ಮೈಸೂರು: ಕೊನೆಗೂ ತೆರೆದ ಚಾಮುಂಡಿಬೆಟ್ಟದ ಪಾದದ ಬಾಗಿಲು
ಮೈಸೂರು, ಜೂನ್ 12: ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಬಾಗಿಲು ತೆರೆದಿದ್ದು, ಹಲವು ಮುಂಜಾಗ್ರತಾ ಕ್ರಮ ಮತ್ತು ನಿಬಂಧನೆಗಳೊಂದಿಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಆದರೆ ಪಾದದ ಬಳಿ ಗೇಟ್ ತೆರೆಯದಿರುವುದು ಗೊಂದಲಕ್ಕೆ ಕಾರಣವಾಗಿತ್ತು. ಆದರೆ ಕೊನೆಗೂ ಚಾಮುಂಡಿಬೆಟ್ಟದ ಮೆಟ್ಟಿಲು ಬಾಗಿಲನ್ನು ತೆರೆಯಲಾಗಿದ್ದು, ಇದರಿಂದ ಇಂದು ಮುಂಜಾನೆ ಭಕ್ತರು ಹಾಗೂ ಸಾರ್ವಜನಿಕರಿಗೆ ಮೆಟ್ಟಿಲೇರಲು ಅನುಕೂಲವಾಗಿದೆ.
Recommended Video
ಚಾಮುಂಡೇಶ್ವರಿ ದೇಗುಲದ ಬಾಗಿಲು ತೆರೆದು ಭಕ್ತರಿಗೆ ಅವಕಾಶ ಮಾಡಿಕೊಟ್ಟಿದ್ದರೂ, ಮೆಟ್ಟಿಲು ಬಳಿಯ ಗೇಟ್ನ್ನು ತೆರೆಯದ ಕಾರಣ, ಭಕ್ತರು ಹಾಗೂ ಮುಂಜಾನೆ ಮೆಟ್ಟಿಲೇರುತ್ತಿದ್ದ ನೂರಾರು ಮಂದಿಗೆ ತೊಂದರೆಯಾಗಿತ್ತು. ಈ ಕುರಿತು "ಒನ್ಇಂಡಿಯಾ ಕನ್ನಡ' ಸವಿಸ್ತಾರವಾದ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾಡಳಿತ, ಮುಚ್ಚಿದ್ದ ಮೆಟ್ಟಿಲು ಗೇಟ್ನ್ನು ಬುಧವಾರಿಂದ ತೆರೆದಿದೆ. ಇದರಿಂದ ಸಂತಸಗೊಂಡಿರುವ ಜನ ಯಾವುದೇ ತೊಂದರೆಯಿಲ್ಲದೆ ಮುಂಜಾನೆ 4.30 ರಿಂದಲೇ ಮೆಟ್ಟಿಲೇರುತ್ತಿದ್ದಾರೆ.

