ಮೈಸೂರು ದಸರಾ ಸಮಯದಲ್ಲಿ ಕಿಲಾಡಿ ಕಳ್ಳರು ಕದ್ದಿದ್ದು ಅಷ್ಟಿಷ್ಟಲ್ಲ!
ಮೈಸೂರು, ಅಕ್ಟೋಬರ್. 22: ಅತ್ತ ಆಯುಧಪೂಜೆ ಹಾಗೂ ವಿಜಯದಶಮಿ ಸಂಭ್ರಮ ಮೈಸೂರಿನ ಎಲ್ಲೆಡೆ ಮನೆಮಾಡಿದ್ದರೆ ಇತ್ತ ಕಳ್ಳರು ತಮ್ಮ ಕೈ ಚಳಕ ಮುಂದುವರೆಸಿದ್ದರು. ಈ ಬಗ್ಗೆ ಇದೀಗ ಮೈಸೂರು ದೇವರಾಜ ಠಾಣೆಯಲ್ಲಿ ಹಾಗೂ ಕೆ.ಆರ್.ಠಾಣೆಯಲ್ಲಿ ಹಲವು ಕಳವು ಪ್ರಕರಣಗಳು ದಾಖಲಾಗಿವೆ.
ಬೆಂಗಳೂರಿನ ಮಲ್ಲಿಕಾ ಎಂಬುವವರು ಅ. 18ರಂದು ಬೆಂಗಳೂರಿನಿಂದ ಮೈಸೂರಿಗೆ ರೈಲಿನಲ್ಲಿ ಬಂದು, ರೈಲು ನಿಲ್ದಾಣದ ಬಳಿಯ ಬಸ್ನಿಲ್ದಾಣದಲ್ಲಿ ಬಸ್ ಹತ್ತಿ ನಗರ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ.
ಈ ವೇಳೆ ಅವರ ವ್ಯಾನಿಟಿ ಬ್ಯಾಗಿನ ಜಿಪ್ ತೆರೆದಿದ್ದು, ಅದರಲ್ಲಿದ್ದ 45 ಗ್ರಾಂ ತೂಕದ ಅವಲಕ್ಕಿ ಚೈನು, ಬಿಳಿ ಹರಳಿನ ಲಕ್ಷ್ಮಿ ಡಾಲರ್ ಇರುವ 35 ಗ್ರಾಂ ತೂಕದ ಪದಕ, 5.5 ಗ್ರಾಂ ತೂಕದ 3 ಉಂಗುರ, 6 ಗ್ರಾಂ ತೂಕದ ಒಂದು ಉಂಗುರ, 2 ಗ್ರಾಂ ತೂಕದ ಗುಂಡು, 2 ಗ್ರಾಂ ತೂಕದ ಮಾಟಿ ಸೇರಿ 106.5 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ.
ಈ ಕುರಿತು ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಗಲಿನಲ್ಲೇ ಮೊಬೈಲ್ ಕಸಿದ ಕಳ್ಳ
ಶಿವರಾಜು ಎಂಬುವವರು ಅರಮನೆಯ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಅ.20ರಂದು ಮಧ್ಯಾಹ್ನ ಮೊಬೈಲ್ನಲ್ಲಿ ಮಾತನಾಡಿಕೊಂಡು ತೆರಳುತ್ತಿದ್ದಾಗ ಹಿಂದಿನಿಂದ ಬಂದ ಕಳ್ಳನೊಬ್ಬ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಪ್ರಕರಣ ದೇವರಾಜ ಠಾಣೆಯಲ್ಲಿ ದಾಖಲಾಗಿದೆ.
ಇನ್ನೊಂದು ಘಟನೆಯಲ್ಲಿ ರಿಶಿತಾ ಜುನೇಜಾ ಎಂಬುವವರು ಅ.19ರಂದು ಸಂಜೆ ಆಯುರ್ವೇದಿಕ್ ವೃತ್ತದಲ್ಲಿ ಜಂಬೂ ಸವಾರಿ ಮೆರವಣಿಗೆ ವೀಕ್ಷಣೆ ಮಾಡುತ್ತಿದ್ದಾಗ ಅವರ ಪರ್ಸ್ ನಲ್ಲಿದ್ದ ಮೊಬೈಲ್ ಕಳುವಾಗಿದೆ. ಈ ಪ್ರಕರಣ ಕೂಡ ದೇವರಾಜ ಠಾಣೆಯಲ್ಲಿ ದಾಖಲಾಗಿದೆ.
ಚಾಮುಂಡಿಬೆಟ್ಟಕ್ಕೆ ಚಾಮುಂಡೇಶ್ವರಿ ತಾಯಿಯ ದರ್ಶನಕ್ಕೆ ತೆರಳಿದ್ದ ನವೀನ್ ಎಂಬುವವರಿಗೆ ಸೇರಿದ ಹಣ ಹಾಗೂ ಮೊಬೈಲ್ ಕಳುವಾಗಿದೆ. ಅವರು ಅ.19 ರಂದು ತಮ್ಮ ಸೋದರಿ ಪ್ರಭಾವತಿ ಮತ್ತು ಅವರ ಪುತ್ರಿ ತನುಜಾ ಅವರೊಂದಿಗೆ ಬೆಟ್ಟಕ್ಕೆ ಬಂದಿದ್ದು, ದೇವರ ದರ್ಶನದ ಬಳಿಕ ವಾಪಸ್ ತೆರಳಲು ಬೆಟ್ಟದ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಬ್ಯಾಗಿನಲ್ಲಿದ್ದ 2 ಸಾವಿರ ಹಣ ಮತ್ತು ಮೊಬೈಲ್ ಕಳವಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಕೆ.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications