ಸಂಪುಟ ವಿಸ್ತರಣೆಯಾದರೆ ಸ್ಫೋಟ ಗ್ಯಾರಂಟಿ ಎಂದ ಸಿದ್ದು
ಮೈಸೂರು, ಜನವರಿ 20: "ಸಂಪುಟ ವಿಸ್ತರಣೆಯಾದರೆ ಸರ್ಕಾರದಲ್ಲಿ ಸ್ಫೋಟವಾಗುತ್ತದೆ" ಎಂದು ಹೊಸ ಬಾಂಬ್ ಸಿಡಿಸಿದ್ದಾರೆ ಮಾಜಿ ಸಿಎಂ ಸಿದ್ದರಾಮಯ್ಯ. ಮೈಸೂರಿನಲ್ಲಿ ಮಾತನಾಡಿದ ಅವರು, "ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಮಂತ್ರಿ ಸ್ಥಾನ ಕೊಡಲ್ಲ. ಮಂತ್ರಿ ಸ್ಥಾನ ಕೊಡದಿದ್ದರೆ ನೋಡಿಕೊಳ್ಳಿ ಅಂತ ಈಗಾಗಲೇ ವಿಶ್ವನಾಥ್ ಹೇಳಿದ್ದಾರೆ. ಮುಂದೆ ನೀವೇ ನೋಡಿ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
"ರಾಜ್ಯದಲ್ಲಿ ಸರ್ಕಾರ ಎನ್ನುವುದು ಇದೆಯೇ? ಮೈತ್ರಿ ಸರ್ಕಾರ ನಂತರ ಈ ಸರ್ಕಾರ ಬಂದು 6 ತಿಂಗಳಾಗಿದೆ. ಅಂದಿನಿಂದ ಸರ್ಕಾರವೇ ಇಲ್ಲ. ಇವರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಇನ್ನೂ ಮಂತ್ರಿಮಂಡಲ ರಚನೆಯಾಗಿಲ್ಲ. ಇಲ್ಲದ ಸರ್ಕಾರಕ್ಕೆ ಸರ್ಕಾರ ಟೇಕಾಫ್ ಆಗ್ತಾ ಇದೆ ಅಂತ ಹೇಳಲು ಆಗಲ್ಲ" ಎಂದಿದ್ದಾರೆ.
"ಸಿಎಎ ಜಾರಿಗೊಳಿಸಲು ಗವರ್ನರ್ ಗೆ ಪರಮಾಧಿಕಾರ ಇಲ್ಲ. ಚುನಾವಣೆ ವ್ಯವಸ್ಥೆಗಿಂತ ಯಾರೂ ದೊಡ್ಡವರಲ್ಲ. ಅವರು ಕೇಂದ್ರದಿಂದ ನೇಮಕವಾದವರು. ದೇಶದ 13 ರಾಜ್ಯಗಳು ಇದನ್ನು ವಿರೋಧ ಮಾಡಿದೆ. ಎನ್ ಡಿ.ಎ ಮಿತ್ರ ಪಕ್ಷಗಳೇ ವಿರೋಧ ಮಾಡುತ್ತಿವೆ" ಎಂದು ಟೀಕಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ನೇಮಕಾತಿ: ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಬೇಗ ನೇಮಕವಾಗಲಿ ಅಂತ ನಾನು ಹೈಕಮಾಂಡ್ ಗೆ ಹೇಳುತ್ತೇನೆ. ಹಾಗಂತ ಯಾರು ನೇಮಕವಾಗಬೇಕು ಎಂದು ಸಾರ್ವಜನಿಕವಾಗಿ ಹೇಳಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.
ಇದೇ ಸಂದರ್ಭ ಉಪಚುನಾವಣೆಯಲ್ಲಿ ಗೆದ್ದವರ ಬಗ್ಗೆಯೂ ಮಾತನಾಡಿದ ಅವರು, "ಉಪಚುನಾವಣೆಯಲ್ಲಿ ಗೆದ್ದವರ ಸ್ಥಿತಿ ಅಂತರ್ ಪಿಶಾಚಿಗಳಂತೆ. ಇದೀಗ ಅವರು ಅಂತರ್ ಪಿಶಾಚಿಗಳಾಗಿದ್ದಾರೆ. ಅಮಿತ್ ಶಾ ಅವರ ಭೇಟಿಗೂ ಅವಕಾಶ ಕೊಟ್ಟಿಲ್ಲ" ಎಂದು ಮೂದಲಿಸಿದ್ದಾರೆ.












Click it and Unblock the Notifications