ನವೆಂಬರ್ 30ರಂದು ಶ್ರೀರಂಗಪಟ್ಟಣ ಬೈಪಾಸ್ ಓಪನ್; ಪ್ರತಾಪ್‌ ಸಿಂಹ ಭರವಸೆ

ಮೈಸೂರು, ನವೆಂಬರ್‌, 18: ಎಲ್ಲರ ಬಹುನಿರೀಕ್ಷಿತ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಎರಡನೇ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ. ಅಲ್ಲದೇ ಇದೇ ನವೆಂಬರ್ ತಿಂಗಳ 30ರಂದು ಶ್ರೀರಂಗಪಟ್ಟಣ ಬೈಪಾಸ್ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಶ್ರೀರಂಗಪಟ್ಟಣ ಬೈಪಾಸ್‌ನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಹಾಗೂ ಟೋಲ್ ಪ್ಲಾಜಾವನ್ನು ಅಧಿಕಾರಿಗಳೊಂದಿಗೆ ವೀಕ್ಷಿಸಿದ್ದ ಅವರು, ಈ ತಿಂಗಳಿನೊಳಗೆ ಬೈಪಾಸ್ ಅನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಬೆಂಗಳೂರಿನಿಂದ ನಿಡುಘಟ್ಟದವರೆಗೆ 54 ಕಿಲೋ ಮೀಟರ್‌ ಕಾಮಗಾರಿ ಭರದಿಂದ ಸಾಗಿ ಮುಕ್ತಾಯವಾಗಿತ್ತು. ಸದ್ಯ ಕಾಮಗಾರಿ ಮುಗಿದರೂ ಕೆಲವು ಕಡೆ ಲಿಂಕೇಜ್‌ಗಳನ್ನು ಸರಿಪಡಿಸುವುದು ಬಾಕಿ ಉಳಿದಿದೆ. ಹಲವೆಡೆ ಬೈಪಾಸ್‌ನಿಂದ ಎಕ್ಸ್‌ಪ್ರೆಸ್‌ ಹೈವೇ ಸಂಪರ್ಕ ಕಲ್ಪಿಸುವುದು ವಿಳಂಬವಾಗಿದ್ದು, ಆದರೆ ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಇನ್ನು ಎರಡನೇ ಹಂತದ ಕಾಮಗಾರಿ ವಿಳಂಬವಾಗಿದ್ದು, ಇದನ್ನು ಶೀಘ್ರವೇ ಕಾಮಗಾರಿ ಮುಗಿಸಲಾಗುವುದು ಎಂದು ಪ್ರತಾಪ್‌ ಸಿಂಹ ಭರವಸೆ ನೀಡಿದ್ದಾರೆ.

ಹೆದ್ದಾರಿ ಕಾಮಗಾರಿ ವಿಳಂಬ ಏಕೆ?

ಬೆಂಗಳೂರು-ಮೈಸೂರು ನಡುವಿನ ವಿಶ್ವದರ್ಜೆ ಗುಣಮಟ್ಟದ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಡಿಸೆಂಬರ್ ಇಲ್ಲವೇ ಜನವರಿ 2023ಕ್ಕೆ ಮುಗಿಯುತ್ತದೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಆದರೆ ಇದೀಗ ಪ್ರತಾಪ್‌ ಸಿಂಹ ಅವರು, ನವೆಂಬರ್‌ 30ರಂದು ಶ್ರೀರಂಗಪಟ್ಟಣ ಬೈಪಾಸ್ ಓಪನ್ ಮಾಡಲಾಗುವುದು ಎಂದು ಟ್ವೀಟ್‌ ಮೂಲಕ ಭರವಸೆ ವ್ಯಕ್ತಪಡಿಸಿದ್ದಾರೆ.

ಮೊದಲು ಬೆಂಗಳೂರು-ಮದ್ದೂರಿನ ನಿಡಘಟ್ಟ 54 ಕಿಲೋ ಮೀಟರ್ ಉದ್ದದ ರಸ್ತೆ ಅಕ್ಟೋಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಹೇಳಲಾಗಿತ್ತು. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ವಿಶ್ವವಿಖ್ಯಾತ ಮೈಸೂರು ದಸರಾ ವೇಳೆಗೆ ಈ ರಸ್ತೆಯನ್ನು ರಾಷ್ಟ್ರಕ್ಕೆ ಸಮರ್ಪಿಸುವುದಾಗಿ ಹೇಳಿಕೆ ನೀಡಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ಆದ ಮಳೆ ಮತ್ತು ಗುತ್ತಿಗೆದಾರರ ವಿಳಂಬದಿಂದ ಈ ರಸ್ತೆ ಕಾಮಗಾರಿ ಕೇಂದ್ರ ಸಚಿವರ ಆಶಯದಂತೆ ಪೂರ್ಣಗೊಂಡಿಲ್ಲ.

