ನಾಗರಹೊಳೆಯಲ್ಲಿ ಬೇಟೆ ಕಲಿತ ತಬ್ಬಲಿ ಹುಲಿ ಮರಿಗಳು!
ಮೈಸೂರು, ನವೆಂಬರ್ 17; ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ಸಮಯದಲ್ಲಿ ಪ್ರವಾಸಿಗರಿಗೆ ಮೂರು ಮರಿಯೊಂದಿಗೆ ನೋಡಲು ಸಿಗುತ್ತಿದ್ದ ಹೆಣ್ಣು ಹುಲಿ ಸಾವಿನ ಬಳಿಕ ಅದರ ಮೂರು ಮರಿಗಳಿಗೆ ಅರಣ್ಯ ಇಲಾಖೆ ಸಾಕಾನೆಗಳ ಸಹಾಯದಿಂದ ಹುಡುಕಾಟ ನಡೆಸುತ್ತಿದೆ. ಆದರೆ ಈ ನಡುವೆ ಸಿಸಿ ಕ್ಯಾಮರಾದಲ್ಲಿ ಮೂರು ಮರಿಗಳು ಪತ್ತೆಯಾಗಿದ್ದಲ್ಲದೆ, ಅವು ಬೇಟೆಯಾಡಿ ಮಾಂಸ ತಿನ್ನುತ್ತಿರುವ ದೃಶ್ಯ ಕಂಡು ಬಂದಿರುವುದು ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗೆ ನೆಮ್ಮದಿ ತಂದಿದೆ.
ನಾಗರಹೊಳೆಯಲ್ಲಿ ಕಾಣೆಯಾಗಿದ್ದ ಮೂರು ಹುಲಿ ಮರಿಗಳು ಪತ್ತೆ: ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಹೆಣ್ಣು ಹುಲಿ ಉರುಳಿಗೆ ಸಿಲುಕಿ ಸಾವನ್ನಪ್ಪಿತ್ತು. ಹೀಗಾಗಿ ಇದರ ಸುಮಾರು ಆರು ತಿಂಗಳ ಮೂರು ಮರಿಗಳು ಹೇಗಿದ್ದಾವೆ? ಎಂಬುದು ಚಿಂತೆಯಾಗಿತ್ತು. ಅವುಗಳನ್ನು ಪತ್ತೆ ಹಚ್ಚಿ ರಕ್ಷಿಸುವ ಕಾರ್ಯವನ್ನು ಕಳೆದ ಕೆಲವು ದಿನಗಳ ಹಿಂದೆಯೇ ಅರಣ್ಯ ಇಲಾಖೆ ಆರಂಭಿಸಲಾಗಿತ್ತು. ಇದೀಗ ಮರಿಗಳು ಕ್ಯಾಮರಾದಲ್ಲಿ ಸೆರೆಯಾಗಿರುವ ಹಿನ್ನಲೆಯಲ್ಲಿ ಅವುಗಳು ಸುರಕ್ಷಿತವಾಗಿವೆ ಎಂಬುದು ಗೊತ್ತಾಗಿದೆ.