ಪಾದದ ಬಳಿ ಗೇಟ್ ತೆರೆಯದ ಕಾರಣ ನಿರಾಶೆಯಾಗಿತ್ತು
ಒಂದಷ್ಟು ನಿಬಂಧನೆಯೊಂದಿಗೆ ಜೂನ್ 8 ರಿಂದ ಚಾಮುಂಡೇಶ್ವರಿ ದೇವಾಲಯದ ಬಾಗಿಲು ತೆರೆಯಲು ಸರ್ಕಾರ ಅನುಮತಿ ನೀಡಿತ್ತು. ಆದರೆ ಪಾದದ ಮೂಲಕ ಮೆಟ್ಟಿಲು ಹತ್ತಿ ತಾಯಿಯ ದರ್ಶನ ಮಾಡುತ್ತೇವೆಂದು ಸಂಕಲ್ಪ ಮಾಡಿಕೊಂಡವರಿಗೆ ಪಾದದ ಬಳಿ ಗೇಟ್ ತೆರೆಯದ ಕಾರಣ ನಿರಾಶೆಯಾಗಿತ್ತು. ಇದರ ಜತೆಗೆ ಮುಂಜಾನೆ ಸಾವಿರ ಮೆಟ್ಟಿಲೇರುವ ಅಭ್ಯಾಸ ಮಾಡಿಕೊಂಡಿರುವ ಬಹಳಷ್ಟು ಮಂದಿ ಚಡಪಡಿಸುವಂತಾಗಿತ್ತು. ಬೇಲಿಯನ್ನು ಬದಿಗೆ ಸರಿಸಿ ಮೆಟ್ಟಿಲೇರುವ ಸಾಹಸವನ್ನು ಮಾಡಿದ ಕೆಲವರು, ಇಲ್ಲಿ ಪೊಲೀಸ್ ಕಾವಲು ಹಾಕಿದ್ದರೂ ಅದನ್ನು ಲೆಕ್ಕಿಸದೆ ಒಳಕ್ಕೆ ಹೋಗುತ್ತಿದ್ದರು. ಈ ವಿಚಾರದಲ್ಲಿ ಗೊಂದಲ ಏರ್ಪಟ್ಟಿತ್ತಲ್ಲದೆ, ಮೆಟ್ಟಿಲೇರಲು ಬಿಡದ ಪೊಲೀಸ್ ಸಿಬ್ಬಂದಿಗೆ ಜನ ಹಿಡಿಶಾಪ ಹಾಕಿಕೊಂಡು ಹಿಂತಿರುಗುತ್ತಿದ್ದ ದೃಶ್ಯವೂ ಕಂಡು ಬಂದಿತ್ತು.

ಈಗ ಎಲ್ಲರೂ ಖುಷಿಯಾಗಿ ಮೆಟ್ಟಿಲೇರಿ ಬರುತ್ತಿದ್ದಾರೆ
ಈ ವೇಳೆ ತಮ್ಮ ಅಳಲನ್ನು ತೋಡಿಕೊಂಡ ಜನತೆ, ಚಾಮುಂಡಿಬೆಟ್ಟದ ಮೆಟ್ಟಿಲೇರುವ ಅಭ್ಯಾಸವನ್ನು ಹಲವು ವರ್ಷಗಳಿಂದ ಮಾಡಿಕೊಂಡಿದ್ದು, ಇದು ನಮಗೆ ವ್ಯಾಯಾಮವಾಗಿದೆ. ಎಲ್ಲರೂ ಅವರ ಪಾಡಿಗೆ ಬಂದು ಹೋಗುತ್ತಾರೆ. ಇಲ್ಲಿ ಗೊಂದಲ, ತೊಂದರೆಯಿಲ್ಲ. ಆದರೂ ಬಾಗಿಲು ಹಾಕಿ ತೊಂದರೆ ಮಾಡಲಾಗಿದೆ ಎಂದಿದ್ದರು. ಕೊನೆಗೂ ಜನರ ಹಾಗೂ ಭಕ್ತರ ಒತ್ತಾಯಕ್ಕೆ ಮಣಿದು ಬಾಗಿಲು ತೆರೆದಿರುವುದರಿಂದ ಈಗ ಎಲ್ಲರೂ ಖುಷಿಯಾಗಿ ಮೆಟ್ಟಿಲೇರಿ ಬರುತ್ತಿದ್ದಾರೆ.

