ಕಬಿನಿ ಹಿನ್ನೀರಿನಲ್ಲಿ ಹುಲಿ ಸಂಶಯಾಸ್ಪದ ಸಾವು, ಅರಣ್ಯ ಇಲಾಖೆ ತನಿಖೆ
ಎಚ್.ಡಿ.ಕೋಟೆ, ಆಗಸ್ಟ್ 01: ಹುಲಿಯೊಂದು ಸಂಶಯಾಸ್ಪದವಾಗಿ ಸಾವನ್ನಪ್ಪಿರುವುದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಅಂತರಸಂತೆ ವನ್ಯ ಜೀವಿ ವಲಯದ ಕಾಡಂಚಿನ ಎನ್. ಬೆಳತ್ತೂರು ಗ್ರಾಮದ ಹಳೆ ಕಾರಾಪುರ ರಸ್ತೆಯ ಕಬಿನಿ ಹಿನ್ನೀರಿನಲ್ಲಿ ಬೆಳಕಿಗೆ ಬಂದಿದೆ.
ಸುಮಾರು ನಾಲ್ಕೂವರೆ ವರ್ಷ ಪ್ರಾಯದ ಹೆಣ್ಣು ಹುಲಿ ಸಾವನ್ನಪ್ಪಿದ್ದು ಇದು ಕಳೆದ ಎರಡು ದಿನಗಳ ಹಿಂದೆ ಮೃತ ಪಟ್ಟಿರಬಹುದು ಎಂದು ಹೇಳಲಾಗುತ್ತಿದ್ದು ಹುಲಿಯ ಮೃತ ದೇಹ ನೀರಿನಲ್ಲಿದ್ದುದರಿಂದ ಊದಿದೆ.
ಕಬಿನಿ ಹಿನ್ನೀರಿನಲ್ಲಿ ತೇಲಿ ಬಂದ ಹುಲಿ ದೇಹವನ್ನು ನೋಡಿದ ಗ್ರಾಮಸ್ಥರು ಅಂತರಸಂತೆ ವನ್ಯ ಜೀವಿ ವಲಯದ ಅರಣ್ಯಾಧಿಕಾರಿ ವಿನಯ್ ರವರಿಗೆ ಮಾಹಿತಿ ನೀಡಿದ್ದು ಕೂಡಲೇ ಇಲಾಖೆಯ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವೈದ್ಯ ಡಾ. ಮುಜೀಬ್ ಅವರು ಮರಣೋತ್ತರ ಪರೀಕ್ಷೆ ನಡೆಸಿದರು.

ಹುಲಿಯ ಮೃತ ದೇಹದಿಂದ ಕೆಲವು ಅಂಗಾಂಗಳನ್ನು ತೆಗೆದುಕೊಂಡಿದ್ದು ಹೆಚ್ಚಿನ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ ಹುಲಿ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಲಾಗಿದೆ.
ಸ್ಥಳಕ್ಕೆ ಮುಖ್ಯ ಸಂರಕ್ಷಣಾಧಿಕಾರಿ ರವಿಚಂದ್ರನ್, ಅಂತರಸಂತೆ ವಲಯದ ಪ್ರಭಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಾಲ್ ಅಂತೋನಿ, ಎಸ್ಟಿಪಿಎಪ್ನ ಎಸಿಎಪ್ ಪರಮೇಶ್, ಹೆಡಿಯಾಲ ವನ್ಯ ಜೀವಿ ವಲಯದ ಎಸಿಎಪ್ ಪರಮೇಶ್, ಅರಣ್ಯಾಧಿಕಾರಿ ವಿನಯ್, ಧರ್ಮೆಶ್, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ರಾಜ್ಕುಮಾರ್ ಭೇಟಿ ನೀಡಿದ್ದರು.











Click it and Unblock the Notifications