ಮೈಸೂರಿನಲ್ಲಿ ಕುಡಿತ ಪ್ರಶ್ನಿಸಿದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ; ಮೂವರ ಬಂಧನ
ಮೈಸೂರು, ಜೂನ್ 01: ರಸ್ತೆ ಬದಿಯಲ್ಲೇ ಮದ್ಯಪಾನ ಮಾಡುತ್ತಿದ್ದ ಮೂವರನ್ನು ಪ್ರಶ್ನಿಸಿದ ಕಾರಣಕ್ಕೆ ಪೊಲೀಸ್ ಕಾನ್ಸ್ಟೆಬಲ್ ಒಬ್ಬರನ್ನು ನಿಂದಿಸಿ ಹಲ್ಲೆ ನಡೆಸಿದ ಘಟನೆ ಸರಸ್ವತಿಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.
ಬಂಧಿತರನ್ನು ಕೆ.ಜಿ.ಕೊಪ್ಪಲಿನ ನಿವಾಸಿ ಮಹೇಶ್, ಜಯನಗರದ ನಿವಾಸಿ ಹೇಮ್ ಕುಮಾರ್, ಶ್ರೀರಾಂಪುರ ನಿವಾಸಿ ದರ್ಶನ್ ಎಂದು ಗುರುತಿಸಲಾಗಿದೆ. ಇವರು ಶನಿವಾರ ರಾತ್ರಿ 9ರ ಸಮಯದಲ್ಲಿ ಟಿಟಿಎಲ್ ಕಾಲೇಜ್ ಬಳಿ ಕುಳಿತು ಮದ್ಯಪಾನ ಮಾಡುತ್ತಿದ್ದರು. ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸ್ ಸಿಬ್ಬಂದಿ ಇವರನ್ನು ಕಂಡು, ಲಾಕ್ ಡೌನ್ ಸಂದರ್ಭದಲ್ಲಿ 7 ಗಂಟೆ ನಂತರ ರಸ್ತೆಯಲ್ಲಿ ಯಾರೂ ಇರಬಾರದು, ಸೆಕ್ಷನ್ ಜಾರಿಯಲ್ಲಿರುವುದು ತಿಳಿದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಆ ಸಂದರ್ಭ ಕರ್ತವ್ಯ ನಿರತ ಪೊಲೀಸ್ ಮಹದೇವ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೂ ಪ್ರಯತ್ನಿಸಿದ್ದಾರೆ.

ಸಬ್ ಇನ್ಸಪೆಕ್ಟರ್ ಭವ್ಯ ಮತ್ತು ಮಹದೇವ್ ಈ ಮೂವರನ್ನು ಬಂಧಿಸಿ ಠಾಣೆಗೆ ಕರೆದು ತಂದಿದ್ದಾರೆ. ಠಾಣೆಯಲ್ಲಿ ಕೂಡ ಮೂವರು ರಂಪಾಟ ನಡೆಸಿದ್ದರು. ಬಳಿಕ ಮೂವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications