ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಉಲ್ಟಾ ಹೊಡೆದ ಸಿದ್ದರಾಮಯ್ಯ ತಂತ್ರ!
ಮೈಸೂರು, ಮೇ 11: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತನ್ನ ಹಳೆಯ ಎದುರಾಳಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರನ್ನು ಹಣಿಯಲು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿದ ತಂತ್ರ ಫಲಿತಾಂಶಕ್ಕೆ ಮುನ್ನವೇ ಠುಸ್ಸಾಗಿದೆ. ಅಷ್ಟೇ ಅಲ್ಲದೆ ಕ್ಷೇತ್ರದ ಕಾಂಗ್ರೆಸ್ ನಲ್ಲಿ ಭಿನ್ನಾಭಿಪ್ರಾಯ ಉಂಟಾಗಿದ್ದಲ್ಲದೆ, ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡರಿಗೆ ಪಕ್ಷದಲ್ಲಿ ಉಳಿಗಾಲವಿಲ್ಲದ ಪರಿಸ್ಥಿತಿ ಎದುರಾಗಿದೆ.
ಸಿದ್ದರಾಮಯ್ಯ ಅವರು 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಜೆಡಿಎಸ್ ನ ಜಿ.ಟಿ.ದೇವೇಗೌಡರ ಎದುರು ಅಧಿಕ ಅಂತರದ ಮತಗಳಿಂದ ಸೋಲು ಕಂಡಿದ್ದರು. ಅದಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ಸಲುವಾಗಿ ಜೆಡಿಎಸ್ ನಲ್ಲಿದ್ದ ಮುಖಂಡ ಮಾವಿನಹಳ್ಳಿ ಸಿದ್ದೇಗೌಡರನ್ನೇ ಕರೆತಂದು ಜಿ.ಟಿ.ದೇವೇಗೌಡರ ಎದುರು ನಿಲ್ಲಿಸಿ ಗೆಲ್ಲಿಸುವ ತಂತ್ರ ಮಾಡಿದ್ದರು. ಆದರೆ ಅಂದುಕೊಂಡಂತೆ ಆಗಲೇ ಇಲ್ಲ ಎನ್ನುವುದು ಚುನಾವಣೆಯ ಫಲಿತಾಂಶಕ್ಕೆ ಮುನ್ನವೇ ಗೊತ್ತಾಗಿ ಹೋಗಿದೆ.

ಕ್ಷೇತ್ರದಲ್ಲಿ ಕಾಂಗ್ರೆಸ್ನ ಮೂಲ ನಾಯಕರಾದ ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ಸದಸ್ಯ ಕೆ.ಮರೀಗೌಡ, ಜಿಪಂ ಮಾಜಿ ಸದಸ್ಯರಾದ ರಾಕೇಶ್ ಪಾಪಣ್ಣ, ಅರುಣ್ ಕುಮಾರ್, ಮುಖಂಡರಾದ ಲೇಖಾ ವೆಂಕಟೇಶ್, ಕೂರ್ಗಳ್ಳಿ ಮಹದೇವ್, ಕೃಷ್ಣಕುಮಾರ್ ಸಾಗರ್, ಬೆಳ್ಳುಳ್ಳಿ ಬಸವರಾಜ್, ಮೆಲ್ಲಳ್ಳಿ ಮಹದೇವಸ್ವಾಮಿ ಹೀಗೆ ದೊಡ್ಡ ಪ್ರಮಾಣದಲ್ಲಿ ಆಕಾಂಕ್ಷಿಗಳಿದ್ದರೂ ಚುನಾವಣೆ ಘೋಷಣೆಗೆ ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮಾವಿನಹಳ್ಳಿ ಸಿದ್ದೇಗೌಡರಿಗೆ ಟಿಕೆಟ್ ನೀಡಿ ಸಿದ್ದರಾಮಯ್ಯರವರು ಕಣಕ್ಕಿಳಿಸಿದ್ದರು.
ಫಲಿತಾಂಶಕ್ಕೆ ಮುನ್ನವೇ ಸೋಲು ಒಪ್ಪಿಕೊಂಡ್ರಾ?
ಈ ಬೆಳವಣಿಗೆ ಕ್ಷೇತ್ರದ ಕಾಂಗ್ರೆಸ್ ನಾಯಕರನ್ನು ಕೆರಳಿಸಿತ್ತು. ಆದರೆ ಈ ತೀರ್ಮಾನದ ಹಿಂದೆ ಸಿದ್ದರಾಮಯ್ಯರವರು ಇದ್ದಿದ್ದರಿಂದ ಯಾರೂ ತುಟಿ ಬಿಚ್ಚಲಿಲ್ಲ. ಆದರೆ ಚುನಾವಣೆ ವೇಳೆ ಒಳ ಏಟು ಸರಿಯಾಗಿಯೇ ಹೊಡೆದಿದ್ದಾರೆ ಎನ್ನುವುದು ಗೊತ್ತಾಗಿದ್ದು, ಇದರ ಪರಿಣಾಮವೇ ಇವತ್ತು ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾವಿನ ಹಳ್ಳಿ ಸಿದ್ದೇಗೌಡರು ಸೇರಿದಂತೆ ಸಿದ್ದರಾಮಯ್ಯ ಫಲಿತಾಂಶಕ್ಕೆ ಮುನ್ನವೇ ಸೋಲನ್ನು ಒಪ್ಪಿಕೊಳ್ಳುವಂತಹ ಮಾತುಗಳನ್ನಾಡುತ್ತಿದ್ದಾರೆ.

2018ರ ಸೋಲಿನ ಬಳಿಕ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದತ್ತ ಮುಖ ಮಾಡಿರಲಿಲ್ಲ. ಈ ವೇಳೆ ಕ್ಷೇತ್ರದಲ್ಲಿ ಓಡಾಡುತ್ತಾ ಕಾಂಗ್ರೆಸ್ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಂಡಿದ್ದು ಜಿಪಂ ಮಾಜಿ ಅಧ್ಯಕ್ಷರಾಗಿದ್ದ ಮರೀಗೌಡರು. ಆದರೆ ಅವರಿಗೆ ಟಿಕೆಟ್ ನೀಡದೆ ಸಿದ್ದರಾಮಯ್ಯ ಅವರು ದ್ರೋಹ ಎಸಗಿಬಿಟ್ಟಿದ್ದರು. ಬಹುಶಃ ಅದಕ್ಕೆ ಈಗ ಪಶ್ಚಾತ್ತಾಪ ಪಡುವಂತಾಗಿದೆ ಎನ್ನುವುದು ಹಲವರ ಅಭಿಪ್ರಾಯವಾಗಿದೆ.











Click it and Unblock the Notifications