2 ಕೋಟಿ ದರೋಡೆ : ಎಸ್ಐ ಸೇರಿ ಮೂವರ ಬಂಧನ
ಮೈಸೂರು, ಮೇ 23 : ಭಾರೀ ಕುತೂಹಲ ಮೂಡಿಸಿದ್ದ ಕೇರಳ ಬಸ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಗ್ರಾಮಾಂತರ ಠಾಣೆಯ ಎಸ್ಐ ಸೇರಿದಂತೆ ಮೂವರನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 10 ಜನರನ್ನು ಬಂಧಿಸಲಾಗಿದೆ.
ಗುರುವಾರ ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಸಮೀಪದ ಮನೆಯೊಂದರ ಮೇಲೆ ದಾಳಿ ನಡೆಸಿದ ಸಿಐಡಿ ಪೊಲೀಸರು, ದರೋಡೆ ಪ್ರಕರಣದಲ್ಲಿ ಬೇಕಾಗಿದ್ದ ಮೈಸೂರು ಗ್ರಾಮಾಂತರ (ದಕ್ಷಿಣ) ಠಾಣೆಯ ಎಸ್ಐ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರಿಂದಾಗಿ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿದಂತಾಗಿದೆ.

ಮೈಸೂರು ಗ್ರಾಮಾಂತರ ಠಾಣೆಯ ಎಸ್ಐ ಜಗದೀಶ್, ಪೇದೆಗಳಾದ ಮನೋಹರ ಹಾಗೂ ರವಿ ಬಂಧಿತ ಆರೋಪಿಗಳು. ಗುರುವಾರ ಸಂಜೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಮೂವರನ್ನು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಕಳೆದ ಎರಡು ತಿಂಗಳುಗಳಿಂದ ಈ ಮೂವರು ತಲೆ ಮರಿಸಿಕೊಂಡಿದ್ದರು.
ಪ್ರಕರಣವೇನು : ಕಳೆದ ಜನವರಿ 4ರಂದು ಕೇರಳಕ್ಕೆ ಹೋಗುತ್ತಿದ್ದ ಖಾಸಗಿ ಬಸ್ಸಿನಲ್ಲಿ ದಾಖಲೆರಹಿತವಾದ 2.25ಕೋಟಿ ಹಣ ಪತ್ತೆಯಾಗಿತ್ತು. ಬಸ್ಸಿನ ತಪಾಸಣೆ ನಡೆಸಿದ ಎಸ್ಐ ಜಗದೀಶ್ ನೇತೃತ್ವದ ಪೊಲೀಸರ ತಂಡ ಹಣವನ್ನು ವಶಪಡಿಸಿಕೊಂಡಿತ್ತು ಮತ್ತು ಎಫ್ಐಆರ್ ನಲ್ಲಿ ಪತ್ತೆಯಾದ ಹಣ ಕೇವಲ 20 ಲಕ್ಷ ಎಂದು ನಮೂದಿಸಿತ್ತು.
ಕೇರಳ ಮೂಲದ ಉದ್ಯಮಿಯೊಬ್ಬರು ಬಸ್ಸಿನಲ್ಲಿ 2 ಕೋಟಿ ಹಣ ಪತ್ತೆಯಾಗಿತ್ತು, ಪೊಲೀಸರು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ಗಮನಕ್ಕೆ ತಂದಿದ್ದರು. ಈ ಕುರಿತು 6 ಪೊಲೀಸರ ವಿರುದ್ಧ ಇಲವಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿತ್ತು. ನಂತರ ಇದನ್ನು ದರೋಡೆ ಪ್ರಕರಣ ಎಂದು ಪರಿಗಣಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಮಾಹಿತಿದಾರರಾದ ಅಬ್ದುಲ್ ಸಲೀಂ, ಷರೀಫ್, ಮುಸ್ತಫಾ, ದಕ್ಷಿಣ ವಲಯದ ಐಜಿಪಿ ಗನ್ಮ್ಯಾನ್ ಪ್ರಕಾಶ್, ಹೆಡ್ ಕಾನ್ಸ್ಟೆಬಲ್ ಸತೀಶ್, ಕಾನ್ಸ್ಟೆಬಲ್ ಲತೀಫ್ ಹಾಗೂ ಅಶೋಕ್ ಅವರನ್ನು ಬಂಧಿಸಲಾಗಿತ್ತು. ಮೂವರು ಮಾತ್ರ ತಲೆ ಮರಿಸಿಕೊಂಡಿದ್ದರು ಅವರನ್ನು ಗುರುವಾರ ವಶಕ್ಕೆ ಪಡೆಯಲಾಗಿದೆ.












Click it and Unblock the Notifications