ಆನೆ ಲದ್ದಿ ಬಳಿಯುತ್ತಿದ್ದವನ ಮಗ ಅಂಬಾರಿ ಏರಿದ ಮನೋಜ್ಞ ಕಥೆ
ಮೈಸೂರು, ಜುಲೈ 30 : "ಪ್ರತಿಯೊಬ್ಬರು ನಾನು ಆ ಕಂಪನಿಯಲ್ಲಿ ಕೆಲಸ ತೆಗೆದುಕೊಂಡೆ, ನನಗೆ ಸರ್ಕಾರಿ ನೌಕರಿ ಸಿಕ್ತು ಹೀಗೆಲ್ಲಾ ತಮ್ಮ ವೃತ್ತಿ ಕುರಿತು ಹೇಳಿಕೊಳ್ತಾರೆ. ಆದರೆ ನನ್ನ ಬದುಕಿನ ಮೊದಲ ವೃತ್ತಿ ಮಲ ಹೊರುವುದು. ನನಗೆ ಮಲಹೊರುವುದು ದುರ್ನಾತ, ವಾಕರಿಕೆ ತರಿಸುವ ವೃತ್ತಿ ಎನಿಸಲಿಲ್ಲ. ಅಸಹ್ಯ ಎಂದು ತಿಳಿದುಕೊಳ್ಳಲೇ ಇಲ್ಲ. ಈ ವೃತ್ತಿಯನ್ನು ನಾನು ಬಹಳ ಪ್ರೀತಿಯಿಂದ, ಖುಷಿಯಿಂದ ನಿರ್ವಹಿಸುತ್ತಿದ್ದೆ".
ಈ ಮಾತುಗಳನ್ನು ಆಡಿದವರು ಮತ್ಯಾರೂ ಅಲ್ಲ...ಇದೀಗ ಕರ್ನಾಟಕ ರಾಜ್ಯದ ಸಫಾಯಿ ಕರ್ಮಚಾರಿಯ ಮುಖ್ಯಸ್ಥರಾಗಿರುವ ನಾರಾಯಣ್. ಇವರ ಬಾಲ್ಯದಲ್ಲಿ ಮನೆಯಲ್ಲಿ ಇದ್ದದ್ದು ಕಿತ್ತು ತಿನ್ನುವ ಬಡತನ. ಮನೆಯ ನಿರ್ವಹಣೆ ಇವರ ಮೇಲೆ ಇದ್ದ ಕಾರಣ 10ನೇ ತರಗತಿಯನ್ನು ಅರ್ಧಕ್ಕೆ ನಿಲ್ಲಿಸಿ, ಬಾಲ್ಯದಲ್ಲಿಯೇ ಮನೆಯ ಜವಾಬ್ದಾರಿ ಹೊತ್ತು ಕೂಲಿ ಕೆಲಸಕ್ಕೆ ಸೇರಿದರು.[ಚಿತ್ರಗಳು : ಸಿದ್ದರಾಮಯ್ಯ ಮೈಸೂರು ನಗರ ಪ್ರದಕ್ಷಿಣೆ]

ಬಳಿಕ 1972ರಲ್ಲಿ ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್ ಆಗಿ ಕೆಲಸ ಪಡೆದಾಗ ನಾರಾಯಣ್ ಅವರು ಕೇವಲ 18 ವರ್ಷದ ಯುವಕ. ಆಗ ನಾರಾಯಣ್ ವೇತನವಾಗಿ ಪಡೆಯುತ್ತಿದ್ದದ್ದು ಕೇವಲ 5ರೂಗಳು ಮಾತ್ರ.
ಇದೇ ವೃತ್ತಿಯನ್ನು ನಿರ್ವಹಿಸುತ್ತಿದ್ದ ನಾರಾಯಣ ಅವರ ತಂದೆ ಆರೋಗ್ಯದಲ್ಲಿನ ತೊಂದರೆಯಿಂದಾಗಿ ಕೊನೆಯುಸಿರೆಳೆದರು. ತಾಯಿ ಶ್ವಾಸಕೋಶದ ತೊಂದರೆಯಿಂದ ನರಳುತ್ತಿದ್ದು, ಇಬ್ಬರು ಸಹೋದರರು ಹಾಗೂ 3 ಮಂದಿ ತಂಗಿಯರನ್ನು ಸಂಭಾಳಿಸಿಕೊಂಡು ಹೋಗುವ ಜವಾಬ್ದಾರಿಯೂ ನಾರಾಯಣ್ ಅವರ ಹೆಗಲೇರಿತು.