Bandipur Tiger Reserve : ರಾಜ್ಯದಲ್ಲೇ ಬಂಡೀಪುರ ಉತ್ತಮ ಹುಲಿ ಸಂರಕ್ಷಿತ ವಲಯ
ಹಾಗೆ ನೋಡಿದರೆ ತಾಯಿ ಸಾವಿನಿಂದ ಮಕ್ಕಳು ಆಹಾರವಿಲ್ಲದೆ ಸಾಯುವುದು ವನ್ಯಪ್ರಾಣಿಗಳಲ್ಲಿ ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅದರಲ್ಲೂ ಹುಲಿಯಂತಹ ಪ್ರಾಣಿಗಳು ಮನುಷ್ಯನ ದುರಾಸೆಗೆ ಸಾವನ್ನಪ್ಪುತ್ತಿರುವುದು ಬೇಸರದ ಸಂಗತಿಯಾಗಿದೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಜತೆಗೆ ಸಫಾರಿಗೆ ತೆರಳುವ ಪ್ರವಾಸಿಗರ ಕಣ್ಣಿಗೂ ಬೀಳುತ್ತಿವೆ. ಅದರಲ್ಲೂ ಈಗಾಗಲೇ ಸಾವನ್ನಪ್ಪಿರುವ ಹೆಣ್ಣು ಹುಲಿ ತನ್ನ ಮೂರು ಮರಿಗಳೊಂದಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಾಕನಕೋಟೆ ಸಫಾರಿಯ ವೇಳೆ ನಾಯಂಜಿಕಟ್ಟೆ ಎಂಬ ಕೆರೆ ಬಳಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿತ್ತು.
ನಾಗರಹೊಳೆಯಲ್ಲಿ ಮೂರು ಹುಲಿ ಮರಿಗಳಿಗಾಗಿ ಅರಣ್ಯ ಇಲಾಖೆಯಿಂದ ಹುಡುಕಾಟ
ಬೇಟೆಗಾರರ ಕುಕೃತ್ಯಕ್ಕೆ ಹುಲಿ ಬಲಿ
ಕಾಕನಕೋಟೆ ಸಫಾರಿಗೆ ಆಗಮಿಸುವ ಬಹುತೇಕ ಪ್ರವಾಸಿಗರ ನೆಚ್ಚಿನ ಹುಲಿಯಾಗಿದ್ದ ಈ ಹೆಣ್ಣು ಹುಲಿಯನ್ನು ನಾಯಂಜಿಕಟ್ಟೆ ಫೀಮೇಲ್ ಎಂದೇ ಗುರುತಿಸಲಾಗಿತ್ತು. ತಾರಕ ಹಿನ್ನೀರಿನ ಅರಣ್ಯ ಪ್ರದೇಶದಲ್ಲೇ ತನ್ನ ನೆಲೆಯನ್ನು ಹೊಂದಿದ್ದ ಈ ಹುಲಿ ಇತ್ತೀಚಿಗೆ ತಾರಕ ಸಮೀಪವೇ ಮರಿಗಳೊಂದಿಗೆ ಕಾಡಿನಿಂದ ಹೊರಬಂದ ವೇಳೆ ಕಳ್ಳಬೇಟೆಗಾರರ ಕುಕೃತ್ಯಕ್ಕೆ ಬಲಿಯಾಗಿತ್ತು. ಅಮ್ಮನ ಕಳೆದುಕೊಂಡ ಮೂರು ಮರಿಗಳ ರಕ್ಷಣೆ ಅರಣ್ಯ ಇಲಾಖೆಗೆ ಸವಾಲು ಆಗಿದ್ದವು. ಆದರೆ ಅವು ಬೇಟೆಯಾಡಿ ಆಹಾರ ತಿನ್ನಲು ಕಲಿಯುತ್ತಿರುವುದು ಅರಣ್ಯ ಇಲಾಖೆಗೆ ನೆಮ್ಮದಿ ತಂದಿದೆ.
