದುರೆಗಳನ್ನು ಸೆರೆ ಹಿಡಿಯಲು ಪೊಲೀಸರು ಹರಸಾಹಸಪಟ್ಟರು. ಪಾಲಿಕೆಯ ಅಭಯ ತಂಡದ ಸದಸ್ಯರು ಕುದುರೆಗಳನ್ನು ಸೆರೆ ಹಿಡಿದು ಜನರ ಆತಂಕ ನಿವಾರಣೆ ಮಾಡಿದರು.
ಕುದುರೆಗಳನ್ನು ಸೆರೆ ಹಿಡಿದ ನಂತರ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ದ್ವಿ ಚಕ್ರ ವಾಹನದಲ್ಲಿ ಸಾಗುತ್ತಿದ್ದ ಸವಾರರೋರ್ವರ ಕುತ್ತಿಗೆಗೆ ಕುದುರೆ ಕಚ್ಚಿದ ದೃಶ್ಯವನ್ನು ಜನರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾರೆ.












Click it and Unblock the Notifications