ನೀರಿನ ಸಂರಕ್ಷಣೆಗೆ ಹುಣಸೂರಲ್ಲೊಂದು ಆದರ್ಶ ಕೆಲಸ
ಮೈಸೂರು, ಮಾರ್ಚ್ 02: ಸರ್ಕಾರಿ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ಯಾವ ಕೆಲಸವೂ ಕಷ್ಟ ಅಲ್ಲ ಎಂಬುದಕ್ಕೆ ಹುಣಸೂರು ತಾಪಂ ಕಾರ್ಯನಿರ್ವಾಣಾಧಿಕಾರಿ ಸಿ.ಆರ್.ಕೃಷ್ಣಕುಮಾರ್ ಸಾಕ್ಷಿಯಾಗಿದ್ದಾರೆ.
ಇವರು ಕಳೆದ ಎರಡು ವರ್ಷಗಳ ಹಿಂದೆ ಹುಣಸೂರಿಗೆ ಇಓ ಆಗಿ ಅಧಿಕಾರ ಸ್ವೀಕರಿಸಿದ್ದು, ಅಲ್ಲಿಂದ ಇಲ್ಲಿವರೆಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಲ್ಲದೆ, ಬಡವರಿಗೆ ತಲುಪಬೇಕಾದ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಮಾನ್ಯವಾಗಿ ಬೇಸಿಗೆ ಕಾಲ ಬಂದರೆ ಎಲ್ಲೆಡೆಯೂ ನೀರಿನದ್ದೇ ಸಮಸ್ಯೆ. ಈ ಸಮಸ್ಯೆಯನ್ನು ಹೋಗಲಾಡಿಸಿ ಎಲ್ಲರಿಗೂ ತಲುಪುವಂತೆ ಮಾಡುವುದು ಸುಲಭದ ಕೆಲಸವಲ್ಲ. ಆದರೆ ಕಳೆದ ವರ್ಷದ ಬರದಲ್ಲಿಯೂ ಅದನ್ನು ಒದಗಿಸಿಕೊಟ್ಟ ಕೀರ್ತಿ ಇಓ ಸಿ.ಆರ್.ಕೃಷ್ಣಕುಮಾರ್ ಅವರದ್ದಾಗಿದೆ.

ಇನ್ನು ಪ್ರತಿ ಗ್ರಾಪಂನಲ್ಲೂ ಸರಕಾರದ ಹಣವನ್ನು ಜಾನುವಾರುಗಳಿಗೆ, ನೀರು ತೊಟ್ಟಿಗಳನ್ನು ನಿರ್ಮಿಸುವ ಮೂಲಕ ಸದ್ಬಳಕೆ ಮಾಡಿ ಗ್ರಾಮಗಳ ಅಭಿವೃದ್ಧಿಗೆ ಕಾರಣಭೂತರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ತಾಲೂಕಿನಲ್ಲಿ 40 ಪಂಚಾಯಿತಿಗಳಿದ್ದು. ಯಾವುದೇ ಜ್ವಲಂತ ಸಮಸ್ಯೆಗಳಿದ್ದರೂ ಪಿಡಿಓ ಗಳ ಮೂಲಕ ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನೈಪುಣ್ಯತೆ ಇವರಿಗಿರುವುದನ್ನು ಕಾಣಬಹುದು. ಪಟ್ಟಣದ ಸಮೀಪವಿರುವ ಹಂದಿ ಜೋಗಿಗಳ ಕಾಲೋನಿಯಲ್ಲಿ ವಾರಗಳ ಕಾಲ ಕುಡಿಯಲು ನೀರಿಲ್ಲದೆ ಪರಿತಪಿಸುತ್ತಿದ್ದಾಗ, ಬೆಳಕು ಸಂಸ್ಥೆಯ ನಿಂಗರಾಜ್ ಮಲ್ಲಾಡಿ ಪ್ರತಿಭಟನೆಯ ಮೂಲಕ ಗಮನಸೆಳೆದಿದ್ದರು. ಇದಕ್ಕೆ ಸ್ಪಂದಿಸಿದ ಅವರು ಕ್ಷಣಾರ್ಧಲ್ಲಿ ನೀರು ಕೊಟ್ಟು ಜವಬ್ದಾರಿಯುತ ಅಧಿಕಾರಿಯಾಗಿ ಜನಮೆಚ್ಚುಗೆಗೆ ಪಾತ್ರರಾಗಿರುವುದನ್ನು ಜನ ಸ್ಮರಿಸುತ್ತಾರೆ.

ಸ್ವಚ್ಛ ಭಾರತ್ ಅಭಿಯಾನದಡಿ ಅವರ ಅವಧಿಯಲ್ಲಿ 30,137ರಲ್ಲಿ ಕೇವಲ 10 ತಿಂಗಳಲ್ಲಿ 24,800 ಶೌಚಾಲಯಗಳನ್ನು ನಿರ್ಮಿಸಿ ಜಿಲ್ಲೆಗೆ ಪ್ರಥಮ ಸ್ಥಾನಪಡೆದು ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಸ್ವೀಕರಿಸಿ, ಗೌರವಕ್ಕೆ ಬಾಜನರಾಗಿದ್ದಾರೆ. ಅಂತರರಾಷ್ಟ್ರೀಯ ಸಂಸ್ಥೆಯಾದ ರೋಟರಿ ಸಂಸ್ಥೆಯಲ್ಲಿ ಸದಸ್ಯರಾಗುವ ಮೂಲಕ ಅಲ್ಲೂ ಕೂಡ ಅಭಿವೃದ್ಧಿ ಕೆಲಸಗಳಿಗೆ ಮುನ್ನುಡಿ ಬರೆದಿದ್ದಾರೆ. ಗಿರಿಜನರೇ ಅಧಿಕವಾಗಿರುವ ಕೊಟ್ಟಿಗೆ ಕಾವಲು ಎಂಬ ಗ್ರಾಮವನ್ನು ರೋಟರಿ ಮೂಲಕ ದತ್ತು ಪಡೆದು ಸರಕಾರದಿಂದ ಸಿಗಬಹುದಾದ ಸೌಲಭ್ಯಗಳನ್ನು ಪಡೆದು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ರೋಟರಿ ಹಾಗೂ ತಾಲೂಕಿನ ಶಾಸಕರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ಇದೀಗ ತಾಪಂ ಆವರಣದಲ್ಲಿ ಸುಸಜ್ಜಿತ ಪಾರ್ಕ್ ನಿರ್ಮಿಸಿದ್ದು, ಜಯಂತಿ ಆಚರಿಸಿದ ಎಲ್ಲ ಮಹನೀಯರ ಭಾವಚಿತ್ರಗಳನ್ನು ತಾಪಂ ಸಭಾಂಗಣದಲ್ಲಿ ಹಾಕಿ ಗಮನ ಸೆಳೆದಿದ್ದಾರೆ.












Click it and Unblock the Notifications