ಹಿಂದೆಯೂ ಇಂತಹ ಘಟನೆ ನಡೆದಿತ್ತು
ಹಾಗೆ ನೋಡಿದರೆ ತಾಯಿಯನ್ನು ಕಳೆದುಕೊಂಡು ಮರಿಗಳು ಆಹಾರವಿಲ್ಲದೆ ಸಾವನ್ನಪ್ಪಿರುವ ಪ್ರಕರಣ ಈ ಹಿಂದೆಯೂ ನಡೆದಿದೆ. 2012ರಲ್ಲಿ ನಾಗರಹೊಳೆಯ ಮೇಟಿಕುಪ್ಪೆ ಸಮೀಪವು ಸಹ ಹುಲಿಯೊಂದು ಹೊರಬಂದು ಉಪಟಳ ನೀಡುತ್ತಿದೆ ಎಂಬ ಕಾರಣಕ್ಕೆ ಆ ಹುಲಿಯನ್ನು ಸೆರೆ ಹಿಡಿಯಲಾಗಿತ್ತು. ಈ ವೇಳೆ ಅನಾಥವಾಗಿದ್ದ ಮರಿಗಳು ಸಾವನ್ನಪ್ಪಿರುವುದರ ಬಗ್ಗೆ ವರದಿಯಾಗಿತ್ತು. 2015-16ರಲ್ಲಿಯೂ ಸಹ ನಾಗರಹೊಳೆಯಲ್ಲೇ ಕಾಡುಹಂದಿಯ ಮುಳ್ಳುಗಳು ಚುಚ್ಚಿ ಕುತ್ತಿಗೆ ಮತ್ತು ಕಾಲುಗಳಿಗೆ ಗಾಯಗೊಂಡಿದ್ದ ಹುಲಿಯೊಂದು ಮೃತಪಟ್ಟಿದ್ದು, ಅದರ ಮರಿಗಳು ರಕ್ಷಣೆ ಸಿಗದೇ ಹಸಿವಿನಿಂದ ಬಳಲಿ ಸಾವನ್ನಪ್ಪಿದ್ದವು.
ಹಸಿವಿನಿಂದ ಸಾವನ್ನಪ್ಪಿದ್ದ ಹುಲಿ ಮರಿಗಳು
2016ರಲ್ಲಿ ನಾಗರಹೊಳೆಯ ವ್ಯಾಪ್ತಿಯ ಕಬಿನಿ ಹಿನ್ನೀರಿನ ಸಮೀಪ ಕಾಡಿನಿಂದ ಹೊರಬಂದ ಹುಲಿಯನ್ನು ಸೆರೆಹಿಡಿಯುವ ವೇಳೆ ಹುಲಿಯೂ ಮೃತಪಟ್ಟಿದ್ದು, ಬಳಿಕ ಅದರ ಮರಿಗಳು ಮತ್ತೊಂದು ಹುಲಿಯೊಡನೆ ಕಾಣಿಸಿತ್ತು. ಅಷ್ಟೇ ಅಲ್ಲದೇ 2021ರ ಮೇ ನಲ್ಲಿ ಬಂಡೀಪುರ ಅರಣ್ಯದ ನುಗು ವ್ಯಾಪ್ತಿಯಲ್ಲಿಯೂ ಸಹ ಹುಲಿಯೊಂದು ತನ್ನ ಮರಿಗಳನ್ನು ಪೊದೆಯೊಂದರಲ್ಲಿ ಬಿಟ್ಟು ಬಳಿಕ ನಾಪತ್ತೆಯಾಗಿತ್ತು. ಈ ವೇಳೆ ಅನೇಕ ದಿನಗಳ ಕಾಲ ಹಸಿವಿನಿಂದ ಬಳಲಿದ ಹುಲಿ ಮರಿಗಳನ್ನು ಅರಣ್ಯ ಇಲಾಖೆ ಕೂಡಲೇ ರಕ್ಷಣೆಗೆ ಮುಂದಾಗಿತ್ತು. ರಕ್ಷಿಸುವ ವೇಳೆ ಎರಡು ಮರಿಗಳು ಮೃತಪಟ್ಟಿದ್ದು, ಒಂದನ್ನು ರಕ್ಷಿಸಲಾಗಿದೆ.
