ವರುಣಾ ಕ್ಷೇತ್ರ: ಸಿದ್ದರಾಮಯ್ಯ, ವಿ ಸೋಮಣ್ಣ ಸೋಲು ಗೆಲುವಿನ ಸಾಧಕ-ಬಾಧಕಗಳು
ಮೈಸೂರು, ಏಪ್ರಿಲ್ 22: ಕರ್ನಾಟಕ ವಿಧಾನಸಭಾ ಚುನಾವಣೆಯ ಹೈವೋಲ್ಟೇಜ್ ಕ್ಷೇತ್ರವಾದ ವರುಣಾ ಈಗ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ವಿ ಸೋಮಣ್ಣ ನಡುವಿನ ಅಳಿವು ಉಳಿವಿನ ಆಟವಾಗಿ ಪರಿಣಮಿಸಿದೆ. ಹೀಗಾಗಿ ಗೆಲ್ಲುವುದು ಇಬ್ಬರಿಗೂ ಅನಿವಾರ್ಯವಾಗಿದೆ. ಈ ಇಬ್ಬರು ಗೆಲುವು ಹಾಗೂ ಸೋಲಿನ ಕೆಲವು ಅಂಶಗಳು ಇಲ್ಲಿವೆ.
ಹಳೆ ಮೈಸೂರು ಭಾಗ ಬಹುತೇಕ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಾಬಲ್ಯವಿರುವ ಪ್ರದೇಶ. ಇತ್ತೀಚೆಗೆ ಜೆಡಿಎಸ್ ಪ್ರಭಾವ ಇಲ್ಲಿ ಕಡಿಮೆಯಾಗಿದೆ. ಅದೇ ಸಮಯದಲ್ಲಿ ಕಾಂಗ್ರೆಸ್ ಬಲವರ್ಧನೆಯಾಗುತ್ತಿದೆ. ಇಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ತೀವ್ರ ಪ್ರಯತ್ನ ಮಾಡುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಪ್ರಭಾವ ಇಲ್ಲಿ ಹೆಚ್ಚಾಗಿದೆ. ಹಾಗೆಯೇ ವಿ ಸೋಮಣ್ಣ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಜನರ ಮನಸ್ಸಿನಲ್ಲಿ ಉಳಿದುಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು ಜನರ ಮನಸ್ಸಿನಲ್ಲಿ ಅಚ್ಚೋತ್ತಿಲ್ಲ.

ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಪ್ರಬಲ ನಾಯಕರಾದರೆ ವಿ ಸೋಮಣ್ಣ ಬಿಜೆಪಿಯ ವರಿಷ್ಠರು. ಇದುವರೆಗೂ ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಭದ್ರಕೋಟೆ ಮಾಡಿಕೊಂಡಿದ್ದ ಸೋಮಣ್ಣ ಅವರು ಇದೀಗ ಹೈಕಮಾಂಡ್ ಸೂಚನೆಯಂತೆ ವರುಣಾದಲ್ಲಿ ಅಗ್ನಿಪರೀಕ್ಷೆಗೆ ಇಳಿದಿದ್ದಾರೆ. ಸಿದ್ದರಾಮಯ್ಯ ಅವರು ಕೂಡ ಬಿಜೆಪಿ ಪ್ರಬಲ ತಂತ್ರಗಳಿಂದ ಪ್ರತಿತಂತ್ರ ಮಾಡಿಕೊಂಡು ಇದು ನನ್ನ ಕೊನೆ ಚುನಾವಣೆ ಎಂದು ತಿಳಿಸಿ ಸ್ಪರ್ಧೆಗೆ ಮುಂದಾಗಿದ್ದಾರೆ.
ಸಿದ್ದರಾಮಯ್ಯ ಗೆಲ್ಲಲು ಹಾಗೂ ಸೋಲಿನ ಕಾರಣಗಳು
1. ವರುಣಾದಲ್ಲಿ ಸಿದ್ದರಾಮಯ್ಯಗೆ ಸಾಂಪ್ರದಾಯಿಕ ಮತಗಳು ಅಧಿಕವಾಗಿವೆ. ಇದು ಸಿದ್ದರಾಮಯ್ಯ ಅವರು ಗೆಲ್ಲುಲು ಪ್ರಮುಖ ಕಾರಣ. ಅಲ್ಲದೆ ಕ್ಷೇತ್ರದಲ್ಲಿ ಲಿಂಗಾಯತರು ಸಿದ್ದರಾಮಯ್ಯ ಅವರನ್ನೂ ಬೆಂಬಲಿಸುತ್ತಾರೆ. ಆದರೆ ಈಗ ಲಿಂಗಾಯತ ಸಮುದಾಯದ ವಿ ಸೋಮಣ್ಣ ಅವರು ಸ್ಪರ್ಧೆ ಮಾಡುತ್ತಿರುವುದರಿಂದ ಸಿದ್ದರಾಮಯ್ಯಗೆ ಗೆಲ್ಲುವುದು ಅಷ್ಟು ಸುಲಭ ಅಲ್ಲ ಎನ್ನಲಾಗಿದೆ.
2. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಸಮುದಾಯದ ಮತಗಳು ಅಧಿಕವಾಗಿವೆ. ಮೊದಲಿನಿಂದಲೂ ದಲಿತರೂ ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದಾರೆ. ಈ ಚುನಾವಣೆಯಲ್ಲೂ ಅವರ ಬೆಂಬಲಕ್ಕೆ ನಿಲ್ಲಲು ದಲಿತ ಐಕ್ಯ ಸಮಿತಿ ಸೇರಿ ದಲಿತ ಸಂಘರ್ಷ ಸಮಿತಿ ನಿರ್ಣಯ ತೆಗೆದುಕೊಂಡಿವೆ. ಆದರೆ ಇಲ್ಲಿ ಈ ಮತಗಳು ಚದುರುವ ಸಾಧ್ಯತೆ ಇದೆ. ಹಾಗಾಗಿ ಸಿದ್ದರಾಮಯ್ಯ ಅವರಿಗೆ ಇದು ನಿಶ್ಚಿತ ಮತಗಳು ಬೀಳುವಲ್ಲಿ ತೊಡಕಾಗುವ ಸಾಧ್ಯತೆ ಇದೆ. ಈ ಚುನಾವಣೆಯಲ್ಲಿ ಇದು ಹಾಗಾಗುವುದಿಲ್ಲ ಎನ್ನಲಾಗಿದೆ.

3. ಬಿಜೆಪಿ ಈ ಬಾರಿ ಡಿಕೆ ಶಿವಕುಮಾರ್ ಸೇರಿದಂತೆ ಸಿದ್ದರಾಮಯ್ಯ ಅವರನ್ನು ಮಣಿಸಲು ಬಿಜೆಪಿ ಅತ್ಯುಗ್ರ ವಿಧಾನಗಳನ್ನು ಬಳಸಲಿದೆ. ಮೈಸೂರಿನಲ್ಲಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರವನ್ನು ಕೈಗೊಳ್ಳಲಿದ್ದಾರೆ. ಈಗಾಗಲೇ ಬಿಎಲ್ ಸಂತೋಷ್ ಮೈಸೂರಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಆಲಿಸಿದ್ದಾರೆ. ಬಿಜೆಪಿ ಇಲ್ಲಿ ಗುಪ್ತ ನಡೆಯನ್ನು ಆರ್ಎಸ್ಎಸ್ ಮೂಲಕ ಹೆಣೆದರೆ ಸಿದ್ದರಾಮಯ್ಯ ಸೋಲಲುಬಹುದು ಎಂದು ಹೇಳಲಾಗುತ್ತಿದೆ.
4. ಇನ್ನು ಲಿಂಗಾಯತ ಸಮುದಾಯವನ್ನು ಸಿದ್ದರಾಮಯ್ಯ ಒಡೆಯಲು ಪ್ರಯತ್ನಿಸಿದ್ದಾರೆ ಎಂಬ ನಕಾರಾತ್ಮಕ ನಿರೂಪಣೆ ಬಿಜೆಪಿ ಈಗಾಗಲೇ ಬಿಂಬಿಸಿದೆ. ಆದರೆ ಕ್ಷೇತ್ರದಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರ ಒಳಒಪ್ಪಂದ ಆಗಿದೆ ಎನ್ನಲಾಗಿದ್ದು, ಇದು ಸಿದ್ದರಾಮಯ್ಯ ಅವರಿಗೆ ಗೆಲ್ಲಲು ಕಾರಣವಾಗಬಹುದು.
5. ಸಿದ್ದರಾಮಯ್ಯ ಅವರು ವಿ ಸೋಮಣ್ಣ ಅವರನ್ನು ವರುಣಾದಲ್ಲಿ ಕಣಕ್ಕಿಳಿಸಿ ಬಲಿಪಶು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನೀಡಿರುವ ಭಾಗ್ಯಗಳು ಅಭಿವೃದ್ಧಿ ಕೆಲಸಗಳು ಜನಮಾನಸದಲ್ಲಿ ಇನ್ನು ಚರ್ಚೆಯಲ್ಲಿವೆ. ಇದು ಮತದಾರರು ಸಿದ್ದರಾಮಯ್ಯ ಅವರನ್ನು ಜನರು ಆರಾಧಿಸಲು ಕಾರಣವಾಗಿದೆ.
ಸೋಮಣ್ಣ ಗೆಲ್ಲಲು ಹಾಗೂ ಸೋಲಲು ಇರುವ ಕಾರಣಗಳು
1. ಸೋಮಣ್ಣ ಅವರು ರಾಜ್ಯದಲ್ಲಿ ಬಿಜೆಪಿಯ ಹಿರಿಯ ಹಾಗೂ ಪ್ರಬಲ ಲಿಂಗಾಯತ ಸಮುದಾಯದ ನಾಯಕ. ವರುಣಾದಲ್ಲಿ ಲಿಂಗಾಯತ ಮತಗಳು ಅಧಿಕವಿದ್ದು, ಲಿಂಗಾಯತ ಸಮುದಾಯದ ನಾಯಕರಾಗಿರುವ ವಿ ಸೋಮಣ್ಣ ಅವರಿಗೆ ಈ ಸಮುದಾಯ ಕೈಹಿಡಿದರೆ ಗೆಲ್ಲಬಹುದು. ಅಲ್ಲದೆ ಹಿಂದುಳಿದ ಸಮುದಾಯಗಳು ಮೋದಿ ಅಲೆಯಿಂದ ಬಿಜೆಪಿ ಕಡೆ ವಾಲಿದರೆ ಗೆಲುವಿನ ಸಾಧ್ಯತೆ ಇದೆ.
