ಗಬ್ಬೆದ್ದು ನಾರುತ್ತಿದೆ ಮೈಸೂರಿನ ತಾಲೂಕು ಕೇಂದ್ರಗಳು!
ರಸ್ತೆಬದಿಯಲ್ಲಿ ಕಸ ಸುರಿಯುವುದನ್ನು ತಡೆಯಲು ಸಾಧ್ಯವಿಲ್ಲವೆ?
ಮೈಸೂರು: ಮೈಸೂರನ್ನು ಸ್ವಚ್ಛನಗರವಾಗಿಸುವ ಕಾರ್ಯಗಳು ಪ್ರಗತಿಯಲ್ಲಿದ್ದು, ಮಹಾನಗರಪಾಲಿಕೆ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಆದರೂ ನಗರದ ಹಲವೆಡೆ ಕಸದ ರಾಶಿಗಳು ಕಣ್ಣಿಗೆ ರಾಚುತ್ತವೆ.
vಇನ್ನು ಮೈಸೂರು ಜಿಲ್ಲೆಯಾದ್ಯಂತ ಸಂಚರಿಸಿದರೆ ತಾಲೂಕು ಕೇಂದ್ರಗಳು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಬದಿಯಲ್ಲಿ ಕಸಗಳು ಬಿದ್ದಿರುವುದನ್ನು ನೋಡಿದರೆ ಸ್ವಚ್ಛತಾ ಅಭಿಯಾನದ ಅರಿವು ಇವರಿಗೆ ಬಂದಿಲ್ಲವೇನೋ ಎಂಬಂತೆ ಭಾಸವಾಗುತ್ತದೆ. ರಸ್ತೆ ಬದಿಗಳಲ್ಲಿ ಬಿದ್ದಿರುವ ಕಸದ ರಾಶಿಗಳು. ಎಲ್ಲೆಂದರಲ್ಲಿ ಹಾರಾಡುವ ಪ್ಲಾಸ್ಟಿಕ್ ಕವರ್ಗಳು, ಗಾಜು ಇನ್ನಿತರ ವಸ್ತುಗಳು, ತ್ಯಾಜ್ಯವಸ್ತುಗಳ ದುರ್ವಾಸನೆ ಮೂಗಿಗೆ ಬಡಿಯುತ್ತಿರುತ್ತದೆ.

ಮೈಸೂರು ಕುಶಾಲನಗರ ರಸ್ತೆಯಲ್ಲಿ ತೆರಳಿದರೆ ಹುಣಸೂರು, ಪಿರಿಯಾಪಟ್ಟಣ ತಾಲೂಕಿನ ಹಲವೆಡೆ ದಾರಿಯುದ್ದಕ್ಕೂ ಹರಡಿ ಬಿದ್ದಿರುವ ಕಸಗಳು ಮತ್ತು ತ್ಯಾಜ್ಯ ವಸ್ತುಗಳು ಕಣ್ಣಿಗೆ ರಾಚುವುದರೊಂದಿಗೆ ಮೂಗಿಗೆ ದುರ್ವಾಸನೆ ಬಡಿದು ಮೂಗು ಮುಚ್ಚಿ ಕುಳಿತುಕೊಳ್ಳುವಂತೆ ಮಾಡಿಬಿಡುತ್ತದೆ.
ಇನ್ನು ಪಿರಿಯಾಪಟ್ಟಣ ತಾಲೂಕಿನ ಪರಿಸ್ಥಿತಿಯಂತು ಹೇಳುವಂತೆಯೇ ಇಲ್ಲ. ರಸ್ತೆ ಬದಿಯಲ್ಲಿ ತ್ಯಾಜ್ಯ ವಸ್ತುಗಳು ಹಾಗೂ ಕೊಳಿ ತ್ಯಾಜ್ಯಗಳನ್ನು ಹಾಕುತ್ತಿರುವ ಪರಿಣಾಮ ಸ್ಥಳೀಯರು ನಿತ್ಯವೂ ಮೂಗು ಮುಚ್ಚಿಕೊಂಡು ತಿರುಗುತ್ತಿದ್ದಾರೆ. ಪಟ್ಟಣದಾದ್ಯಂತ ರಸ್ತೆ ಬದಿಗಳಲ್ಲಿ ತ್ಯಾಜ್ಯ ವಸ್ತುಗಳ ರಾಶಿ ಗಬ್ಬೆದು ನಾರುತ್ತಿದೆ. ಅಲ್ಲದೆ ಕೋಳಿಯ ತ್ಯಾಜ್ಯಗಳನ್ನು ತಿನ್ನಲು ಬೀದಿ ನಾಯಿಗಳು ಮುಗಿ ಬೀಳುತ್ತವೆ.