ಮರಿಗಳನ್ನು ಗಂಡು ಹುಲಿ ಪೋಷಿಸಿತ್ತು
ರಾಜಸ್ಥಾನದಲ್ಲಿ ಹಿಂದೊಮ್ಮೆ ತಾಯಿ ಹುಲಿ ಮೃತಪಟ್ಟ ಸಂದರ್ಭದಲ್ಲಿ ಜಲೀಮ್ ಎಂಬ ಗಂಡುಹುಲಿಯೇ 2 ಅನಾಥ ಮರಿಗಳನ್ನು ಸಾಕಿದ ಘಟನೆ ನಡೆದಿತ್ತು. 2018ರಲ್ಲಿ ಮಹರಾಷ್ಟ್ರದ ತಿಪ್ಪೇಶ್ವರ ಎಂಬ ಅರಣ್ಯದಲ್ಲಿ ಆನ್ವಿ ಎಂಬ ಹೆಣ್ಣುಹುಲಿ ಮನುಷ್ಯನ ಜೀವಕ್ಕೆ ಅಪಾಯವಾದ ನಂತರ ಅದನ್ನು ಗುಂಡಿಕ್ಕಿ ಕೊಂದ ಬಳಿಕ ಅದರ ಮರಿಗಳು ಅನಾಥವಾಗಿದ್ದವು. ಮಧ್ಯಪ್ರದೇಶದ ಪನ್ನ ರಾಷ್ಟ್ರೀಯ ಉದ್ಯಾನವನದಲ್ಲಿ 2021ರ ಮೇ ತಿಂಗಳಲ್ಲಿ ತಾಯಿ ಹುಲಿಯೊಂದು ಮೃತಪಟ್ಟ ಬಳಿಕ ಟಿ-243 ಎಂಬ ಗಂಡು ಹುಲಿ 4 ಮರಿಗಳಿಗೆ ಆಹಾರವನ್ನು ಪೂರೈಕೆ ಮಾಡಿ ನೋಡಿಕೊಂಡ ಬಗ್ಗೆ, 2022ರಲ್ಲಿ ಮಧ್ಯಪ್ರದೇಶದ ಸಂಜಯ್ ದುಬ್ರಿ ಅರಣ್ಯದಲ್ಲಿಯೂ ಸಹ ಟಿ-18 ಎಂಬ ಹೆಣ್ಣು ಹುಲಿ ರೈಲಿಗೆ ಸಿಲುಕಿ ಸಾವನ್ನಪ್ಪಿದ ನಂತರ ಅದೇ ಅದರ ಕುಟುಂಬಕ್ಕೆ ಸೇರಿದ ಮೌಸಿ ಎಂಬ ಹುಲಿ ತನ್ನ 4 ಮರಿಗಳೊಂದಿಗೆ ಟಿ-18ನ 3 ಮರಿಗಳನ್ನು ಪೋಷಿಸಿತ್ತು.
ಹುಲಿ ಮರಿಗಳ ಹುಡುಕಾಟ ಹೇಗಿತ್ತು?
ಇದೀಗ ತಾಯಿಯನ್ನು ಕಳೆದುಕೊಂಡ ಮರಿಗಳ ಪತ್ತೆಗಾಗಿ 130 ಅರಣ್ಯ ಇಲಾಖೆ ಸಿಬ್ಬಂದಿ, ಸಾಕಾನೆಗಳ ಮೂಲಕ ಪತ್ತೆಕಾರ್ಯ ಆರಂಭಿಸಿದ್ದರು. 30 ಟ್ರ್ಯಾಪಿಂಗ್ ಕ್ಯಾಮರಾ ಮತ್ತು 2 ಡ್ರೋನ್ ಬಳಸಿ ಹುಡುಕಾಟ ನಡೆಸಿದ ವೇಳೆ ಜಿಂಕೆಯ ಕಳೇಬರದ ಬಳಿ ಬಂದು ಮಾಂಸ ತಿನ್ನುತ್ತಿರುವುದು ಪತ್ತೆಯಾಗಿದೆ. ಹೀಗಾಗಿ ಅರಣ್ಯ ಇಲಾಖೆ ನೆಮ್ಮದಿಯುಸಿರು ಬಿಟ್ಟಿದೆ.