ಮೈಸೂರಿನಲ್ಲಿ ಪಡಿತರ ಅಕ್ಕಿಗೆ ಕನ್ನ; ಅಕ್ರಮ ಸಾಗಾಟ ಬಯಲು
ಮೈಸೂರು, ಮೇ 04: ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಕ್ಕಿಯನ್ನು ಅಕ್ರಮವಾಗಿ ಮಂಡ್ಯ ನಗರಕ್ಕೆ ಲಾರಿ ಮೂಲಕ ಸಾಗಿಸಲು ಯತ್ನಿಸುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳನ್ನು ಲಾರಿ ಸಮೇತ ವಶಕ್ಕೆ ಪಡೆದ ಘಟನೆ ಮೈಸೂರಿನಲ್ಲಿ ನಡೆದಿದೆ.
Recommended Video
ನಗರದ ಮಂಡಿ ಪೊಲೀಸ್ ಠಾಣೆಗೆ ಬಂದ ಖಚಿತ ಮಾಹಿತಿಯಂತೆ, ಲಾರಿಯಲ್ಲಿ ಮೈಸೂರಿನ ಲಷ್ಕರ್ ಮೊಹಲ್ಲಾ ನಿವಾಸಿ ಜಾಬೀರ್ ಎಂಬಾತ ಇತರರೊಂದಿಗೆ ಸೇರಿ ಪಡಿತರ ಚೀಟಿದಾರರಿಗೆ ವಿತರಣೆ ಮಾಡುವ 150 ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಯಥೇಚ್ಛ ಪ್ರಮಾಣದಲ್ಲಿ ದಾಸ್ತಾನು ಮಾಡಿಟ್ಟಿದ್ದ ಎಂಬುದೂ ತಿಳಿದುಬಂದಿದೆ.
ಅನ್ನಭಾಗ್ಯಕ್ಕೆ ಅನುದಾನ ಕಡಿತ; ಏಪ್ರಿಲ್ನಿಂದ 5 ಕೆ.ಜಿ. ಅಕ್ಕಿ ಮಾತ್ರ
ಅಕ್ಕಿಮೂಟೆಗಳನ್ನು ದಾಸ್ತಾನು ಮಾಡಲು ಅನುಮತಿ ಪಡೆದಿರುವ ಏಜೆನ್ಸಿ ಅಥವಾ ಉಗ್ರಾಣದ ಸರ್ಕಾರಿ ನೌಕರರು ಅಥವಾ ಮಧ್ಯವರ್ತಿಗಳು ಕೂಡ ಈ ಅಕ್ರಮ ಸಾಗಾಟದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಸ್ವಂತ ಲಾಭಕ್ಕಾಗಿ ಅಕ್ಕಿ ಮೂಟೆಗಳನ್ನು ಲಾರಿಗೆ ತುಂಬಿಸಿಕೊಂಡು ಕೆ.ಎಸ್.ಆರ್.ರಸ್ತೆ ಮೂಲಕ ಅಕ್ರಮವಾಗಿ ಮಂಡ್ಯ ನಗರಕ್ಕೆ ಸಾಗಣೆ ಮಾಡುವಾಗ ಸಿಕ್ಕಿಬಿದ್ದಿದ್ದು, ಲಾರಿಯಲ್ಲಿನ ಒಟ್ಟು 15,060 ಕೆ.ಜಿ. ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಸಾಗಣೆ ಮಾಡುತ್ತಿದ್ದ ಲಷ್ಕರ್ ಮೊಹಲ್ಲಾ ನಿವಾಸಿ ಜಾಬೀರ್ ಷರೀಫ್ ಮತ್ತು ಮೈಸೂರು ತಿಲಕ್ ನಗರ ನಿವಾಸಿ ರಾಜು ಬಿನ್ ಲೇಟ್ ಮಾದಪ್ಪ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.