ನಾವು ಅನರ್ಹರೆನ್ನಲು ಸಿದ್ದರಾಮಯ್ಯ ಯಾರು?; ಸೋಮಶೇಖರ್ ತಿರುಗೇಟು
ಮೈಸೂರು, ಫೆಬ್ರವರಿ 07: "ನಾವು ಚುನಾವಣೆಯಲ್ಲಿ ಗೆದ್ದಿದ್ದೇವೆ. ಸುಪ್ರೀಂಕೋರ್ಟ್ ಕೂಡ ಅನರ್ಹತೆ ತೀರ್ಪು ಎತ್ತಿ ಹಿಡಿದಿದೆ. ಈಗ ನಾವು ಅನರ್ಹರು ಎಂದು ಹೇಳುವುದಕ್ಕೆ ಸಿದ್ದರಾಮಯ್ಯ ಯಾರು?" ಎಂದು ಸಚಿವ ಎಸ್.ಟಿ.ಸೋಮಶೇಖರ್ ಕಿಡಿಕಾರಿದ್ದಾರೆ.
ನೂತನವಾಗಿ ಸಚಿವ ಸಂಪುಟ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಗುರುವಾರ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ಬಿಡಿಎ ಅಧ್ಯಕ್ಷನಾಗಿದ್ದೆ, ರಾಜೀನಾಮೆ ನೀಡಿದ ಮೇಲೆ ನಮ್ಮನ್ನು ಅನರ್ಹರು ಎಂದು ಸ್ಪೀಕರ್ ಹೇಳಿದ್ದರು. ಆದರೆ ನಮ್ಮ ಅನರ್ಹತೆಯ ತೀರ್ಪನ್ನು ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದು, ಚುನಾವಣೆಯಲ್ಲಿ ಗೆದ್ದು ಬನ್ನಿ ಎಂದು ಹೇಳಿತ್ತು. ಅದರಂತೆ ನಾವೆಲ್ಲರೂ ಚುನಾವಣೆಯಲ್ಲಿ ನಿಂತು, ಗೆದ್ದಾಗಿದೆ. ಈಗ ನಾವು ಅನರ್ಹರು ಎಂದು ಹೇಳುವುದಕ್ಕೆ ಸಿದ್ದರಾಮಯ್ಯ ಯಾರು?" ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ.
ಇಲ್ಲಿದೆ ಸಿಎಂ ಯಡಿಯೂರಪ್ಪ ಸಂಪುಟ ಸೇರಿದ 'ನೂತನ ಸಚಿವರ ಇತಿಹಾಸ'!
"ನಾವೆಲ್ಲ ಬಿಜೆಪಿ ಶಾಸಕರು. ನಾವು ಸಚಿವರಾಗಿರುವುದು ಅವರಿಗೇಕೆ ಖುಷಿ ಆಗಬೇಕು? ಅವರಿಂದ ನಾವೇನೂ ಸಚಿವರಾಗಿಲ್ಲವಲ್ಲ? ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂಪುಟದಲ್ಲಿ ಸ್ಥಾನ ಸಿಗದೆ ಕೆಲವರು ಅಸಮಾಧಾನಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಎಸ್.ಟಿ.ಸೋಮಶೇಖರ್, "ಬಿಜೆಪಿಯಲ್ಲಿ ಯಾರಿಗಾದರೂ ಅಸಮಾಧಾನ ಇದ್ದರೆ ಅದನ್ನು ಹೈಕಮಾಂಡ್ ಸರಿಪಡಿಸುತ್ತೆ. ಯಡಿಯೂರಪ್ಪ ಸ್ಟ್ರಾಂಗ್ ಇದ್ದಾರೆ. ಕೇಂದ್ರದಲ್ಲೂ ನಮ್ಮ ಸರ್ಕಾರ ಇದೆ. ಅಲ್ಲದೆ ಅಸಮಾಧಾನ ಎನ್ನುವುದು ಈ ಹಿಂದೆ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸಿಎಂ ಆಗಿದ್ದಾಗಲು ಇತ್ತು" ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದರು.
10 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಂಡ ಯಡಿಯೂರಪ್ಪ
ಇದಕ್ಕೂ ಮುನ್ನ ಸುತ್ತೂರು ಮಠಕ್ಕೆ ಆಗಮಿಸಿದ ಸಚಿವ ಎಸ್.ಟಿ.ಸೋಮಶೇಖರ್, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಮಠಕ್ಕೆ ಆಗಮಿಸಿದ ಸೋಮಶೇಖರ್ಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.