2. ಹಳೆ ಮೈಸೂರಿನಲ್ಲಿ ಜೆಡಿಎಸ್ ತನ್ನದೇ ಮತದಾರರನ್ನು ಹೊಂದಿದೆ. ಹೀಗಾಗಿ ಒಂದು ವೇಳೆ ಬಿಜೆಪಿ ಹಾಗೂ ಜೆಡಿಎಸ್ ಒಳಒಪ್ಪಂದ ಮಾಡಿಕೊಂಡರೆ ವರುಣಾದಲ್ಲಿ ಸೋಮಣ್ಣ ಗೆಲ್ಲಬಹುದು. ಆದರೆ ಇದು ಕಷ್ಟಸಾಧ್ಯದ ಮಾತು.
3. ಇನ್ನು ಬೂತ್ ಮಟ್ಟದಲ್ಲಿ ಆರ್ಎಸ್ಎಸ್ ಕೆಲಸ ಮಾರುತ್ತಿದೆ. ಈ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ಬಹುದು. ಈಗಾಗಲೇ ರಾಜಕೀಯ ವಲಯದಲ್ಲಿ ಲಿಂಗಾಯತ ಸಿಎಂ ಚರ್ಚೆ ಜೋರಾಗಿದ್ದು, ಇದು ಸೋಮಣ್ಣ ಅವರಿಗೆ ಪಾಸಿಟಿವ್ ಆಗಬಹುದು.
4. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸೋಮಣ್ಣ ಅವರು ವರುಣಾ ಮಾತ್ರವಲ್ಲದೆ ಜಿಲ್ಲಾದ್ಯಂತ ಪರಿಚಿತರಾಗಿದ್ದರು. ಮೈಸೂರು ಜಿಲ್ಲೆಯಲ್ಲಿ ಅವರು ಈಗಾಗಲೇ ಮಾಡಿ ಹೋಗಿರುವ ಅಭಿವೃದ್ದಿ ಕೆಲಸಗಳನ್ನು ಮತ್ತೆ ಮುನ್ನೆಲೆ ಚರ್ಚೆಗೆ ಬಿಟ್ಟರೆ ಅದು ಸೋಮಣ್ಣ ಅವರಿಗೆ ಪ್ಲಸ್ ಆಗಬಹುದು. ಆದರೆ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಬಗ್ಗೆ ಕೇಳಿದರೆ ಚಪ್ಪಲಿ ಬಿಟ್ಟು ಮಾತನಾಡುವ ಜನರಂತ ಮತದಾರರು ಇಲ್ಲಿ ಸೋಮಣ್ಣ ಅವರಿಗೆ ಇಲ್ಲ ಎನ್ನಬಹುದು.
5. ಇನ್ನು ಬಿವೈ ವಿಜಯೇಂದ್ರ ಇಲ್ಲಿ ಮೊದಲ ಚುನಾವಣೆಯಲ್ಲೂ ವರುಣಾದಿಂದ ಕಣಕ್ಕಿಳಿಯುವುದಾಗಿ ಹೇಳಿದ್ದರು. ಈ ಚುನಾವಣೆಯಲ್ಲೂ ಅವರು ವರುಣಾದಿಂದ ಸ್ಪರ್ಧೆ ಮಾಡುವ ಬಗ್ಗೆ ಸ್ವತಃ ಯಡಿಯೂರಪ್ಪ ಅವರೇ ಮಾತನಾಡಿದ್ದರು. ಕೊನೆಗೆ ಶಿಕಾರಿಪುರದಿಂದ ಅವರು ಸ್ಪರ್ಧೆ ಮಾಡುವಂತಾಯಿತು. ಆದರೂ ಇಲ್ಲಿ ಸೋಮಣ್ಣ ಪರ ಪ್ರಚಾರ ಮಾಡುತ್ತಿರುವುದರಿಂದ ಮೈಸೂರು ಭಾಗದಲ್ಲಿ ಅವರ ಪ್ರಭಾವ ಇದೆ. ಇದು ಕೂಡ ಸೋಮಣ್ಣ ಗೆಲುವಿಗೆ ನೆರವಾಗಬಹುದು. ಮುಖ್ಯವಾಗಿ ಯಡಿಯೂರಪ್ಪ ಅವರ ಶಿಷ್ಯ ಕಾಪು ಸಿದ್ದಲಿಂಗಸ್ವಾಮಿ ಕೂಡ ಸೋಮಣ್ಣ ಬೆಂಬಲಕ್ಕೆ ನಿಂತರೆ ಸೋಮಣ್ಣ ಗೆಲ್ಲಬಹುದು.












Click it and Unblock the Notifications