ಯಾವುದೇ ಕಷ್ಟಗಳಿಗೆ ಜಗ್ಗದೆ ಮಲ ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾದ ಅವರಿಗೆ 8 ತಿಂಗಳುಗಳ ನಂತರ ಮೈಸೂರಿನ ಕಾರ್ಖಾನೆಯಲ್ಲಿ ಕಸ ಗುಡಿಸುವ ಹಾಗೂ ಶೌಚಾಲಯ ನಿರ್ವಹಿಸುವ ಕೆಲಸ ದೊರಕಿತ್ತು. ಇದು ಹಿಂದೆ ಮಾಡುತ್ತಿದ್ದ ಕೆಲಸಕ್ಕಿಂತ ಸ್ವಲ್ಪ ಉನ್ನತ ಮಟ್ಟದ್ದಾಗಿತ್ತು. ಈ ಸಮಯದಲ್ಲಿ ಕಾರ್ಖಾನೆಯಲ್ಲಿ ದಲಿತ ಸಂಘ ಸೇರಿಕೊಂಡು ಸರ್ಕಾರದ ವಿರುದ್ದ ಹಲವಾರು ಹೋರಾಟ ಕೈಗೊಂಡರು. ಇದರ ಪರಿಣಾಮ 3 ದಿನಗಳ ಕಾಲ ಜೈಲುವಾಸ ಅನುಭವಿಸಬೇಕಾಯಿತು ಎಂದು ತಮ್ಮ ಬದುಕಿನ ನೆನಪಿನ ಪುಟಗಳನ್ನು ಒಂದೊಂದಾಗಿಯೆ ತೆರೆಯುತ್ತಾರೆ.
ಈ ಸಮಯದಲ್ಲಿ ಹಲವಾರು ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದ ನಾರಾಯಣ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಒಡನಾಟ ರೂಪಿಸಿಕೊಂಡು ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಬಳಿಕ ಜನತಾ ಪಕ್ಷದ ಸದಸ್ಯರಾಗಿ ಬಳಿಕ 1996ರ ಮಂಡಿ ಮೊಹಲ್ಲಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿ ಕೌನ್ಸಿಲರಾದರು.
ಬಳಿಕ 4 ವರ್ಷಗಳ ನಂತರ 2000ದ ಮೈಸೂರಿಗೆ ಮೇಯರ್ ಆಗಿ ಆಯ್ಕೆಯಾಗಿದ್ದ ವೇಳೆಯಲ್ಲಿ ಅವರ ತಮ್ಮ ಸಫಾಯಿ ಕರ್ಮಾಚಾರಿ ಸಂಸ್ಥೆಯ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸುತ್ತಿದ್ದು 6 ತಿಂಗಳ ಹಿಂದೆ ಸಾವನ್ನಪ್ಪಿದ್ದರು.
ಕೆಲವು ದಿನಗಳ ತರುವಾಯ ನನ್ನ ಬಳಿ ಬಂದ ಸಿದ್ದರಾಮಯ್ಯನವರು, "ನೀವು ನಿಮ್ಮ ತಂದೆ ತಾಯಿ ಸೇರಿದಂತೆ ನಿಮ್ಮ ಕುಟುಂಬವೇ ಮಲಹೊರುವ ಕಾಯಕ ನಿರ್ವಹಿಸಿಕೊಂಡು ಬಂದಿದ್ದೀರಿ, ನಿಮ್ಮ ತಂದೆ ಜಾಥಾ ನಡೆಯುತ್ತಿರುವ ವೇಳೆಯಲ್ಲಿ ಆನೆ, ಕುದುರೆ ಲದ್ದಿಯನ್ನು ಎತ್ತಿ ಜಾಥಾದ ಸ್ಥಳವನ್ನು ಸ್ವಚ್ಚಗೊಳಿಸುತ್ತಿದ್ದರು. ಆದರೆ ಇದೀಗ ನಿನಗೆ ಆ ಕುದುರೆ ಏರುವ ಅವಕಾಶ ಲಭಿಸಿದೆ ಅದನ್ನು ಕಳೆದುಕೊಳ್ಳಬೇಡ" ಎಂದು ಆಡಿದ ಅವರ ಅಕ್ಕರೆಯ ಮಾತುಗಳು ನನ್ನನ್ನು ಇಷ್ಟು ಎತ್ತರಕ್ಕೆ ಏರಲು ಪ್ರೇರಣೆಯಾಯಿತು ಎಂದು ತಮ್ಮ ಯಶೋಗಾಥೆಯನ್ನು ಬಿಚ್ಚಿಡುತ್ತಾರೆ ನಾರಾಯಣ್.
2011ರ ಸೋಶಿಯೋ ಎಕಾನಮಿಕ್ ಆಂಡ್ ಕ್ಯಾಸ್ಟ್ ಸೆನ್ಸಸ್ ಪ್ರಕಾರ ಕರ್ನಾಟಕ ರಾಜ್ಯವು ಅತಿಹೆಚ್ಚು ಮ್ಯಾನ್ಯುವೆಲ್ ಸ್ಕ್ಯಾವೆಂಜರ್ಸ್ ಹೊಂದಿರುವ 5ನೇ ರಾಜ್ಯವಾಗಿದೆ ಎಂದು ನಾರಾಯಣ್ ಹೇಳುತ್ತಾರೆ.












Click it and Unblock the Notifications