ಇನ್ನು ಪಿರಿಯಾಪಟ್ಟಣದ ಗೊಣಿಕೊಪ್ಪ ರಸ್ತೆಯಲ್ಲಿನ ಕ್ರಿಶ್ಚಿಯನ್ ಸಮುದಾಯದ ಸ್ಮಶಾನದ ಪಕ್ಕದಲ್ಲಿ ಹಲವು ತಿಂಗಳುಗಳ ಕಾಲ ತ್ಯಾಜ್ಯ ವಸ್ತು ಶೇಖರಣೆಗೊಳ್ಳುತ್ತವೆ. ಈ ಮಾರ್ಗವಾಗಿ ಅನೇಕ ಗ್ರಾಮಗಳ ಗ್ರಾಮಸ್ಥರು ಸಾಗುತ್ತಾರೆ ಮತ್ತು ಮುಂಜಾನೆಯಲ್ಲಿ ಬಹಳಷ್ಟು ಮಂದಿ ವಾಯುವಿಹಾರಕ್ಕೆ ತೆರಳುತ್ತಾರೆ. ಈ ತ್ಯಾಜ್ಯಗಳಿಂದ ಬರುವ ದುರ್ವಾಸನೆ ಎಲ್ಲರ ಆರೋಗ್ಯವನ್ನು ಹಾಳು ಮಾಡುತ್ತಿದೆ. ಇಲ್ಲಿ ಸದಾ ನಾಯಿಗಳು ಬೀಡು ಬಿಟ್ಟು ತ್ಯಾಜ್ಯಕ್ಕಾಗಿ ಕಚ್ಚಾಡುವುದರಿಂದ ತಮ್ಮ ಮೇಲೆ ಎಲ್ಲಿ ಎರಗಿ ಬಿಡುತ್ತವೆಯೇನೋ ಎಂಬ ಭಯದಲ್ಲಿ ಜನ ನಡೆದಾಡಬೇಕಾಗಿದೆ.
ಈ ರಸ್ತೆಯ ಮಾರ್ಗದಲ್ಲಿರುವ ಕಲ್ಯಾಣ ಮಂಟಪ, ಕೋಳಿ ಮಾಂಸದ ಅಂಗಡಿಗಳ ಮಾಲೀಕರುಗಳು ಇಲ್ಲಿ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದು, ಇದರಿಂದಲೇ ಪರಿಸರ ಹಾಳಾಗುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.
ಇನ್ನು ಬೈಲುಕುಪ್ಪೆಯಲ್ಲಿ ರಸ್ತೆ ಬದಿಯಲ್ಲಿಯೇ ಕಸ ರಾಶಿ ರಾಶಿಯಾಗಿ ಬೀಳುತ್ತಿದ್ದರೂ ಗ್ರಾಮಪಂಚಾಯಿತಿ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಸ್ವಚ್ಛಗೊಳಿಸಲು ಕೂಡ ಮುಂದಾಗುತ್ತಿಲ್ಲ. ಇದರಿಂದ ಪರಿಸರ ಹಾಳಾಗುತ್ತಿದೆ. ಇದೇ ರಸ್ತೆಯಲ್ಲಿಯೇ ಸಚಿವರು, ಸಂಸದರು ತೆರಳುತ್ತಿದ್ದರೂ ಅತ್ತ ಗಮನಹರಿಸಿದಂತೆ ಕಾಣುತ್ತಿಲ್ಲ. ಇನ್ನಾದರೂ ರಸ್ತೆ ಬದಿಯಲ್ಲಿ ಕಸ ಹಾಕಿ ವಾತಾವರಣವನ್ನು ಮಲಿನಗೊಳಿಸುವುದನ್ನು ಸ್ಥಳೀಯ ಪಂಚಾಯಿತಿ ಆಡಳಿತಗಳು ತಡೆಯಬೇಕಾಗಿದೆ. ಇಲ್ಲದೆ ಹೋದರೆ ಸ್ವಚ್ಛತಾ ಅಭಿಯಾನಗಳು ಕೇವಲ ಕಾಟಚಾರಕ್ಕೆ ಎಂಬಂತಾಗಿ ಬಿಡುತ್ತದೆ.












Click it and Unblock the Notifications