ಬೆಂಗಳೂರು-ಮೈಸೂರು ನಡುವೆ ಸ್ಪೈಸ್ಜೆಟ್ ಮತ್ತೆ ಹಾರಾಟ
ಮೈಸೂರು, ಫೆ. 2 : ಮೈಸೂರು ಮತ್ತು ಬೆಂಗಳೂರಿನ ನಡುವೆ ಸ್ಪೈಸ್ ಜೆಟ್ ವಿಮಾನಯಾನ ಮತ್ತೆ ಆರಂಭವಾಗಿದೆ. ಮೈಸೂರಿನ ಸಂಸದ ಎಚ್ ವಿಶ್ವನಾಥ್ ಅವರು ಎರಡೂ ನಗರಗಳ ನಡುವಿನ ವಿಮಾನಯಾನಕ್ಕೆ ಚಾಲನೆ ನೀಡಿದರು. ಕಳೆದ ಅಕ್ಟೋಬರ್ ತಿಂಗಳಲ್ಲಿ ಈ ಯಾನವನ್ನು ನಿಲ್ಲಿಸಲಾಗಿತ್ತು.
ಮೈಸೂರು ಮತ್ತು ಚೆನ್ನೈ ನಡುವೆ ಸ್ಪೈಸ್ ಜೆಟ್ ವಿಮಾನಗಳು ಕಾರ್ಯ ನಿರ್ವಹಿಸುತ್ತಿದ್ದವು. ಇನ್ನು ಮುಂದೆ ಮೈಸೂರಿನಿಂದ ಚೆನ್ನೈ ತಲುಪುವ ಮುನ್ನ ಬೆಂಗಳೂರಿನಲ್ಲಿ ವಿಮಾನಗಳು ನಿಲುಗಡೆ ಕಾಣಲಿವೆ. ಮಂಗಳವಾರ ಹೊರತುಪಡಿಸಿ ವಾರದ ಉಳಿದೆಲ್ಲ ದಿನಗಳಲ್ಲಿ ಬೆಂಗಳೂರು ಮೂಲಕ ಮೈಸೂರು-ಚೆನ್ನೈ ವಿಮಾನಗಳು ಸಂಚರಿಸಲಿವೆ.

ಈ ವಿಮಾನಯಾನವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಡನೆ ಮಾತನಾಡುತ್ತಿದ್ದ ವಿಶ್ವನಾಥ್ ಅವರು, ಇದು ಐಟಿ ದಿಗ್ಗಜರಾದ ಇನ್ಫೋಸಿಸ್ ಮತ್ತು ವಿಪ್ರೋ ಕಂಪನಿಯ, ಉದ್ಯಮಿಗಳ ಬಹುದಿನಗಳ ಬೇಡಿಕೆಯಾಗಿತ್ತು. ಇದರಿಂದ ಪ್ರವಾಸೋದ್ಯಮವೂ ಅಭಿವೃದ್ಧಿ ಕಾಣಲಿದೆ ಎಂದರು. ಮೈಸೂರಿನಲ್ಲಿ ಕೂಡ ಹಲವಾರು ಐಟಿ ಕಂಪನಿಗಳು ಬೀಡುಬಿಟ್ಟಿರುವ ಕಾರಣ ಇದು ಅಗತ್ಯ ಕೂಡ ಆಗಿತ್ತು.
ಚೆನ್ನೈನಿಂದ ಮಧ್ಯಾಹ್ನ 1.30ಕ್ಕೆ ಹಾರಲಿರುವ ಸ್ಪೈಸ್ ಜೆಟ್ ವಿಮಾನ ಮೈಸೂರನ್ನು 2.30ಕ್ಕೆ ತಲುಪಲಿದೆ. ನಂತರ 4.30ಕ್ಕೆ ಮೈಸೂರನ್ನು ಬಿಡುವ ಸ್ಪೈಸ್ ಜೆಟ್ ವಿಮಾನ ಚೆನ್ನೈಯನ್ನು ಸಂಜೆ 5.30ಕ್ಕೆ ತಲುಪಲಿದೆ. ಕಳೆದ ವರ್ಷ ನಷ್ಟದಲ್ಲಿದ್ದ ಕಾರಣ ಬೆಂಗಳೂರು ಮತ್ತು ಮೈಸೂರು ನಡುವಿನ ಯಾನವನ್ನು ಸ್ಪೈಸ್ ಜೆಟ್ ನಿಲ್ಲಿಸಿತ್ತು.












Click it and Unblock the Notifications