Breaking: ಮಂಗಳೂರಿನಲ್ಲಿ ಆಟೋರಿಕ್ಷಾ ಬ್ಲಾಸ್ಟ್, ಆರೋಪಿ ಪ್ರಕರಣಕ್ಕೆ ಮೈಸೂರಿನ ನಂಟು?
ಮೈಸೂರು, ನವೆಂಬರ್ 20: ಶನಿವಾರ ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಸ್ಫೋಟ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗುತ್ತಿದೆ. ಈ ಪ್ರಕರಣದ ತನಿಖೆ ವೇಳೆ ಮೈಸೂರಿನೊಂದಿಗೆ ನಂಟು ಬೆಸೆದುಕೊಂಡಿದೆ.
ಶನಿವಾರ ಮಂಗಳೂರು ನಾಗುರಿಯಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಸ್ಫೋಟ ಸಂಭವಿಸಿದೆ. ಲಘು ಸ್ಫೋಟ ಸಂಭವಿಸಿದ್ದು, ಇದು ಆಕಸ್ಮಿಕ ಘಟನೆಯಲ್ಲಿ, ಭಯೋತ್ಪಾದನೆ ಕೃತ್ಯ ಎಂಬುದು ಖತವಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಖಚಿತಪಡಿಸಿದ್ದಾರೆ.
Breaking : ಮಂಗಳೂರಿನಲ್ಲಿ ಸಂಚರಿಸುತ್ತಿದ್ದ ಆಟೋದಲ್ಲಿ ಸ್ಫೋಟ, ಇಬ್ಬರಿಗೆ ಗಾಯ
ಈ ಘಟನೆ ಆಕಸ್ಮಿಕವಾಗಿ ನಡೆದಿದ್ದಲ್ಲ. ಗಂಭೀರ ಹಾನಿ ಉಂಟು ಮಾಡುವ ಉದ್ದೇಶದಿಂದಲೇ ಈ ಕೃತ್ಯ ನಡೆಸಲಾಗಿದೆ. ರಾಜ್ಯದ ಪೊಲೀಸರು ಕೇಂದ್ರದ ತನಿಖಾ ಏಜೆನ್ಸಿಗಳ ಜೊತೆ ಸೇರಿ ಇದರ ಬಗ್ಗೆ ತನಿಖೆ ನಡೆಸುತ್ತಿವೆ" ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇದೀಗ ಈ ಆಘಾತಕಾರಿ ಘಟನೆಯಲ್ಲಿ ಗಾಯಗೊಂಡಿರುವ ಪ್ರೇಮ್ ರಾಜ್ ಕೊಣಗಿ ಮೈಸೂರಿನಲ್ಲಿ ನೆಲೆಸಿದ್ದ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ.
ಪ್ರೇಮ್ ರಾಜ್ ಮೈಸೂರಿನ ಲೋಕನಾಯಕ ನಗರದಲ್ಲಿ ವಾಸವಾಗಿದ್ದ. ಕೊಯಂಬತ್ತೂರಿನಿಂದ ಮೈಸೂರಿಗೆ ಬಂದು ನೆಲೆಸಿದ್ದ ಆತ 1800 ರೂ. ನೀಡಿ ಬಾಡಿಗೆ ರೂಂ ಪಡೆದಿದ್ದ. ಬಾಡಿಗೆ ರೂಮ್ ಪಡೆಯಲು ಈತ ಹುಬ್ಬಳ್ಳಿ ವಿಳಾಸ ಇರುವ ಆಧಾರ್ ಕಾರ್ಡ್ ತೋರಿಸಿದ್ದ ಎನ್ನಲಾಗಿದೆ.
