ಮಾವುತರಿಗಾಗಿ ತೆರೆಯಲಾದ ಪಂಚಕರ್ಮ ಚಿಕಿತ್ಸಾ ಕೇಂದ್ರದತ್ತ ಮುಗಿಬಿದ್ದ ಪ್ರವಾಸಿಗರು
ಮೈಸೂರು, ಸೆಪ್ಟೆಂಬರ್.19: ನಾಡಹಬ್ಬ ದಸರೆಗೆ ಇನ್ನು 21 ದಿನ ಬಾಕಿಯಿದ್ದು, ಜಂಬೂ ಸವಾರಿ ನಡೆಸುವ ಮಾವುತರು, ಕಾವಾಡಿಗಳಿಗೆ ಮತ್ತು ಅವರ ಕುಟುಂಬದವರಿಗೆ ಏನಾದರೂ ಅನಾರೋಗ್ಯ ಕಂಡುಬಂದರೆ ಆಯುರ್ವೇದ ಗಿಡಮೂಲಿಕೆಯ ಚಿಕಿತ್ಸೆಯನ್ನೇ ನೀಡಲಾಗುತ್ತದೆ.
ಈ ನಿಟ್ಟಿನಲ್ಲಿ ಗಜಪಡೆಯೊಂದಿಗೆ ಆಗಮಿಸಿರುವ ಅರಣ್ಯ ವಾಸಿಗಳ ಆರೋಗ್ಯ ರಕ್ಷಣೆಗೆ ಆಯುಷ್ ಇಲಾಖೆಯ ಪಂಚಕರ್ಮ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದೆ. ಈ ಕೇಂದ್ರದಲ್ಲಿ ಮಾವುತರು, ಕಾವಾಡಿಗಳಿಗೆ ಮಸಾಜ್ ಸೌಲಭ್ಯವೂ ಕಲ್ಪಿಸಲಾಗಿದೆ.
ಅಲ್ಲದೇ ಬಿದ್ದು ಕಾಲು, ಕೈ ಉಳುಕಿಸಿಕೊಂಡರೆ, ಕತ್ತು ಉಳುಕಿದರೆ ಮಸಾಜ್ ಮಾಡುವ ಮೂಲಕ ಸರಿ ಮಾಡಲಾಗುತ್ತಿದೆ. ಇದಕ್ಕಾಗಿ ಸ್ಟೀಮ್ ಬಾಕ್ಸ್, ಮಸಾಜ್ ಗೆ ಮಂಚವನ್ನೂ ಸಹ ಕೇಂದ್ರದಲ್ಲಿ ಇಡಲಾಗಿದೆ. ಪ್ರತಿದಿನ ಒಬ್ಬ ಮಹಿಳಾ ಹಾಗೂ ಪುರುಷ ಥೆರಪಿಸ್ಟ್ ಗಳೊಂದಿಗೆ ಒಬ್ಬರು ವೈದ್ಯರು ಚಿಕಿತ್ಸೆ ನೀಡುತ್ತಾರೆ.

ಕಳೆದ ಏಳು ವರ್ಷಗಳಿಂದ ಅರಮನೆ ಅಂಗಳದಲ್ಲಿ ಚಿಕಿತ್ಸಾ ಕೇಂದ್ರ ತೆರೆಯುತ್ತಾ ಬಂದಿರುವ ಆಯುಷ್ ಇಲಾಖೆ, ಈ ಬಾರಿ ಅರಮನೆ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗೂ ಚಿಕಿತ್ಸೆಯನ್ನು ವಿಸ್ತರಿಸಿದೆ.
ಅರಮನೆ ವೀಕ್ಷಣೆಗೆ ಬರುವ ಪ್ರವಾಸಿಗರು ಕೂಡ ಚಿಕಿತ್ಸಾ ಕೇಂದ್ರಕ್ಕೆ ಮುಗಿಬೀಳುತ್ತಿದ್ದು, ತಮ್ಮ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರೊಂದಿಗೆ ಆಯುರ್ವೇದ ಔಷಧಿಗಳನ್ನು ಖರೀದಿಸುತ್ತಿದ್ದಾರೆ. ಕಳೆದ ಬಾರಿ ಒಂದೂವರೆ ತಿಂಗಳುಗಳ ಕಾಲ ತೆರೆದಿದ್ದ ಕೇಂದ್ರದಲ್ಲಿ 700 ಹೆಚ್ಚು ಮಂದಿ ಚಿಕಿತ್ಸೆ ಪಡೆದಿದ್ದರು ಎನ್ನುತ್ತಾರೆ ಅಧಿಕಾರಿಗಳು.
ಚಿಕಿತ್ಸಾ ಶಿಬಿರದಲ್ಲಿ ಅಭ್ಯಂಗ, ಮಹಾನಾರಾಯಣ, ಕ್ಷೀರ ತೈಲ, ಹೆಡ್ ಮಸಾಜ್, ಹರಿಷ್ಟಗಳು, ಸ್ನೇಹ ಪಾನ ಸೇರಿದಂತೆ ವಿವಿಧ ಆಯುರ್ವೇದ ಗಿಡಮೂಲಿಕೆಗಳಿಂದ ತಯಾರಿಸಿರುವ ದ್ರಾವಣ, ಚೂರ್ಣ, ಪೌಡರ್ ಔಷಧಗಳನ್ನು ನೀಡಲಾಗುತ್ತಿದೆ.

ಚರ್ಮರೋಗ , ಸಂಧಿವಾತ , ಜ್ವರ , ಕೆಮ್ಮು , ಶ್ವಾಸಕೋಶದ ಸಮಸ್ಯೆಗಳು , ಮಂಡಿನೋವು , ಬೆನ್ನು ನೋವು , ಸ್ತ್ರೀ ರೋಗ ಸೇರಿದಂತೆ ನಾನಾ ಆರೋಗ್ಯ ಸಮಸ್ಯೆಗಳಿಗೆ ಪಂಚಕರ್ಮ ಮತ್ತು ಆಯುರ್ವೇದದ ಮೂಲಕ ಚಿಕಿತ್ಸೆ ಸಹ ನೀಡಲಾಗುತ್ತಿದೆ.












Click it and Unblock the Notifications