ಮೇಯರ್ ಚುನಾವಣೆ ಆಯ್ಕೆ ಪ್ರಕ್ರಿಯೆಯಿಂದ ಸಿದ್ದರಾಮಯ್ಯ ಹಿಂದೆ ಸರಿದರೇ?
ಮೈಸೂರು, ನವೆಂಬರ್. 16: ಈ ಹಿಂದೆ ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನ ತಮಗೆ ಬೇಕೆಂದು ಪಟ್ಟು ಹಿಡಿದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸದ್ಯ ದ್ವಂದ್ವ ಹೇಳಿಕೆ ನೀಡಿ ಹಿಂದೆ ಸರಿಯುವ ಪ್ರಯತ್ನ ಮಾಡುತ್ತಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೈಸೂರು ಮಹಾನಗರ ಪಾಲಿಕೆ ಚುನಾವಣೆ ನಾಳೆ ನಡೆಯಲಿದ್ದು, ಮೇಯರ್ ಆಯ್ಕೆ ಕುರಿತು ನಾನು ತಲೆ ಹಾಕುವುದಿಲ್ಲ. ನಾನು ಕುಮಾರಸ್ವಾಮಿ, ದೇವೇಗೌಡ , ಸಾರಾ ಮಹೇಶ್ ಜೊತೆ ಮಾತನಾಡಿಲ್ಲ , ಮಾತನಾಡುವುದೂ ಇಲ್ಲ.
ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಪ್ರವಾಸೋದ್ಯಮ ಸಚಿವ ಇಬ್ಬರೂ ಜೆಡಿಎಸ್ ನವರೇ. ಹೀಗಾಗಿ ಕಾಂಗ್ರೆಸ್ ಗೆ ಒಂದು ವಾಯ್ಸ್ ಇರಬೇಕು ಎಂದು ಕೇಳುತ್ತಿದ್ದೇವೆ . ರಾಜ್ಯದಲ್ಲಿ ಜೆಡಿಎಸ್ -ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಹಾಗಾಗಿ ಮೈಸೂರಿನಲ್ಲಿ ಮೈತ್ರಿ ಆಡಳಿತದಲ್ಲಿ ಮೇಯರ್ ಆಗುತ್ತಾರೆ ಎಂದರು.

ಜೆಡಿಎಸ್ ಪಾಲಿಕೆ ಸದಸ್ಯರು ರೆಸಾರ್ಟ್ ಗೆ ಹೋಗಿರುವುದು ನನಗೆ ಗೊತ್ತಿಲ್ಲ. ಅವರ ಪಕ್ಷದ ಸದಸ್ಯರನ್ನು ರಕ್ಷಣೆ ಮಾಡಿಕೊಳ್ಳಲು ಹೋಗಿರಬೇಕು ಅಷ್ಟೇ. ಸಾಲಮನ್ನಾ ಮಾಡಲು ಸಮ್ಮಿಶ್ರ ಸರ್ಕಾರ ಸಿದ್ಧವಿದೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ರೈತರ ಸಾಲ ಮನ್ನಾ ಮಾಡಲು ಮೊದಲ ಆದ್ಯತೆ ನೀಡಲಾಗಿದೆ.
ರೈತರ ರಾಷ್ಟ್ರೀಕೃತ ಮತ್ತು ಸಹಕಾರಿ ಸಂಘಗಳ ಸಾಲಗಳನ್ನು ಹಂತ ಹಂತವಾಗಿ ಮನ್ನಾ ಮಾಡಲಾಗುವುದು. ಸಾಲ ಮರು ಪಾವತಿಯಲ್ಲಿ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಸರಿದೂಗಿಸುತ್ತದೆ. ರೈತರು ಆತಂಕ ಪಡುವ ಪ್ರಮೇಯವಿಲ್ಲ ಎಂದು ಭರವಸೆ ನೀಡಿದರು.












Click it and Unblock the Notifications