ಅರಮನೆ ಆವರಣದಲ್ಲೇ ಶ್ರೀಗಂಧದ ಮ್ಯೂಸಿಯಂಗೆ ಚಿಂತನೆ: ಎಸ್.ಟಿ ಸೋಮಶೇಖರ್
ಮೈಸೂರು, ನವೆಂಬರ್ 9: ಮೈಸೂರು ಅರಮನೆ ಆವರಣದಲ್ಲೇ ಶ್ರೀಗಂಧದ ಮ್ಯೂಸಿಯಂ ಮಾಡಿದರೆ ಸಾರ್ವಜನಿಕರ ವೀಕ್ಷಣೆಗೆ ಅನುಕೂಲವಾಗಲಿದೆ ಎಂಬ ಚಿಂತನೆ ಇದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಸೋಮವಾರ ಅರಣ್ಯ ಭವನದಲ್ಲಿರುವ ಶ್ರೀಗಂಧದ ವಸ್ತು ಸಂಗ್ರಹಾಲಯ ವೀಕ್ಷಣೆ ನಡೆಸಿ ಮಾತನಾಡಿದ ಅವರು, ನವೆಂಬರ್ 24 ಅಥವಾ 25 ರಂದು ಶ್ರೀಗಂಧದ ಮ್ಯೂಸಿಯಂಗೆ ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಉದ್ಘಾಟನೆಗೆ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಇತ್ತೀಚೆಗೆ ರೈತರಿಗೆ ಕೂಡ ಶ್ರೀಗಂಧ ಬೆಳೆಯಲು ಅನುಮತಿ ನೀಡಿದ್ದಾರೆ. ಹೇಗೆ ಬೆಳೆಯಬೇಕು, ಏನು ಮಾಡಬೇಕೆಂದು ರೈತರಿಗೆ ಕೂಡ ತರಬೇತಿ ನೀಡಲಾಗುತ್ತಿದೆ ಎಂದರು.

ರಾಜರಾಜೇಶ್ವರಿ ನಗರ ನಮ್ಮ ಪಕ್ಕದ ವಿಧಾನಸಭಾ ಕ್ಷೇತ್ರ ಆಗಿದ್ದು, ನಾನೇ ಉಸ್ತುವಾರಿಯಾಗಿ 10 ದಿನ ಕೆಲಸ ಮಾಡಿದ್ದೇನೆ. ಜನರ ನಾಡಿಮಿಡಿತ ಗಮನಿಸಿದ್ದೇನೆ. ಮುನಿರತ್ನ ಒಳ್ಳೆಯ ಕೆಲಸ ಮಾಡಿದ್ದಾರೆ ಎನ್ನುವುದು ಎಲ್ಲರಲ್ಲಿಯೂ ಇದೆ. ಶೇ.೧೦೦ ಅತ್ಯಧಿಕ ಮತದಿಂದ ನಾವು ಗೆಲ್ಲುತ್ತೇವೆ ಎಂದು ತಿಳಿಸಿದರು.
ಪಕ್ಷದ ಆಂತರಿಕ ಸಮೀಕ್ಷೆ ಪ್ರಕಾರವೇ ಮುನಿರತ್ನ ಮತ್ತು ಶಿರಾ ಅಭ್ಯರ್ಥಿ ರಾಜೇಶ್ ಗೌಡ ಗೆಲ್ಲುತ್ತಾರೆ ಎಂದ ಸಚಿವ ಎಸ್.ಟಿ ಸೋಮಶೇಖರ್, ನಾವೇ ಖುದ್ದಾಗಿ ಪ್ರಚಾರ ಮಾಡಿರುವುದರಿಂದ ಪ್ರತಿ ನಾಡಿಮಿಡಿತ ಗೊತ್ತಿದೆ, ಅದಕ್ಕೆ ಹೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಎಂಟಿಬಿ ನಾಗರಾಜ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಬಗ್ಗೆ ಕೇಳಿದ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾವು ಈಗ ಅದರ ಬಗ್ಗೆ ಮಾತಾಡಲ್ಲ, ಅದು ಮುಖ್ಯಮಂತ್ರಿಗೆ ಬಿಟ್ಟಿದ್ದು, ಅವರಿಗೆ ಪರಮಾಧಿಕಾರ ಇರೋದು. ನಾವು ಹೇಳಬಹುದು, ಕ್ಯಾಬಿನೆಟ್ ಸೇರ್ಪಡೆ ಅಧಿಕಾರ ಸಿಎಂ ಅವರಿಗಿರುತ್ತದೆ ಎಂದರು.

ಸಿಎಂ ಬದಲಾವಣೆ ಕುರಿತು ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಮಾತಾಡಿದ ಸಚಿವ ಸೋಮಶೇಖರ್, ""ಸಿದ್ದರಾಮಯ್ಯರನ್ನು ತೆಗಿಬೇಕು ಅಂತ ಡಿ.ಕೆ ಶಿವಕುಮಾರ್, ಡಿ.ಕೆ ಶಿವಕುಮಾರ್ ತೆಗಿಬೇಕು ಅಂತ ಸಿದ್ದರಾಮಯ್ಯ, ಒಳಗೊಳಗೆ ತಂತ್ರಗಾರಿಕೆ ನಡೆಸಿದ್ದಾರೆ'' ಎಂದು ತಿರುಗೇಟು ನೀಡಿದರು.
ಈ ವಿಷಯ ಹೊರಬರದಂತೆ ಮರೆಮಾಚಲು ಇದನ್ನು ಹೇಳುತ್ತಿದ್ದಾರೆ. ನಮ್ಮ ಪಕ್ಷದ ತೀರ್ಮಾನ ನಾವು ಮಾಡುತ್ತೇವೆ. ಅವರನ್ನು ಬದಲಾವಣೆ ಮಾಡಬೇಕು ಅಂತ ಹೊರಟಿರುವವರು ತಮ್ಮ ಸ್ಥಾನ ಉಳಿಸಿಕೊಳ್ಳಲಿ. ನೂರಕ್ಕೆ ನೂರು ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಯಾವ ಅಪರೇಷನ್ ಗೂ ಮುಂದಾಗಿಲ್ಲ, ಪಕ್ಷದಿಂದ ಹೋಗೋರು ಹೋಗ್ತಾರೆ, ಬರೋರು ಬರ್ತಾರೆ. ಡಿಕೆಶಿ ಪಕ್ಷದಲ್ಲಿ ಬಿಟ್ಟು ಹೊರಗಡೆ ಹೋಗ್ತಾರಲ್ಲ. ಅವರನ್ನು ಅಪರೇಷನ್ ಮಾಡಿ ಸೇಫ್ ಆಗಿ ಇಟ್ಟುಕೊಳ್ಳಲಿ ಎಂದು ಸಚಿವ ಸೋಮಶೇಖರ್ ಸಲಹೆ ನೀಡಿದರು.












Click it and Unblock the Notifications