ದೇವಾಲಯ ತೆರವು; ಅಧಿಕಾರಿಗಳ ವಿರುದ್ಧ ಮತ್ತೆ ಪ್ರತಾಪ್ ಸಿಂಹ ಗುಡುಗು
ಮೈಸೂರು, ಸೆಪ್ಟೆಂಬರ್ 17; ರಾಜ್ಯದಲ್ಲಿ ದೊಡ್ಡಮಟ್ಟದ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿರುವ ಹಿಂದೂ ದೇವಾಲಯಗಳ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿಕಾರಿರುವ ಸಂಸದ ಪ್ರತಾಪ್ ಸಿಂಹ, "ಕೆಲವು ಅಧಿಕಾರಿಗಳು ಸುಪ್ರೀಂಕೋರ್ಟ್ ಆದೇಶವನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ದಾರಿ ತಪ್ಪಿಸಿದ್ದಾರೆ" ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ಶುಕ್ರವಾರ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಈ ವೇಳೆಯೇ ಹಿಂದೂ ದೇವಾಲಯ ತೆರವಾಗಿದೆ ಎಂದು ಬಿಂಬಿಸಲಾಗಿದೆ. ಅಲ್ಲದೇ ದೇವಸ್ಥಾನ ತೆರವು ವಿಚಾರ ಆರೋಪ - ಪ್ರತ್ಯಾರೋಪ ಶುರುವಾಗಿದೆ. ಈ ರೀತಿಯಲ್ಲಿ ಬಿಜೆಪಿ ವಿರುದ್ದ ದೋಷಾರೋಪಣೆಯಲ್ಲಿ ಕಾಲ ಕಳೆಯಬೇಡಿ. ಈ ರೀತಿಯಾದಂತ ಪರಸ್ಪರ ಚರ್ಚೆ ನಡೆಸುವುದು ಸರಿಯಲ್ಲ" ಎಂದರು.
"2009ರ ಸುಪ್ರೀಂಕೋರ್ಟ್ ಆದೇಶವನ್ನ ಸರಿಯಾಗಿ ಅರ್ಥೈಸಿಕೊಳ್ಳದೇ ಅಧಿಕಾರಿಗಳು ಹೀಗೆ ಮಾಡಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಆಡಳಿತದಲ್ಲೂ ಐಎಎಸ್ ಅಧಿಕಾರಿಗಳು ಅವರನ್ನು ಮಿಸ್ ಲೀಡ್ ಮಾಡಿದ್ದಾರೆ. ಹೀಗಾಗಿ ತೀರ್ಪನ್ನು ಯಾರು ತಪ್ಪಾಗಿ ಅರ್ಥೈಸಿದವರು ಯಾರು? ಎಂಬುದು ಅರಿತುಕೊಳ್ಳಿ" ಎಂದು ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

"ದೇಗುಲಗಳ ತೆರವಿನ ವಿಚಾರದಲ್ಲಿ ಇದು ಆ ಸರ್ಕಾರ, ಈ ಸರ್ಕಾರ ಎಂದು ಮಾತಾಡುವುದಲ್ಲ. ಬದಲಾಗಿ ಇದು ತಾರ್ಕಿಕ ಅಂತ್ಯ ಕಾಣಬೇಕಾದರೆ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ. ಆದರೆ ಇದನ್ನು ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಇದೇ ರೀತಿಯಲ್ಲಿ ಮಿಸ್ ಲೀಡ್ ಆಗಿದೆ. ಇಲ್ಲಿ ಅಧಿಕಾರಿಗಳು ನಿಮಗೆ ಹೇಗೆ ಮಿಸ್ ಲೀಡ್ ಮಾಡಿದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು" ಎಂದು ಹೇಳಿದರು.
"ಅಲ್ಲದೇ ಮೈಸೂರಿನಲ್ಲಿ ಇತ್ತಿಚೆಗೆ ನಡೆದ ಕೆಡಿಪಿ ಸಭೆಯಲ್ಲಿ ನಾನು ಇದನ್ನೇ ಮಾತನಾಡಿದೆ. ಆ ವೇಳೆ ಜಿಲ್ಲಾಧಿಕಾರಿಗಳು ಸುಪ್ರೀಂಕೋರ್ಟ್ ಆದೇಶ ಇದೆ ಎಂದರು. ಆದರೆ ಮೊದಲು ಸುಪ್ರೀಂಕೋರ್ಟ್ನ ಆದೇಶವನ್ನು ಅರ್ಥ ಮಾಡಿಕೊಳ್ಳಬೇಕು. ದೇಗುಲ ಒಡೆಯುವ ಮುನ್ನ ಮಾಹಿತಿ ನೀಡಬೇಕಿತ್ತು. ಅಧಿಕಾರಿಗಳು ಮಾಡಿದ ಗೊಂದಲವನ್ನು ರಾಜಕಾರಣಿಗಳು ತಮ್ಮ ಮೈಮೇಲೆ ಎಳೆದುಕೊಳ್ಳಬೇಡಿ" ಎಂದರು.
