'ಕೆಲವೇ ದಿನಗಳಲ್ಲಿ ಕಿಚ್ಚುಗುತ್ತಿ ಮಾರಮ್ಮನ ದೇಗುಲ ಸರ್ಕಾರದ ವಶಕ್ಕೆ'
ಮೈಸೂರು, ಜನವರಿ 6: ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮನ ದೇವಾಲಯವನ್ನು ಮುಜರಾಯಿ ಇಲಾಖಾ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದ್ದು, ಅತೀ ಶೀಘ್ರದಲ್ಲಿಯೇ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಕೌಶಲಾಭಿವೃದ್ಧಿ ಮತ್ತು ಮುಜರಾಯಿ ಸಚಿವ ಪಿ.ಟಿ.ಪರಮೇಶ್ವರ್ ನಾಯಕ್ ತಿಳಿಸಿದರು.
ಕಿಚ್ಚುಗುತ್ತಿ ದೇವಾಲಯಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಸಚಿವರು ದೇವಾಲಯವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳು ಮತ್ತು ಟ್ರಸ್ಟಿನ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಮೇರೆಗೆ ಆಗಮಿಸಿದ್ದು, ಈ ದೇವಾಲಯವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರ್ಪಡೆಗೊಳಿಸಿಕೊಳ್ಳಲು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಸಾವಿರಾರು ದೇವಾಲಯಗಳು ಟ್ರಸ್ಟಿಗಳ ಆಡಳಿತದಲ್ಲಿ ನಡೆಯುತ್ತಿದ್ದು, ಇವುಗಳನ್ನು ವಶಕ್ಕೆ ಪಡೆಯಲು ಸರ್ಕಾರ ಕ್ರಮ ಕೈಗೊಳ್ಳಲಿದೆಯೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ದುರ್ಘಟನೆ ನಡೆದಿರುವುದು ಈ ದೇವಾಲಯದಲ್ಲಿ ಮಾತ್ರ. ಹೀಗಾಗಿ ಅತೀ ಶೀಘ್ರದಲ್ಲಿ ಈ ದೇವಾಲಯವನ್ನು ವಶಕ್ಕೆ ಪಡೆಯಲಾಗುವುದು. ಇನ್ನಿತರ ದೇವಾಲಯಗಳಲ್ಲಿ ಅಗತ್ಯವಿರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು

ದೇವಾಲಯದ ಮುಖ್ಯದ್ವಾರ ಮತ್ತು ಹುಂಡಿಯನ್ನು ವಶಕ್ಕೆ ಪಡೆದುಕೊಂಡಿರದಿದ್ದನ್ನು ಗಮನಿಸಿ ಈ ಕೂಡಲೇ ಹುಂಡಿ ಮತ್ತು ಮುಖ್ಯದ್ವಾರಕ್ಕೆ ಬೀಗಮುದ್ರೆ ಹಾಕಿ ದೇವಾಲಯವನ್ನು ವಶಕ್ಕೆ ಪಡೆಯುವಂತೆ ಸ್ಥಳದಲ್ಲೇ ಹಾಜರಿದ್ದ ಉಪವಿಭಾಗಾಧಿಕಾರಿಗೆ ಸೂಚಿಸಿದರು.
ಮಾರಮ್ಮನ ದೇವಸ್ಥಾನದಲ್ಲಿ ವಿಷಪ್ರಸಾದ ಸೇವಿಸಿ ಮೃತಪಟ್ಟವರ ಕುಟುಂಬಗಳು ಹಾಗೂ ಅಸ್ವಸ್ಥರಾದವರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಧನ ಮಂಜೂರಾಗಿದೆ.
ಮೃತಪಟ್ಟ 17 ಮಂದಿಯ ವಾರಸುದಾರರಿಗೆ ತಲಾ 2 ಲಕ್ಷ ರೂ. ಹಾಗೂ ಜಿಲ್ಲಾಡಳಿತ ದೃಢೀಕರಣದನ್ವಯ ಚಿಕಿತ್ಸೆಗೆ ಒಳಗಾಗಿರುವವರ ಕುಟುಂಬಗಳಿಗೆ ತಲಾ 50 ಸಾವಿರ ರೂ. ಗಳನ್ನು ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮಂಜೂರು ಮಾಡಲಾಗಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯ ಆರ್.ಧ್ರುವನಾರಾಯಣ ಅವರ ಒತ್ತಾಯ ಹಾಗೂ ಖುದ್ದು ಮನವಿ ಮೇರೆಗೆ ಕೇಂದ್ರ ಸರ್ಕಾರ ಈ ಪರಿಹಾರವನ್ನು ನೀಡಿದೆ ಎಂದು ಪರಮೇಶ್ವರ್ ನಾಯಕ್ ಹೇಳಿದರು.












Click it and Unblock the Notifications