ಮೈಸೂರು ಜಿಲ್ಲೆಯಲ್ಲಿ ಈ ಬಾರಿ ಹೊಸ ವರ್ಷಾಚರಣೆ ಇಲ್ಲ
ಮೈಸೂರು, ಡಿಸೆಂಬರ್ 24: ಕೊರೊನಾ ವೈರಸ್ ಕಾರಣದಿಂದ ಮೈಸೂರು ಜಿಲ್ಲೆಯಲ್ಲಿ ಈ ಬಾರಿ ಹೊಸ ವರ್ಷಾಚರಣೆ ಇಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಅರಮನೆ ದೀಪಾಲಂಕಾರ, ಬಾಣಬಿರುಸು ಪ್ರದರ್ಶನವೂ ಇರುವುದಿಲ್ಲ. ಕೊರೊನಾ ವೈರಸ್ ರೂಪಾಂತರದ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸಿದೆ ಎಂದು ತಿಳಿಸಿದರು.
ಬ್ರಿಟನ್ನಿಂದ ಮೈಸೂರಿಗೆ 137 ಜನ ಆಗಮನ; ಎಲ್ಲರಿಗೂ ಕೋವಿಡ್ ಪರೀಕ್ಷೆ: ಡಿಸಿ ರೋಹಿಣಿ ಸಿಂಧೂರಿ
ಹೊಸ ವರ್ಷದ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದ್ದು, ಹೊಸ ವರ್ಷದ ದಿನ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ ಬಗ್ಗೆ ಚಿಂತನೆ ಮಾಡುತ್ತೇವೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಾಹಿತಿ ನೀಡಿದರು.
ಮೈಸೂರು ಅರಮನೆಯಲ್ಲಿ ಫಲಪುಷ್ಪ ಪ್ರದರ್ಶನವನ್ನು ರದ್ದು ಮಾಡಲಾಗಿದ್ದು, ಉಳಿದ ಕಾರ್ಯಕ್ರಮಗಳ ಬಗ್ಗೆಯೂ ಎಚ್ಚರ ವಹಿಸಿದ್ದೇವೆ. ಶುಕ್ರವಾರ ಏಕಾದಶಿ ಇರುವುದರಿಂದ ದೇವಾಲಯ ಮುಚ್ಚಲು ಆದೇಶ ನೀಡಲು ಸಾಧ್ಯವಿಲ್ಲವೆಂದರು.
ಕೋವಿಡ್ ನಿಯಮ ಪಾಲಿಸಿ ಭಕ್ತರ ದರ್ಶನಕ್ಕೆ ಅವಕಾಶ ಕೊಡುವಂತೆ ಸೂಚಿಸುತ್ತೇವೆ. ರೂಪಾಂತರಗೊಂಡ ವೈರಸ್ ವಿಚಾರವಾಗಿ, ಬ್ರಿಟನ್ನಿಂದ ಬಂದವರ ಮಾಹಿತಿ ಪತ್ತೆಯಾಗಿದೆ. 137 ಮಂದಿ ಬ್ರಿಟನ್ನಿಂದ ಬಂದಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಡಿ.21ರಂದು 18 ಮಂದಿ ಆಗಮಿಸಿದ್ದು, ಆ 18 ಜನರ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಉಳಿದ 119 ಮಂದಿಯ ಪರೀಕ್ಷೆಯನ್ನು ಮಾಡುತ್ತಿದ್ದೇವೆ. ಹೊಸ ವೈರಸ್ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗುತ್ತಿಲ್ಲ ಎಂದು ಮಾಹಿತಿ ನೀಡಿದರು.
ಕೊರೊನಾ ವೈರಸ್ ಹರಡುವಿಕೆ ಪ್ರಮಾಣ ಹೆಚ್ಚಿದೆ ಅಂತಷ್ಟೆ ಗೊತ್ತಾಗಿದೆ. ಇದಕ್ಕಾಗಿ ಜಿಲ್ಲಾಡಳಿತ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮೈಸೂರಿನಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.