ಪಿರಿಯಾಪಟ್ಟಣದ ಬಳಿ ಅಪಘಾತಕ್ಕೆ ಇಬ್ಬರು ವಿದ್ಯಾರ್ಥಿ ಬಲಿ
ಮೈಸೂರು, ಏಪ್ರಿಲ್ 12 : ಸಾರಿಗೆ ಬಸ್ ಹೊಂಡಾ ಆಕ್ಟೀವಾಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಕಂಪಲಾಪುರದಲ್ಲಿ ಮಂಗಳವಾರ ನಡೆದಿದೆ.
ಕೇರಳದ ಕಾಸರಗೂಡು ಮೂಲದ ವಿಜೇಶ್ಕುಮಾರ್(26) ಮತ್ತು ಬಿಬಿನ್ ದಿನೇಶ್(25) ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳು.
ಕಂಪಲಾಪುರ ಬಳಿಯ ಬಿ.ಎಂ. ರಸ್ತೆಯಲ್ಲಿರುವ ಹೋಟೆಲ್ ಪ್ಯಾಲೇಸ್ ಬಳಿ ಕೆಎಸ್ಆರ್ಟಿಸಿ ಬಸ್(ಕೆಎ 10 ಎಫ್ 0241) ಎದುರಿನಿಂದ ಬರುತ್ತಿದ್ದ ಹೊಂಡಾ ಆಕ್ಟೀವಾ(ಕೆಎಲ್ 60 ಜೆ 2882)ಗೆ ಡಿಕ್ಕಿ ಹೊಡೆದಿದೆ. ಸ್ಕೂಟರ್ ಸವಾರ ವಿಜೇಶ್ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಹಿಂಬದಿ ಸವಾರ ಬಿಬಿನ್ ದಿನೇಶ್ ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ ಸಾವನ್ನಪ್ಪಿದ್ದಾನೆ.

ಮೃತರು ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದು, ಮೈಸೂರಿನಿಂದ ಮಡಿಕೇರಿ ಕಡೆಗೆ ಹೊರಟಿದ್ದರು. ಮಡಿಕೇರಿಯಿಂದ ಬೆಂಗಳೂರಿಗೆ ಹೊರಟಿದ್ದ, ಗುಂಡ್ಲುಪೇಟೆ ಡಿಪೋಗೆ ಸೇರಿದ ಬಸ್ ಕಂಪಲಾಪುರ ಬಳಿ ಇವರ ಹೊಂಡಾ ಆಕ್ಟೀವಾಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ.
ಸ್ಥಳಕ್ಕೆ ಪಿರಿಯಾಪಟ್ಟಣ ಠಾಣೆ ಸಬ್ಇನ್ಸ್ಪೆಕ್ಟರ್ ಚಿಕ್ಕಸ್ವಾಮಿ ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶವಗಳನ್ನು ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಶವ ಪರೀಕ್ಷೆ ನಡೆಸಿ, ನಂತರ ಕಾಸರಗೋಡಿನಿಂದ ಬಂದಿದ್ದ ಅವರ ಬಂಧುಗಳಿಗೆ ನೀಡಲಾಗಿದೆ.
ರಸ್ತೆಯ ಡುಬ್ಬ ನಿರ್ಮಿಸಿ : ಘಟನೆ ನಡೆದ ರಸ್ತೆಯ ತಿರುವು ತುಂಬ ಕಡಿದಾಗಿದ್ದು, ಎರಡು ಬದಿಗಳಲ್ಲೂ ರಸ್ತೆ ಡುಬ್ಬಗಳನ್ನು ಹಾಕಲಾಗಿತ್ತು. ಆದರೆ ಇತ್ತೀಚೆಗೆ ಎರಡು ರಸ್ತೆ ಡುಬ್ಬಗಳನ್ನು ಜೆಸಿಬಿ ಮೂಲಕ ಕಿತ್ತುಹಾಕಲಾಗಿದೆ. ಇದರಿಂದ ಹಳ್ಳ ಹೆಚ್ಚಾಗಿದ್ದು, ಇದು ಅಪಘಾತ ಸಂಭವಿಸಲು ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.












Click it and Unblock the Notifications