ಮೈಸೂರು; ಪೊಲೀಸ್ ಸಿಬ್ಬಂದಿ ಪ್ರಾಮಾಣಿಕತೆಗೆ ಸೆಲ್ಯೂಟ್
ಮೈಸೂರು, ಏಪ್ರಿಲ್ 10 : ಕೊರೊನಾ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಪೊಲೀಸರು ಜನರನ್ನು ನಿಯಂತ್ರಿಸುವ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಇಂತಹ ಸಮಯದಲ್ಲಿ ಮೈಸೂರಿನ ಪೊಲೀಸ್ ಸಿಬ್ಬಂದಿಯೊಬ್ಬರ ಪ್ರಾಮಾಣಿಕತೆ ಎಲ್ಲರ ಗಮನ ಸೆಳೆದಿದೆ.
ಮೈಸೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಬ್ ಪಂತ್ ಸಹ ತಮ್ಮ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 5 ಸಾವಿರ ರೂ.ಗಳ ನಗದು ಬಹುಮಾನವನ್ನು ನೀಡಿ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ವಾಹನ ಚಾಲಕರಾಗಿರುವ ದಯಾನಂದ ಅವರು ತಮ್ಮ ಪ್ರಾಮಾಣಿಕತೆಯಿಂದಾಗಿ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಪಡೆದಿದ್ದಾರೆ. ಲಾಕ್ ಡೌನ್ ಸಮಯದಲ್ಲಿಯೂ ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಜನರು ಸಹ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಘಟನೆ ವಿವರ : ಮಾರ್ಚ್ 27ರಂದು ಮೈಸೂರು ಜಿಲ್ಲೆಯ ಟಿ. ನರಸೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಯಾನಂದ ಅವರು ಲಾಕ್ ಡೌನ್ ಬಂದೋಬಸ್ತ್ ಕರ್ತವ್ಯದಲ್ಲಿದ್ದರು.
ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಬಸ್ ನಿಲ್ದಾಣದ ವೃತ್ತದ ಬಳಿ ಮಧ್ಯಾಹ್ನ 12.30ರ ಸಮಯದಲ್ಲಿ ರಸ್ತೆ ಮಧ್ಯೆ ಬಿದ್ದಿದ್ದ ಹಣದ ಕಂತೆಯನ್ನು ದಯಾನಂದ ನೋಡಿದ್ದಾರೆ. ಅದನ್ನು ಎಣಿಸಿ ನೋಡಿದಾಗ 500 ರೂ. ಮುಖಬೆಲೆಯ 50 ಸಾವಿರ ಹಣವಿತ್ತು.
ಅಲ್ಲಿ ಯಾರೂ ಇರಲಿಲ್ಲ ವಾದ್ದರಿಂದ ಹಣವನ್ನು ಠಾಣೆಗೆ ತಂದು ನೀಡಿದರು. ಈ ಕುರಿತು ವಿಚಾರಣೆ ನಡೆಸಿದಾಗ ತ್ರಿವೇಣಿ ನಗರದ ನಿವಾಸಿ ವಿವೇಕ್ ಹಣದ ವಾರಸುದಾರರು ಎಂಬುದು ತಿಳಿಯಿತು. ಠಾಣೆಗೆ ಆಗಮಿಸಿದ ಅವರು ಮಾಹಿತಿ ನೀಡಿ ಹಣ ಪಡೆದರು.
ದಯಾನಂದ ಅವರ ಕಾರ್ಯಕ್ಕೆ ಠಾಣೆಯ ಸಿಬ್ಬಂದಿ, ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಸ್ಪಿ ರಿಷ್ಯಬ್ ಪಂತ್ ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿದ್ದು, ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.












Click it and Unblock the Notifications