Srirangapatna Bypass Will Be Open On November 30th Pratap simha Tweet

ಸರ್ವಿಸ್ ರಸ್ತೆಗಳ ಕಾಮಗಾರಿ ಮುಕ್ತಾಯ

ಬೆಂಗಳೂರು ನಿಡಘಟ್ಟದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿಯೇ ನಿರ್ಮಾಣ ಆಗುತ್ತಿರುವ ಸರ್ವಿಸ್ ರಸ್ತೆಗಳು ಪೂರ್ಣಗೊಳ್ಳುವ ಹಂತಕ್ಕೆ ತಲುಪಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್, ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ವರದಿ ನೀಡಿದ್ದರು. ದಸರಾ ವೇಳೆಗೆ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗದು. ಇನ್ನು ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಸಂಚಾರಕ್ಕೆ ಮುಕ್ತ ಮಾಡಿಕೊಡಲಾಗುವುದು. ಗುತ್ತಿಗೆ ಪಡೆದಿರುವ ಸಂಸ್ಥೆಗಳಿಗೆ ರಸ್ತೆಯ ಕಾಮಗಾರಿ ತ್ವರಿತವಾಗಿ ಮುಗಿಸುವಂತೆ ಒತ್ತಡ ತಂದಿದ್ದೇವೆ. ಮಳೆ ನೀರು ಸರಾಗವಾಗಿ ಹೋಗಲು ಮತ್ತೆ ಕೆಲವೆಡೆ ಭೂ ಸ್ವಾಧೀನ ಮಾಡಬೇಕಾಗಿದೆ. ಭೂಸ್ವಾಧೀನದ ನಂತರ ರಾಷ್ಟ್ರೀಯ ಹೆದ್ದಾರಿ ಮತ್ತು ಸರ್ವಿಸ್ ರಸ್ತೆ, ಸುರಂಗ ಮಾರ್ಗಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದರು. ಈಗಾಗಲೇ ಬಹುತೇಕ ಬೈಪಾಸ್ ರಸ್ತೆಗಳ ಕಾಮಗಾರಿ ಪೂರ್ಣಗೊಂಡಿದೆ. ದಶಪಥದ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಈ ನಗರಗಳ ನಡುವೆ 90 ನಿಮಿಷಗಳಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಪ್ರಯಾಣ ಮಾಡಬಹುದಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಮತ್ತೊಂದು ದಶಪಥ ಹೆದ್ದಾರಿ ನಿರ್ಮಾಣ

ಇನ್ನು ಮೈಸೂರು ಎಕ್ಸ್‌ಪ್ರೆಸ್‌ ವೇ ಮಾದರಿಯಲ್ಲಿ ಬೆಂಗಳೂರಿಗೆ ಮತ್ತೊಂದು ದಶಪಥ ಹೆದ್ದಾರಿ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ.
ನೆಲಮಂಗಲ - ತುಮಕೂರು ನಡುವೆ ರಾಷ್ಟ್ರೀಯ ಹೆದ್ದಾರಿ -48ರಲ್ಲಿ 44.04 ಕಿಲೋ ಮೀಟರ್‌ ದಶಪಥ ಅಭಿವೃದ್ಧಿ ಕಾಮಗಾರಿ 844 ಕೋಟಿ ರೂಪಾಯಿ ವೆಚ್ಚದಲ್ಲಿ ಕಾರ್ಯಾರಂಭಗೊಂಡಿದೆ. 3 ವರ್ಷಗಳಲ್ಲಿ ನಿರ್ಮಾಣ ಆಗಲಿರುವ ದಶಪಥ, ಸೋಂಪುರ ಕೈಗಾರಿಕಾ ಪ್ರದೇಶ, ತುಮಕೂರು ಕೈಗಾರಿಕಾ ಪ್ರದೇಶ ಮಾತ್ರವಲ್ಲದೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸರಕು ಸಾಗಾಟಕ್ಕೂ ನೆರವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಕೇಂದ್ರ ಸರ್ಕಾರದ ಭಾರತ್‌ ಮಾಲಾ ಪರಿ ಯೋಜನಾ ಹೆದ್ದಾರಿಗಳ ಅಭಿವೃದ್ಧಿಗೆ ಎಂದು ಆರಂಭಿಸಲಾದ ಯೋಜನೆ ಇದಾಗಿದೆ. ರಾಜ್ಯದಲ್ಲಿ ನಿರ್ಮಾಣ ಆಗುತ್ತಿರುವ 2ನೇ ದಶಪಥ ರಸ್ತೆ ಇದಾಗಲಿದೆ ಎನ್ನುವುದು ವಿಶೇಷವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+