ಮೈಸೂರಿನ ಮದುವೆಯೊಂದರಲ್ಲಿ ಫಲತಾಂಬೂಲ ಬದಲು ಮೀನು!
ಮೈಸೂರು, ಡಿಸೆಂಬರ್, 9 : ವಿವಾಹದ ಸಂದರ್ಭದಲ್ಲಿ ಫಲತಾಂಬೂಲಕ್ಕೆ ಹಣ್ಣು, ತೆಂಗಿನಕಾಯಿ ನೀಡುವುದು ಸರ್ವೇ ಸಾಮಾನ್ಯ. ಇದರ ಬದಲಿಗೆ ಮೀನು ನೀಡಿದರೆ ಹೇಗಿರುತ್ತೆ ಯೋಚಿಸಿ.
ಅರೇ ಇದೇನಿದು ಅಂತಿರಾ ..ಇಂತಹದೊಂದು ಸಾಮಾಜಿಕ ಕಳಕಳಿಯನ್ನು ನಗರದ ಸೋಮಶೇಖರ ಗೌಡ ತಮ್ಮ ಮಗಳ ಮದುವೆಯಲ್ಲಿ ಪ್ರದರ್ಶಿಸಿದ್ದಾರೆ. ಗುರುವಾರ ತಮ್ಮ ಮಗಳ ಮದುವೆಗೆ ಬಂದ ಅತಿಥಿಗಳಿಗೆ ಫಲ ತಾಂಬೂಲದಲ್ಲಿ 5 ಹೆಣ್ಣು ಮತ್ತು 5 ಗಂಡು ಗುಪ್ಪೆ ಮೀನುಗಳನ್ನು ನೀಡಿದ್ದಾರೆ.
ಈಗಿನ ದಿನಮಾನಗಳಲ್ಲಿ ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತರಲು ಈ ರೀತಿಯ ನಿರ್ದಾರವನ್ನು ಕೈಗೊಳ್ಳಲಾಗಿದೆ. ನಮ್ಮ ಮಗಳ ಮದುವೆ ಇತರರಿಗೆ ಮಾದರಿಯಾಗಬೇಕೆಂಬುವುದೇ ನಮ್ಮ ಆಶಯ ಎನ್ನುತ್ತಾರೆ ಸೋಮಶೇಖರಗೌಡ.

ಇನ್ನು ಕೆಲವೇ ದಿನಗಳಲ್ಲಿ ಮೀನುಗಳ ಸಂತಾನವು ದ್ವಿಗುಣಗೊಳ್ಳುವುದು ಅವುಗಳನ್ನೇ ಇನ್ನೊಬ್ಬರಿಗೆ ನೀಡುವಂತಹ ಕಾಯಕ ಎಲ್ಲರದ್ದಾಗಬೇಕು ಎನ್ನುವ ಇವರ ಕಾರ್ಯ ಶ್ಲಾಘನೀಯ.
ಇನ್ನು ಇವರು ನೀಡಿರುವ ಮೀನುಗಳಿಗೆ ಗಪ್ಪೆ ಮೀನುಗಳೆನ್ನುತ್ತಾರೆ. ಇವುಗಳನ್ನು ಮನೆಯಲ್ಲಿನ ಸಿಮೆಂಟಿನ ತೊಟ್ಟಿಯಲ್ಲಿ ಸಾಕುವುದರಿಂದ ಸೊಳ್ಳೆಗಳು ನಿರ್ಮೂಲನೆ ಹೊಂದುತ್ತವೆ ಎಂದು ಸಂಶೋಧಕರು ಹೇಳುತ್ತಾರೆ.

ಬಹುತೇಕ ಡೆಂಘೀ, ಚಿಕೂನ್ ಗುನ್ಯ, ಮಲೇರಿಯಾ ಸೇರಿದಂತೆ ಭಯಾನಕ ಕಾಯಿಲೆ ಹರಡುವ ಸೊಳ್ಳೆಗಳು ಮೊಟ್ಟೆ ಇಡುತ್ತವೆ. ಶುದ್ಧ ನೀರಿನಲ್ಲಿ ಅಂತಹ ಮೊಟ್ಟೆಗಳನ್ನು ಮೀನುಗಳು ನಾಶ ಮಾಡುವುದರಿಂದ ಸೊಳ್ಳೆ ಸಂತತಿ ಬೆಳೆಯುವುದಿಲ್ಲ.
ಇದೊಂದು ಪರಿಣಾಮಕಾರಿ ಪ್ರಯೋಗವಾಗಿದ್ದು ಈಗಾಗಲೇ ದೇಶ ವಿದೇಶದಲ್ಲಿ ಪ್ರಸಿದ್ಧವಾಗಿದೆ ಎನ್ನುತ್ತಾರೆ ಸೋಮಶೇಖರ್.
ಮೈಸೂರಿನ ಮಮತಾ ಹಾಗೂ ರಾಮನಗರ ಜಿಲ್ಲೆ ಹುಚ್ಚಯ್ಯನ ದೊಡ್ಡಿ ರವಿಕುಮಾರ್ ನವ ಜೋಡಿಗಳಗಿದ್ದು. ಮಮತಾ ತಂದೆ ಸೋಮಶೇಖರ್ ಗೌಡ ಹೊಸ ಆಲೋಚನೆಗಳೊಂದಿಗೆ ತಮ್ಮ ಮಗಳ ಮದುವೆ ಮಾಡಿದ್ದು, ಮದುವೆ ಬಂದ ಅತಿಥಿಗಳಿಗೆ ಮೀನುಗಳನ್ನು ವಿತರಿಸಿದರು.
ಒಟ್ಟಾರೆ ಆಡಂಬರ ಮದುವೆಯ ಈ ಯುಗದಲ್ಲಿ ಇಂತಹ ಮದುವೆಗಳು ಬೆರಳೆಣಿಕೆಯಂತಹವು. ಅದರಲ್ಲೂ ಇಂತಹ ಮದುವೆಗಳ ಸಂತತಿ ಸಾವಿರವಾಗಲಿ ಎಂಬುದು ನಮ್ಮ ಅಭಿಲಾಷೆ.. ಆಲ್ ದಿ ಬೆಸ್ಟ್ ಸೋಮಶೇಖರ್ ಗೌಡ ಹ್ಯಾಪಿ ಮ್ಯಾರೀಡ್ ಲೈಫ್ ಟು ರವಿಕುಮಾರ್ ಅಂಡ್ ಮಮತಾ..












Click it and Unblock the Notifications