ಸುಳ್ವಾಡಿ ವಿಷಪ್ರಸಾದ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಣೆ
ಮೈಸೂರು, ಜನವರಿ 3: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದಕ್ಕೆ ವಿಷ ಬೆರೆಸಿ 17 ಮಂದಿಯ ಸಾವಿಗೆ ಕಾರಣರಾಗಿ, ಅನೇಕರು ಅಸ್ವಸ್ಥರಾಗಿ ಆಸ್ಪತ್ರೆ ಸೇರುವಂತೆ ಮಾಡಿದ್ದ ನಾಲ್ವರು ಆರೋಪಿಗಳ ನ್ಯಾಯಾಂಗ ಬಂಧನವನ್ನು ಜ. 16ರವರೆಗೆ ವಿಸ್ತರಿಸಲಾಗಿದೆ.
ಇಂದು ನ್ಯಾಯಾಲಯಕ್ಕೆ ನಾಲ್ವರು ಆರೋಪಿಗಳು ಹಾಜರಾಗಿದ್ದು, ಅವರನ್ನು ಕಳೆದ ಹದಿನಾಲ್ಕು ದಿನಗಳಿಂದ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.
ಮೈಸೂರು ಜೈಲಿನಿಂದ ಕೊಳ್ಳೇಗಾಲ ನ್ಯಾಯಾಲಯಕ್ಕೆ ಆರೋಪಿಗಳಾದ ಇಮ್ಮಡಿ ಮಹದೇವಸ್ವಾಮಿ, ಅಂಬಿಕಾ, ಮಾದೇಶ್, ದೊಡ್ಡಯ್ಯ ನನ್ನು ಹಾಜರುಪಡಿಸಲಾಗಿತ್ತು. ಇವರನ್ನು ಭದ್ರತಾ ದೃಷ್ಟಿಯಿಂದ ಮೈಸೂರು ಜೈಲಿನಲ್ಲಿರಿಸಲಾಗಿತ್ತು. ಮೈಸೂರು, ಚಾಮರಾಜನಗರ ಜಿಲ್ಲೆಗಳ ವಕೀಲರುಗಳು ಆರೋಪಿಗಳ ಪರ ವಕಾಲತ್ತು ವಹಿಸದಂತೆ ಬಾರ್ ಕೌನ್ಸಿಲ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರು ಮೂಲದ ವಕೀಲರು ಪ್ರಕರಣ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ಆರೋಪಿಗಳ ಪರ ಯಾವ ವಕೀಲರೂ ವಕಾಲತ್ತು ವಹಿಸಿಲ್ಲ.

ಇನ್ನು, ಕಾವಿಧಾರಿಯಾಗಿದ್ದ ಸಾಲೂರು ಮಠದ ಕಿರಿಯಶ್ರೀ ಇಮ್ಮಡಿ ಮಹದೇವಸ್ವಾಮಿ ಕಾವಿ ಕಳಚಿಟ್ಟು ಬಿಳಿ ಬಟ್ಟೆಯಲ್ಲಿ ಕೋರ್ಟ್ಗೆ ಹಾಜರಾದರು. ಇದೇ ವೇಳೆ, ಕಟಕಟೆಗೆ ಹತ್ತಿದ ಸ್ವಾಮಿಯನ್ನು ವಕೀಲರೊಬ್ಬರು ಕೈ ಮುಗೀರಿ ಎಂದು ಜೋರು ಧ್ವನಿಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಸುಳ್ವಾಡಿಗೆ ಪುಷ್ಪಾ ಅಮರ್ ನಾಥ್ ಭೇಟಿ
ಇನ್ನು ಸುಳ್ವಾಡಿ ವಿಷ ಪ್ರಸಾದ ಸೇವಿಸಿದವರ ಮನೆಗಳಿಗೆ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರ್ನಾಥ್ ಭೇಟಿ ನೀಡಿದರು. ಇದೇ ವೇಳೆ ಮಾತನಾಡಿದ ಅವರು, ನನ್ನ ಕೈಲಾದಷ್ಟು ಧನ ಸಹಾಯ ಮಾಡುತ್ತೇನೆ.
ಘಟನೆಯಲ್ಲಿ ಮಹಿಳೆಯರೇ ಹೆಚ್ಚಾಗಿ ನೋವು ಅನುಭವಿಸುತ್ತಿದ್ದಾರೆ. ಪ್ರಸಾದಕ್ಕೆ ವಿಷ ಹಾಕುವುದು ಮಾನವ ಕುಲವೇ ತಲೆತಗ್ಗಿಸುವಂತಹದ್ದು. ಇದನ್ನು ಧರ್ಮಭೇದ, ಪಕ್ಷಭೇದ ಮರೆತು ಎಲ್ಲರೂ ಖಂಡಿಸುತ್ತಿದ್ದಾರೆ. ಇಂತಹ ಪಾಪಿಗಳಿಗೆ ಗುಂಡಿನ ರುಚಿ ತೋರಿಸಬೇಕು. ಆರೋಪಿಗಳ ಪರ ಯಾರೂ ಸಹ ವಕಾಲತ್ತು ವಹಿಸಬಾರದು ಎಂದು ಮನವಿ ಮಾಡಿದರು.












Click it and Unblock the Notifications