Covid Outbreak in India : ದೇಶದಲ್ಲಿ 3 ತಿಂಗಳೊಳಗೆ ಕೊರೊನಾ ಉಲ್ಬಣ ಸಾಧ್ಯತೆ: ಡಾ.ಸಿ.ಎನ್.ಮಂಜುನಾಥ್ ಸಲಹೆ
ಮೈಸೂರು, ಡಿಸೆಂಬರ್ 22: ಇನ್ನು ಮೂರು ತಿಂಗಳ ಅವಧಿಯೊಳಗೆ ದೇಶದಲ್ಲಿ ಮತ್ತೆ ಕೊರೊನಾ ಉಲ್ಬಣವಾಗುವ ಸಾಧ್ಯತೆ ಇದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.
ಮೈಸೂರು ತಾಲೂಕಿನ ಸುತ್ತೂರಿನಲ್ಲಿ ನಡೆದ ಶ್ರೀ ಆದಿಜಗದ್ಗುರು ಶಿವರಾತ್ರಿ ಶಿವಯೋಗಿಗಳವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ ಚೀನಾ, ಆಸ್ಟ್ರೇಲಿಯಾ, ಬ್ರೆಜಿಲ್ ಹಾಗೂ ಅಮೆರಿಕ ಇನ್ನಿತರ ದೇಶಗಳಲ್ಲಿ ಕೊರೊನಾ ರೋಗ ಹರಡುವಿಕೆ ಉಲ್ಬಣಗೊಂಡಿದ್ದು, ಮುಂಬರುವ ದಿನಗಳಲ್ಲಿ ನಮ್ಮಲ್ಲೂ ಸೋಂಕು ಹರಡುವ ಭೀತಿ ಹೆಚ್ಚಾಗಿದೆ. ಜನರು ಈಗಿನಿಂದಲೇ ಎಚ್ಚರಿಕೆ ವಹಿಸುವ ಜೊತೆಗೆ ಕೊರೊನಾ ಮೂರನೇ ಡೋಸ್ ತೆಗೆದುಕೊಳ್ಳುವ ಮೂಲಕ ಸಾಂಕ್ರಾಮಿಕ ರೋಗ ನಿಯಂತ್ರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ಸದ್ಯ ಮಾಸ್ಕ್ ನಮ್ಮ ಬಾಳಿನ ಸಂಗಾತಿ ಎಂಬ ಅರಿವು ಅವಶ್ಯಕ. ಚೀನಾದಲ್ಲಿ ಲಸಿಕೆ ನೀಡಿಕೆ ಪರಿಣಾಮಕಾರಿಯಾಗಿಲ್ಲ. ಆದರೆ, ನಮ್ಮ ದೇಶದಲ್ಲಿ ಶೇ.95 ಪ್ರಮಾಣದಲ್ಲಿ ಒಂದು ಮತ್ತು ಎರಡನೇ ಕೊರೊನಾ ಲಸಿಕೆ ನೀಡಲಾಗಿದೆ. ಮೂರನೇ ಡೋಸ್ ತೆಗೆದುಕೊಳ್ಳುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಮುಂಬರುವ ದಿನಗಳಲ್ಲಿ ಕ್ರಿಸ್ಮಸ್ ಹಾಗೂ ಹೊಸವರ್ಷ ಎದುರಾಗುವುದರಿಂದ ಜನರು ಗುಂಪುಗುಂಪಾಗಿ ಸೇರಲಿದ್ದಾರೆ. ಈ ಸಂದರ್ಭ ಆರೋಗ್ಯದ ದೃಷ್ಟಿಯಿಂದ ಕೊರೊನಾ ಮಾರ್ಗಸೂಚಿ ಪಾಲನೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಇನ್ನು ದೇಶದಲ್ಲಿ ಪದವೀಧರರು ಹಾಗೂ ಬುದ್ಧಿವಂತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಅದೇ ರೀತಿ ಹೃದಯವಂತರ ಸಂಖ್ಯೆಯೂ ಹೆಚ್ಚಾಗಬೇಕಿದೆ. ಯಾವುದೇ ಒಳಿತನ್ನು ಮಾಡಲು ಬಹುದೊಡ್ಡ ಹುದ್ದೆಗಳೇ ಬೇಕಿಲ್ಲ. ಸಣ್ಣಪುಟ್ಟ ಕೆಲಸ ಕಾರ್ಯಗಳಲ್ಲೂ ಸಮಾಜಕ್ಕೆ ಒಳಿತನ್ನುಂಟು ಮಾಡಬಹುದಾಗಿದೆ. ಇಂತಹ ಕಾರ್ಯಗಳನ್ನು ಕೈಗೊಳ್ಳಲು ಪವಿತ್ರವಾದ ಮನಸ್ಸು ಹಾಗೂ ಹೃದಯ ವೈಶಾಲ್ಯತೆ ಬೇಕಾಗುತ್ತದೆ. ಇದಕ್ಕೆ ಪೂರಕ ವಾತಾವರಣವನ್ನು ಸುತ್ತೂರು ಸಂಸ್ಥೆಯವರು ಸಮಾಜಕ್ಕೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠಾಧ್ಯಕ್ಷ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಮಕೃಷ್ಣಾಶ್ರಮದ ಶ್ರೀ ಮುಕ್ತಿದಾನಂದಜಿ ಸೇರಿದಂತೆ ನಾನಾ ಮಠಾಧೀಶರು ಉಪಸ್ಥಿತರಿದ್ದರು.












Click it and Unblock the Notifications