ಐಎಂಎ ವಂಚನೆ: ಮೈಸೂರಿನಲ್ಲೂ ಕೈಸುಟ್ಟುಕೊಂಡಿದ್ದಾರೆ ಗ್ರಾಹಕರು
ಮೈಸೂರು, ಜೂನ್ 12: ಐಎಂಎ ವಂಚನೆಗೊಳಗಾದವರು ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಬೆಂಗಳೂರಿನಲ್ಲಿ ಸಾವಿರಾರು ಮಂದಿ ಈ ಹಗರಣಕ್ಕೆ ಸಂಬಂಧಪಟ್ಟಂತೆ ಕೈಸುಟ್ಟುಕೊಂಡರೆ, ಮೈಸೂರು ಜಿಲ್ಲೆಯಲ್ಲಿಯೂ ಹಲವು ಜನ ಬಂಡವಾಳ ಹೂಡಿ ಮೋಸ ಹೋಗಿರುವ ಸುದ್ದಿ ಹೊರ ಬಂದಿದೆ.
ಮೈಸೂರಿನ ಕೆ.ಆರ್ ನಗರ, ಹುಣಸೂರು, ಪಿರಿಯಾಪಟ್ಟಣ, ಟಿ ನರಸಿಪುರ ತಾಲ್ಲೂಕುಗಳಿಂದ ಹಲವರು ಈ ಸಂಸ್ಥೆಗೆ ಹಣ ಹೂಡಿದ್ದಾರೆ. ಆದರೆ ಹೂಡಿಕೆಯ ಅಂದಾಜು ಮೊತ್ತದ ಲೆಕ್ಕಾಚಾರ ಸಿಗುತ್ತಿಲ್ಲ. ಮೈಸೂರಿನ ಟಿ ನರಸೀಪುರ ತಾಲ್ಲೂಕಿನ ಗರ್ಗೇಶ್ವರಿಗೆ ಐಎಂಎ ರೂವಾರಿ ಮನ್ಸೂರ್ ಖಾನ್ ಬಂದು ಹೋಗುತ್ತಿದ್ದುದರಿಂದ ಗ್ರಾಮದ ಭಾಗಶಃ ಮುಸಲ್ಮಾನ ಕುಟುಂಬದವರೆಲ್ಲರೂ ತಮ್ಮಲ್ಲಿದ್ದುದನ್ನು ಮಾರಾಟ ಮಾಡಿ ಈ ಸಂಸ್ಥೆಗೆ ಹೂಡಿದ್ದಾರೆ ಎನ್ನಲಾಗಿದೆ.
ಹಣ ಹೂಡಿಕೆ ಮಾಡಿದ ಕೆಲವರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ ಕೆಲ ಜನ ಮುಂದೆ ಬಂದರೂ ತಾವು ಮೈಸೂರಿನಲ್ಲಿ ದೂರು ನೀಡಬೇಕಾ ಅಥವಾ ಬೆಂಗಳೂರಿನಲ್ಲಿ ದೂರು ನೀಡಬೇಕು ಎಂಬ ಗೊಂದಲದಲ್ಲಿಯೇ ಇದ್ದಾರೆ.
ಈ ಭಾಗದಲ್ಲಿ ಮಾತ್ರವಲ್ಲದೇ ನಗರದ ಬನ್ನಿಮಂಟಪ, ಎನ್.ಆರ್.ಮೊಹಲ್ಲಾ, ಮಂಡಿ ಮೊಹಲ್ಲಾ, ಉದಯಗಿರಿ, ನಜರಾಬಾದ್ ಸೇರಿದಂತೆ ವಿವಿಧ ಬಡಾವಣೆಗಳಿಂದಲೂ ಐಎಂಎಗೆ ಬಂಡವಾಳ ಹೂಡಿ ಹಣ ಕಳೆದುಕೊಂಡವರು ಇದ್ದಾರೆ. ಮೈಸೂರಿನ ರಾಜೀವ್ ನಗರ ಬಡಾವಣೆಯಿಂದಲೇ 10 ಕೋಟಿ ರೂಗಳ ಹೂಡಿಕೆಯಾಗಿದೆ ಎಂದು ಅಂದಾಜಿಸಲಾಗಿದೆ.

ಮುಸ್ಲಿಮರು ಹೆಚ್ಚಾಗಿ ವಾಸಿಸುವ ನಗರದ ವಿವಿಧ ಬಡಾವಣೆ, ಕೆ ಆರ್ ನಗರ ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿಯೂ ಲಕ್ಷಾಂತರ ಹಣವನ್ನು ಮೈಸೂರಿನ ಅನೇಕರು ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.












Click it and Unblock the Notifications