'ನೀನೊಬ್ಬ ಲೀಡರ್ರಾ?': ಶಿಷ್ಯನ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ
Recommended Video
ಮೈಸೂರು, ಮೇ 28: ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್. ಧ್ರುವನಾರಾಯಣ್ ಅವರ ಸೋಲಿನಿಂದ ಕೋಪಗೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ತಮ್ಮ ಶಿಷ್ಯ, ಸಚಿವ ಪುಟ್ಟರಂಗಶೆಟ್ಟಿ ವಿರುದ್ಧ ಹರಿಹಾಯ್ದ ಪ್ರಸಂಗ ಮಂಗಳವಾರ ನಡೆಯಿತು.
ಸಂಪುಟ ವಿಸ್ತರಣೆ ವೇಳೆ ಸಿ. ಪುಟ್ಟರಂಗಶೆಟ್ಟಿ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಹೀಗಾಗಿ ಈ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಪುಟ್ಟರಂಗಶೆಟ್ಟಿ ತೆರಳಿದ್ದರು.
ಚಾಮರಾಜನಗರದಲ್ಲಿ ಶಿಷ್ಯನ ವಿರುದ್ಧ ರೋಚಕ ಗೆಲುವು ಕಂಡ ಶ್ರೀನಿವಾಸಪ್ರಸಾದ್
ಆದರೆ, ಪುಟ್ಟರಂಗಶೆಟ್ಟಿ ಅವರನ್ನು ಕಾಣುತ್ತಲೇ ಸಿದ್ದರಾಮಯ್ಯ ಕೆಂಡಾಮಂಡಲರಾದರು. 'ನಿನ್ನ ಭಾಗದಲ್ಲಿ ಲೀಡ್ ಕಡಿಮೆಯಾಗಿದೆಯಂತಲ್ಲ? ನೀನೊಬ್ಬ ಲೀಡರ್ರಾ? ಹಿಂಗಾದ್ರೆ ಹೆಂಗೆ?' ಎಂದು ತರಾಟೆಗೆ ತೆಗೆದುಕೊಂಡರು. ಸಿದ್ದರಾಮಯ್ಯ ಅವರ ಸಿಡಿಮಿಡಿ ಕಂಡು ಪುಟ್ಟರಂಗಶೆಟ್ಟಿ ಸಮಜಾಯಿಷಿ ನೀಡಲು ಮುಂದಾದರು. 'ಲೀಡ್ ಕಡಿಮೆ ಬಂತು. ನನ್ನ ಕೈಯಲ್ಲಿ ಏನು ಮಾಡಲು ಆಗುತ್ತದೆ' ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಆದರೆ, ಚಾಮರಾಜನಗರ ಜಿಲ್ಲಾ ಉಸ್ತುವಾರಿಯೂ ಆಗಿರುವ ಪುಟ್ಟರಂಗಶೆಟ್ಟರ ಕ್ಷೇತ್ರದಲ್ಲಿಯೇ ಕಾಂಗ್ರೆಸ್ ಹಿನ್ನಡೆ ಅನುಭವಿಸಿರುವುದಕ್ಕೆ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು. ಇದರಿಂದ ಪುಟ್ಟರಂಗಶೆಟ್ಟಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿದರು.
ಸುಳ್ಳು ಹೇಳಿ ಬೋಳು ಹೊಡೆಸಿದರು! ಆಮೇಲೆ ಪರಾರಿಯಾದರು
ಸಿದ್ದರಾಮಯ್ಯ ಅವರ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿರುವ ಪುಟ್ಟರಂಗಶೆಟ್ಟಿ ಅವರಿಗೆ ಸಿದ್ದರಾಮಯ್ಯ ಅವರ ಪ್ರಭಾವದಿಂದ ಸಮ್ಮಿಶ್ರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸ್ಥಾನ ನೀಡಲಾಗಿತ್ತು. ಕಾಂಗ್ರೆಸ್ನ ಭದ್ರಕೋಟೆಯಾಗಿರುವ ಚಾಮರಾಜನಗರ ಲೋಕಸಭೆ ಕ್ಷೇತ್ರದಲ್ಲಿ ಸೋಲು ಅನುಭವಿಸಿರುವುದಕ್ಕೆ ಪುಟ್ಟರಂಗಶೆಟ್ಟಿ ಅವರ ವೈಫಲ್ಯವೂ ಒಂದು ಕಾರಣ ಎನ್ನಲಾಗಿದೆ. ಈ ಭಾಗದಲ್ಲಿ ಕಾಂಗ್ರೆಸ್ಗೆ ಇದು ಅನಿರೀಕ್ಷಿತ ಸೋಲಾಗಿದೆ.
ಸಂಪುಟ ವಿಸ್ತರಣೆ ವೇಳೆ ಅತೃಪ್ತ ಶಾಸಕರಿಗೆ ಆದ್ಯತೆ ನೀಡಲು ಕೆಲವು ಸಚಿವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಅವರಲ್ಲಿ ಪುಟ್ಟರಂಗಶೆಟ್ಟಿ ಅವರ ಹೆಸರೂ ಇದೆ ಎನ್ನಲಾಗಿದೆ.