ಚಾಮುಂಡಿ ಬೆಟ್ಟ ತಲುಪಿದ ಸಾ.ರಾ.ಮಹೇಶ್-ಎಚ್.ವಿಶ್ವನಾಥ್
ಮೈಸೂರು, ಅಕ್ಟೋಬರ್ 17: ಸಾ.ರಾ.ಮಹೇಶ್-ಎಚ್.ವಿಶ್ವನಾಥ್ ನಡುವಿನ ವಾಕ್ಸಮರ ತಾಯಿ ಚಾಮುಂಡೇಶ್ವರಿ ಸನ್ನಿಧಿ ತಲುಪಿದೆ.
ಇಬ್ಬರೂ ಪರಸ್ಪರ ತೀವ್ರತರವಾದ ಆರೋಪಗಳನ್ನು ಮಾಡಿದ್ದರು. ಸಾ.ರಾ.ಮಹೇಶ್ ಅವರು ವಿಧಾನಸಭೆಯಲ್ಲಿ ಮಾತನಾಡಿ, 'ಎಚ್.ವಿಶ್ವನಾಥ್ 25 ಕೋಟಿ ಹಣಕ್ಕೆ ತಮ್ಮನ್ನು ತಾವು ಮಾಡಿಕೊಂಡಿದ್ದಾರೆ' ಎಂದು ಆರೋಪಿಸಿದಾಗಿನಿಂದಲೂ ಇಬ್ಬರ ನಡುವೆ ವಾಗ್ವಾದ ನಡೆಯುತ್ತಲೇ ಇದೆ. ಅದು ಈಗ ಬಹುತೇಕ ಅಂತಿಮ ಹಂತ ತಲುಪಿದಂತಿದೆ.
ಇಂದು ಬೆಳಿಗ್ಗೆ ವಿಶ್ವನಾಥ್ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿದೇವಿ ದರ್ಶನ ಪಡೆದರು. ಅವರು ಆಗಮಿಸಿದ ಕೆಲ ಸಮಯದ ನಂತರ ಸಾ.ರಾ.ಮಹೇಶ್ ಸಹ ದೇವಾಲಯಕ್ಕೆ ಆಗಮಿಸಿದ್ದು, ಇಬ್ಬರೂ ನಾಯಕರು ಮುಖಾ-ಮುಖಿ ಆಗುವ ಸಾಧ್ಯತೆ ಇದೆ.

'ಸಾ.ರಾ.ಮಹೇಶ್ ಅವರು ನನ್ನ ಮೇಲೆ ಮಾಡಿರುವ ಆರೋಪ ನಿಜವೆಂದು ಚಾಮುಂಡಿ ಬೆಟ್ಟದಲ್ಲಿ ಚಾಮುಂಡಿತಾಯಿಯ ಮುಂದೆ ಬಂದು ಆಣೆ ಮಾಡಲಿ' ಎಂದು ಎಚ್.ವಿಶ್ವನಾಥ್ ಸವಾಲು ಹಾಕಿದ್ದರು. ಈಗ ಸಾ.ರಾ.ಮಹೇಶ್ ಚಾಮುಂಡಿ ಬೆಟ್ಟಕ್ಕೆ ಬಂದಿದ್ದಾರೆ.
ಆದರೆ ಇಂದು ಬೆಳಿಗ್ಗೆ ಬೆಟ್ಟಕ್ಕೆ ಬಂದ ವಿಶ್ವನಾಥ್ ಯೂ ಟರ್ನ್ ಹೇಳಿಕೆ ನೀಡಿದ್ದು, ''ನಾನು ಆಣೆ-ಪ್ರಮಾಣ ಮಾಡುವುದಿಲ್ಲ, ಬದಲಿಗೆ ನನ್ನನ್ನು 25 ಕೋಟಿ ಕೊಂಡವನು ಯಾರಿದ್ದಾರೋ ಅವರನ್ನು ಸ್ವಾಗತಿಸಲು ಬಂದಿದ್ದೇನೆ' ಎಂದರು.
'ನನ್ನನ್ನು 25 ಕೋಟಿಗೆ ಕೊಂಡುಕೊಂಡವನನ್ನು ಸಾ.ರಾ.ಮಹೇಶ್ ಕರೆತರುತ್ತಾರೆ ನಾನು ಅವರಿಬ್ಬರನ್ನೂ ಸ್ವಾಗತಿಸುತ್ತೇನೆ' ಎಂದು ಹೇಳಿದರು. 'ನಿನ್ನೆ ಆಣೆ ಪ್ರಮಾಣ ಮಾಡುವುದಾಗಿ ಹೇಳಿದ್ದರಲ್ಲ' ಎಂದು ಮಾಧ್ಯಮದವರು ಕೇಳಿದ್ದಕ್ಕೆ ಮಾಧ್ಯಮದವರ ಮೇಲೆ ಸಿಟ್ಟಾದ ವಿಶ್ವನಾಥ್, 'ನಾನು ಹಾಗೆ ಹೇಳಿರಲಿಲ್ಲ, ಸುಮ್ಮನೇ ದಿಕ್ಕು ತಪ್ಪಿಸಬೇಡಿ' ಎಂದು ರೇಗಿದರು.
ಇಂದು ಸಾ.ರಾ.ಮಹೇಶ್ ಹಾಗೂ ವಿಶ್ವನಾಥ್ ಅವರು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಿರುವ ಕಾರಣ, ಬೆಟ್ಟದಲ್ಲಿ ಪೊಲೀಸರನ್ನು ನೇಮಿಸಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.












Click it and Unblock the Notifications