ಪ್ರೇಮರಾಜ್ನಿಂದ ಅಸ್ಪಷ್ಟ ಮಾಹಿತಿ
ಇನ್ನು ಸ್ಫೋಟದಲ್ಲಿ ಗಾಯಗೊಂಡಿರುವ ಪ್ರೇಮರಾಜ್ ಗೊಂದಲಮಯ ಹೇಳಿಕೆ ನೀಡುತ್ತಿದ್ದಾರೆ. ಯಾವುದೋ ನಂಬರ್ ನೀಡಿ ಸಂಬಂಧಿ ಎಂದು ಹೇಳಿದ್ದಾನೆ, ಜೊತೆಗೆ ಹುಬ್ಬಳ್ಳಿ ವಿಳಾಸದ ಆಧಾರ್ ಕೋರ್ಡ್ ತೋರಿಸಿರುವ ಆತ ತಾನೂ ಮೈಸೂರಿನಿಂದ ಬಂದಿರುವುದಾಗಿ ತಿಳಿಸಿದ್ದಾನೆ. ಆದರೆ ಆತ ಕೊಟ್ಟ ನಂಬರ್ಗೆ ಕರೆ ಮಾಡಿದರೆ, ಮಾತನಾಡಿದ ವ್ಯಕ್ತಿ ಸಂಬಂಧಿಕನಲ್ಲ ಎಂದಿದ್ದಾನೆ. ಗೊಂದಲದಲ್ಲಿರುವ ಪೊಲೀಸರು ತಪಾಸಣೆಗಾಗಿ ವಿವಿಧ ಭಾಗಗಳಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರಿಗೆ ಎನ್ಐಎ ತಂಡ ಭೇಟಿ
ಮಂಗಳೂರಿನಲ್ಲಿ ನಡೆದಿರುವ ಸ್ಫೋಟ ಪ್ರಕರಣದ ತನಿಖೆಗಾಗಿ ಎನ್ಐಎ ತಂಡದ ಭಾನುವಾರ ಘಟನಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಸ್ಫೋಟ ನಡೆದ ದಿನ ನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದಿದ್ದರಿಂದ ಗೃಹ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಬಾಂಬ್ ನಿಷ್ಕ್ರಿಯ ತಂಡಗಳು ಸಹಾ ಮಂಗಳೂರಿಗೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಆಟೋದಲ್ಲಿ ಪ್ರಯಾಣಿಕನಿಗೆ ಗಂಭೀರ ಗಾಯ
ಚಲಿಸುತ್ತಿರುವ ಆಟೋ ಸ್ಫೋಟಗೊಂಡಿರುವ ಪರಿಣಾಮ ಆಟೋದಲ್ಲಿದ್ದ ಪ್ರಯಾಣಿಕ ಪ್ರೇಮ್ರಾಜ್ ಗಂಭೀರ ಗಾಯಗೊಂಡಿದ್ದಾನೆ. ಆತನ ಶೇ.50 ರಷ್ಟು ದೇಹ ಸುಟ್ಟಿದೆ ಎನ್ನಲಾಗಿದ್ದು, ಆತನ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ ಎಂದು ತಿಳಿದುಬಂದಿದೆ.
ಆತನ ಮೊಬೈಲ್ ವಶಪಡಿಸಿಕೊಂಡಿರುವ ಪೊಲೀಸರು ಮಹತ್ವದ ಮಾಹಿತಿ ಕಲೆಯಾಕುತ್ತಿದ್ದಾರೆ. ಅಲ್ಲದೆ ಪ್ರಕರಣ ಭೇದಿಸಲು ಮಂಗಳೂರು ಕಮಿಷನರ್ ಮೂರು ತಂಡಗಳನ್ನು ರಚಿಸಿದ್ದಾರೆ.
ಮಂಗಳೂರಲ್ಲಿ ಪೊಲೀಸ್ ಭದ್ರತೆ
ಸ್ಫೋಟದಲ್ಲಿ ಬ್ಯಾಗ್ ಹಿಡಿದುಕೊಂಡ ಪ್ರಯಾಣಿಕ ಹಾಗೂ ಅಟೋ ಚಾಲಕನಿಗೆ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅವಶ್ಯಕತೆಯಿಲ್ಲ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಸ್ಫೋಟಗೊಂಡ ಆಟೋರಿಕ್ಷಾದ ಸುತ್ತು ಪೊಲೀಸ್ ನಿಯೋಜನೆ ಮಾಡಲಾಗಿದ್ದು, ಆಟೋ ಸುತ್ತಾ ಪೆಂಡಲ್ ಹಾಕಲಾಗಿದೆ.
ಈ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣದ ಬಗ್ಗೆ ಮಾತನಾಡಿದ್ದು, "ಮಂಗಳೂರಿನಲ್ಲಿ ನಿನ್ನೆ ರಿಕ್ಷಾ ಒಂದರಲ್ಲಿ ಘಟಿಸಿದ ಸ್ಫೋಟದಲ್ಲಿ ಗಾಯಗೊಂಡ ವ್ಯಕ್ತಿಗೆ ಉನ್ನತ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಮ್ಮ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕೇಂದ್ರದ ಭದ್ರತಾ ಪಡೆಗಳ ಜೊತೆಗೆ ಸಹ ಮಾತುಕತೆ ಆಗಿದ್ದು ಅವರೂ ಕೂಡ ಕಾರ್ಯಚರಣೆಗೆ ಇಳಿದಿದ್ದಾರೆ" ಎಂದು ತಿಳಿಸಿದ್ದಾರೆ.