ರಂಗೇರುತ್ತಿದೆ ಮಂಡ್ಯ ಅಖಾಡ: ತಾಯಿ ಸುಮಲತಾ ಪರ ಪ್ರಚಾರಕ್ಕಿಳಿದ ಅಭಿಷೇಕ್
Recommended Video

ಮಂಡ್ಯ, ಮಾರ್ಚ್ 13: ಲೋಕಸಭಾ ಚುನಾವಣೆ ದಿನೇ ದಿನೇ ರಂಗೇರುತ್ತಿದೆ. ಇಂದು ತಾಯಿ ಸುಮಲತಾ ಪರವಾಗಿ ಮಗ ಅಭಿಷೇಕ್ ಅಂಬರೀಶ್ ಭರ್ಜರಿ ಪ್ರಚಾರ ನಡೆಸಿದರು.
ಈ ವೇಳೆ, ಅಂಬರೀಷ್ ಅಭಿಮಾನಿಗಳು ಸುಮಲತಾ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ಸಿಗದೇ ಇದ್ದಲ್ಲಿ ಪಕ್ಷೇತರರಾಗಿಯೇ ಸ್ಪರ್ಧಿಸಿ, ನಿಮಗೆ ನಮ್ಮ ಬೆಂಬಲವಿದೆ ಎಂದು ತಿಳಿಸಿದರು.
ಮಳವಳ್ಳಿ ತಾಲೂಕಿನ ಹಾಡ್ಲಿ ವೃತ್ತದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸುಮಲತಾ, ದ್ವೇಷ, ಮೋಸ, ಜಾತಿ ರಾಜಕಾರಣದಿಂದ ಜನತೆ ಬೇಸತ್ತಿದ್ದಾರೆ. ಒಳ್ಳೆಯತನದಿಂದ ರಾಜಕೀಯ ಸಾಬೀತುಪಡಿಸಬೇಕಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದೇನೆ ಎಂದು ಸುಮಲತಾ ತಿಳಿಸಿದ್ದಾರೆ. ಇನ್ನು ತಮಗೆ ಮಂಡ್ಯ ಜನತೆಯಿಂದ ಉತ್ತಮ ಬೆಂಬಲ ವ್ಯಕ್ತವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಅಭಿಷೇಕ್ ಇಂದಿನಿಂದ ಪ್ರಚಾರಕ್ಕೆ ಇಳಿದಿದ್ದಾರೆ. ನಮ್ಮ ಮಾವನ ಹೆಸರೇ ಮಳವಳ್ಳಿ ಹುಚ್ಚೇಗೌಡ. ಅಂಬರೀಷ್ ಚಿಕ್ಕ ವಯಸ್ಸಿನಲ್ಲಿ ಇಲ್ಲಿಯೇ ಹಲವಾರು ವರ್ಷಗಳ ಕಾಲ ಇದ್ದರು. ಹಾಗಾಗಿ ಇಲ್ಲಿನ ಜನರಿಗೆ ಅಂಬರೀಷ್ ಮೇಲೆ ವಿಶೇಷ ಪ್ರೀತಿ ಎಂದರು.

ಇದೇ ವೇಳೆ, ದಕ್ಷಿಣ ಭಾರತದ ಚಿತ್ರನಟರು ಹೈಕಮಾಂಡ್ ಬಳಿ ಸುಮಲತಾರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ ಬಗ್ಗೆ ಪ್ರಸ್ತಾಪಿಸಿದ ಸುಮಲತಾ, ಈ ಬಗ್ಗೆ ನನಗೆ ಯಾರಿಂದಲೂ ಮಾಹಿತಿ ಬಂದಿಲ್ಲ. ಅದರ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದರಲ್ಲದೇ, ನಾನು ನನ್ನ ಸ್ಪರ್ಧೆ ವಿಚಾರವನ್ನು ಮಾರ್ಚ್ 18 ರಂದು ತಿಳಿಸುತ್ತೇನೆ. ಪ್ರಚಾರಕ್ಕೆ ಸ್ಯಾಂಡಲ್ ವುಡ್ ನಟರು ಬರುವುದು ನಂತರ ಗೊತ್ತಾಗುತ್ತದೆ ಎಂದರು.
ಇದೇ ವೇಳೆ ಅಭಿಷೇಕ್ ಮಾತನಾಡಿ, ಎಲ್ಲ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನತೆ ಮುಂದೆ ಹೆಜ್ಜೆ ಇಡಿ, ಹಿಂದಕ್ಕೆ ಇಡಬೇಡಿ ಎಂದು ಹೇಳುತ್ತಿದ್ದಾರೆ. ನನಗೆ ಪ್ರಚಾರ ಹೊಸದಲ್ಲ, ಈ ಹಿಂದೆ ಅಪ್ಪನ ಜೊತೆ ಬಂದಿದ್ದೇನೆ. ಈ ಊರಿನಲ್ಲಿ ಅಪ್ಪನ ಅಭಿಮಾನಿಗಳು ಸಾಕಷ್ಟು ಜನರಿದ್ದಾರೆ. ನಮ್ಮ ತಾತ ಕೂಡ ಮಳವಳ್ಳಿಯವರು. ಅವರ ಆಶೀರ್ವಾದವೂ ಇದೆ ಎಂದರು.












Click it and Unblock the Notifications