ವಾರಾಂತ್ಯದಲ್ಲಿ ಜಾಲಿ ಟ್ರಿಪ್ ಗಾಗಿ ಬರುವವರೇ ಜಾಸ್ತಿ
ಸಾಮಾನ್ಯವಾಗಿ ವಾರಾಂತ್ಯ ದಿನಗಳಾದ ಶನಿವಾರ ಮತ್ತು ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ. ಇದು ಆತಂಕಕ್ಕೆ ಕಾರಣವಾಗಿದೆ. ಜನರೇ ಇದನ್ನು ಅರಿತು ಗುಂಪು ಗುಂಪಾಗಿ ಬಾರದೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮೆಟ್ಟಿಲೇರಬೇಕಿದೆ.
ಇತರೆ ದಿನಗಳಲ್ಲಿ ಕೆಲವೇ ಕೆಲವರು ಮಾತ್ರ ಮೆಟ್ಟಿಲೇರಲು ಬರುತ್ತಾರೆ. ಅಷ್ಟೇ ಅಲ್ಲ ಅವರೆಲ್ಲರೂ ನಿತ್ಯವೂ ಬರುವವರಾಗಿದ್ದಾರೆ. ಆದರೆ ವಾರಾಂತ್ಯದಲ್ಲಿ ವ್ಯಾಯಾಮಕ್ಕೆಂದು ಬರುವವರಿಗಿಂತ ಜಾಲಿ ಟ್ರಿಪ್ ಗಾಗಿ ಬರುವವರೇ ಜಾಸ್ತಿ. ಹೀಗಾಗಿ ಒಂದಷ್ಟು ಎಚ್ಚರಿಕೆಯನ್ನು ವಹಿಸುವುದು ಅಷ್ಟೇ ಮುಖ್ಯವಾಗಿದೆ.

ಮಳೆಗೆ ಹಸಿರನ್ನೊದ್ದು ಸುಂದರವಾಗಿ ಕಂಗೊಳಿಸುತ್ತಿದೆ
ದೇವಾಲಯದ ಪ್ರವೇಶವನ್ನು ಭಕ್ತರಿಗೆ ಸೋಮವಾರದಿಂದ ಶುಕ್ರವಾರದ ವರೆಗೆ ಮಾತ್ರ ಮಾಡಿದ್ದು, ಶನಿವಾರ ಮತ್ತು ಭಾನುವಾರ ದೇವರ ದರ್ಶನಕ್ಕೆ ಅವಕಾಶವಿಲ್ಲ. ಹೀಗಾಗಿ ಇದೆರಡು ದಿನಗಳು ಭಕ್ತರಿಗಿಂತ ಹೆಚ್ಚಾಗಿ ವೀಕೆಂಡ್ ನ್ನು ಜಾಲಿಯಾಗಿ ಕಳೆಯಲು ಬರುವವರೇ ಜಾಸ್ತಿಯಿರುವುದಂತು ಖಚಿತ.
ಬೇಸಿಗೆಯಲ್ಲಿ ಬಿಸಿಲಿನ ಹೊಡೆತಕ್ಕೆ ಸಿಲುಕಿ ಬೋಳಾಗಿದ್ದ ಚಾಮುಂಡಿಬೆಟ್ಟ, ಇತ್ತೀಚೆಗೆ ಸುರಿದ ಮಳೆಗೆ ಹಸಿರನ್ನೊದ್ದು ಸುಂದರವಾಗಿ ಕಂಗೊಳಿಸುತ್ತಿದೆ. ಈ ಹಸಿರ ಸಿರಿಯಲ್ಲಿ ಮೆಟ್ಟಿಲೇರಿ ಸುತ್ತಲಿನ ದೃಶ್ಯವನ್ನು ಕಣ್ತುಂಬಿಸಿಕೊಂಡು ನಡೆಯುವುದು ಕಣ್ಣಿಗೊಂದು ಹಬ್ಬ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳ ಕಾಲ ಇತ್ತ ಬಾರದವರು, ಇದೀಗ ನಿಸರ್ಗ ಸೌಂದರ್ಯವನ್ನು ಸವಿಯುವ ಸಲುವಾಗಿಯೇ ಬರುವುದರಿಂದ ವೀಕೆಂಡ್ ದಿನಗಳಾದ ಶನಿವಾರ, ಭಾನುವಾರ ಜನಪ್ರವಾಹ ಏರ್ಪಟ್ಟರೂ ಅಚ್ಚರಿಯಿಲ್ಲ.












Click it and Unblock the Notifications