"ಎಲ್ಲಾ ಸರ್ಕಾರಗಳಿಂದ ಈ ತಪ್ಪಾಗಿದ್ದು, ಇದರ ನೇತೃತ್ವವನ್ನು ಅಧಿಕಾರಿಗಳು ವಹಿಸಬೇಕು. ಆದರೆ ಸಿದ್ದರಾಮಯ್ಯನವರಿಗೆ ಈಗ ದೇಗುಲದ ಮೇಲೆ ಇಷ್ಟೊಂದು ಪ್ರೀತಿ ಬಂದಿದೆ. ಈ ಪ್ರೀತಿ ಲಿಂಗಾಯತರನ್ನು ಒಡೆದು ರಾಜಕಾರಣ ಮಾಡುವಾಗ ಗೊತ್ತಿರಲಿಲ್ಲವಾ?, ಟಿಪ್ಪು ಜಯಂತಿ ಆಚರಣೆ ಮಾಡುವುದರಲ್ಲಿ ನಿರತರಾಗಿದ್ದ ಕೋರ್ಟ್ ಆದೇಶ ಗೊತ್ತಾಗಲಿಲ್ವ ಸಿದ್ದರಾಮಯ್ಯಮವರೇ?" ಎಂದು ಪ್ರತಾಪ್ಸಿಂಹ ವ್ಯಂಗ್ಯವಾಡಿದರು.
ಇದೇ ವೇಳೆ ನಂಜನಗೂಡಿನಲ್ಲಿ ಹಿಂದೂ ದೇಗುಲ ನೆಲಸಮಗೊಳಿಸಿದ ಕುರಿತು ಮಾತನಾಡಿದ ಸಂಸದ ಪ್ರತಾಪ್ ಸಿಂಹ, "ಈ ವಿಚಾರಕ್ಕೆ ಸಂಬಂಧಿಸಿದಂತೆ ನಂಜನಗೂಡು ತಹಶೀಲ್ದಾರ್ ಮೇಲೆ ಶಿಸ್ತು ಕ್ತಮ ಆಗಬೇಕು. ಹಾಗಂತ ಅವರನ್ನು ವಜಾ ಮಾಡಿ ಅಂತ ನಾನು ಸರ್ಕಾರಕ್ಕೆ ಒತ್ತಾಯ ಮಾಡಲ್ಲ. ಬದಲಾಗಿ ನಂಜನಗೂಡಿನ ತಹಶೀಲ್ದಾರ್ ನಡೆದುಕೊಂಡಿರುವ ರೀತಿಯನ್ನು ಕಟುವಾಗಿ ಖಂಡಿಸುತ್ತೇನೆ. ಜಿಲ್ಲಾಧಿಕಾರಿ ಅವರಿಗೆ ಎಲ್ಲಾ ದೇವಸ್ಥಾನಕ್ಕೂ ಹೋಗಿ ನೋಡಲು ಆಗುವುದಿಲ್ಲ. ಆದರೆ ತಹಶೀಲ್ದಾರ್ ಅವರು ಅದನ್ನು ಸರಿಯಾಗಿ ನಿರ್ವಹಣೆ ಮಾಡಬೇಕಿತ್ತು. ಆ ದೇವಸ್ಥಾನ ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ಆದರೂ ಅದನ್ನು ತೆರವು ಮಾಡಿರುವುದು ಖಂಡನೀಯ" ಎಂದರು.
ಈ ಹಿಂದೆ ಮೈಸೂರಿನಲ್ಲಿ ನಡೆದ ಹಿಂದೂ ದೇವಸ್ಥಾನಗಳ ತೆರವಿಗೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ, ಜಿಲ್ಲಾಡಳಿತದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೇ ಇದೇ ವಿಚಾರವಾಗಿ ಹಲವು ಸಂಘ-ಸಂಸ್ಥೆಗಳು ಮೈಸೂರು ಸೇರಿದಂತೆ ನಾನಾ ಕಡೆಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದವು.
ಈ ಎಲ್ಲಾ ಬೆಳವಣಿಗೆಗಳಿಂದ ಎಚ್ಚೆತ್ತ ಸರ್ಕಾರ ದೇವಾಲಯಗಳನ್ನು ನೆಲಸಮಗೊಳಿಸುವ ತೀರ್ಮಾನವನ್ನು ಹಿಂಪಡೆದಿತ್ತು. ಆದರೆ ರಾಜ್ಯ ರಾಜಕೀಯದಲ್ಲಿ ಈ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಲೇ ಇವೆ.












Click it and Unblock the Notifications