ಒಂದು ಕಾಲದ ಪಾಲಿಕೆ ಜಮೇದಾರ್ ಮಗ ಈಗ ಮೈಸೂರು ಮೇಯರ್!
ಮೈಸೂರು, ಸೆಪ್ಟೆಂಬರ್ 7: ಅಪ್ಪ ಮಹಾರಾಜರ ಆಡಳಿತದ ಕಾಲದಿಂದ ಕೊನೆಯ ತನಕ ಪ್ರಥಮ ಪ್ರಜೆಯ ಜಮೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಮಗ ಈಗ ಮೇಯರ್ ಆಗಿ ಅಪ್ಪನ ಆಸೆಯನ್ನು ಈಡೇರಿಸಿದ್ದಾರೆ.
ಮಂಗಳವಾರ ತೀವ್ರ ಕುತೂಹಲ ಮೂಡಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣೆ ನಡೆದಿದ್ದು, ಆಡಳಿತರೂಢ ಬಿಜೆಪಿ ಮೇಯರ್ ಮತ್ತು ಉಪಮೇಯರ್ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಉಪಮೇಯರ್ ಸ್ಥಾನ ಜೆಡಿಎಸ್ಗೆ ಸಿಗಬೇಕಾಗಿತ್ತಾದರೂ ತಾಂತ್ರಿಕ ಅಡಚಣೆಯಿಂದ ಅವಕಾಶವನ್ನು ತಪ್ಪಿಸಿಕೊಂಡಿದೆ. ಮೇಯರ್ ಆಗಿ ಶಿವಕುಮಾರ್ ಆಯ್ಕೆಯಾದರೆ, ಉಪಮೇಯರ್ ಆಗಿ ರೂಪ ನಾಗೇಶ್ ಆಯ್ಕೆಯಾಗಿದ್ದಾರೆ.
ಸಾಮಾನ್ಯವಾಗಿ ಮೇಯರ್ ಕುಳಿತುಕೊಳ್ಳುವಾಗ ಅಥವಾ ನಿಂತಾಗ ಅವರ ಪಕ್ಕ ತುಂಬುಡುಗೆ ತೊಟ್ಟು ಗೌರವ ಸಲ್ಲಿಸಲು ಒಬ್ಬ ವ್ಯಕ್ತಿ ನಿಂತಿರುತ್ತಾರೆ. ಅವರನ್ನೇ ಜಮೇದಾರ್ ಎಂದು ಕರೆಯಲಾಗುತ್ತದೆ. ಸದ್ಯ ಮೈಸೂರು ಮೇಯರ್ ಆಗಿ ಆಯ್ಕೆ ಆಗಿರುವ ಶಿವಕುಮಾರ್ ಅವರ ಅಪ್ಪ ಪುಟ್ಟಯ್ಯ ಹಿಂದೆ ಜಮೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೇಯರ್ಗೆ ಗೌರವ ವಂದನೆ ಸಲ್ಲಿಸುವುದೇ ಆವರ ಕಾಯಕ. ಇದೀಗ ಅವರ ಮಗ ಶಿವಕುಮಾರ್ ಮೇಯರ್ ಆಗಿ ಸಾಧನೆ ಮಾಡಿದ್ದು, ಜಮೇದಾರ್ರಿಂದ ಗೌರವ ಪಡೆದುಕೊಳ್ಳಲಿದ್ದಾರೆ.

ತಂದೆಯನ್ನು ನೆನೆದ ನೂತನ ಮೇಯರ್
"ನಾನು ಮೊದಲಿನಿಂದಲೂ ಸಂಘಟನೆಯೊಂದಿಗೆ ಕೆಲಸ ಮಾಡಿದ್ದೇನೆ. ನನ್ನದು ಮಧ್ಯಮ ವರ್ಗದ ಕುಟುಂಬ. ಎಲ್ಲವೂ ಸುಲಭವಾಗಿ ಸಿಗುತ್ತಿರಲಿಲ್ಲ. ಅಪ್ಪ ನಮ್ಮನ್ನು ಕಷ್ಟ ಪಟ್ಟು ಬೆಳೆಸಿ ಓದಿಸಿದರು. ಹಾಗಾಗಿ ನನಗೆ ಮೊದಲಿನಿಂದಲೂ ಮೇಯರ್ ಆಗಿ ಅಪ್ಪನ ಆಸೆ ಈಡೇರಿಸಬೇಕೆಂಬ ಬಯಕೆ ಇತ್ತು. ಆದರೆ ನಿರೀಕ್ಷೆ ಇರಲಿಲ್ಲ. ಇದು ಬಯಸದೆ ಬಂದ ಭಾಗ್ಯ. ನಾನು ಮೊದಲ ಬಾರಿಗೆ ಪಾಲಿಕೆ ಸದಸ್ಯನಾದಾಗಲೂ ಅಪ್ಪ ನಮ್ಮೊಂದಿಗೆ ಇರಲಿಲ್ಲ. ಇದೀಗ ಮೇಯರ್ ಆದಾಗಲೂ ಅಪ್ಪ ಇಲ್ಲ" ಎಂದು ಶಿವಕುಮಾರ್ ಭಾವುಕರಾದರು.
ಶಿವಕುಮಾರ್ ರನ್ನು 'ಫೈವ್ ಓ ಕ್ಲಾಕ್' ಶಿವಣ್ಣ ಎಂದೆ ಎಲ್ಲರೂ ಕರೆಯುತ್ತಾರೆ. ಬೆಳಗ್ಗೆ 5 ಗಂಟೆಯಿಂದ ವಾರ್ಡ್ ಭೇಟಿ ಆರಂಭಿಸುವ ಶಿವಣ್ಣ ಬಡಾವಣೆಯಲ್ಲಿ ಏನೆಲ್ಲಾ ಸಮಸ್ಯೆ ಇದೆ ಎಂಬುದನ್ನು ಖುದ್ದು ಪರಿಶೀಲಿಸುತ್ತಾರೆ. ಈ ಬಾರಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಹಿರಿತನದ ಆಧಾರದ ಮೇಲೆ ಮಹಾಪೌರ ಸ್ಥಾನ ಶಿವಕುಮಾರ್ ಅವರಿಗೆ ಒಲಿದಿದೆ.

30 ವರ್ಷದಿಂದ ಆರ್ಎಸ್ಎಸ್ ನಂಟು
ಕಳೆದ 30 ವರ್ಷದಿಂದ ಆರ್ಎಸ್ಎಸ್ನೊಂದಿಗೆ ಶಿವಕುಮಾರ್ ನಂಟು ಇಟ್ಟುಕೊಂಡಿದ್ದಾರೆ. ಮೊದಲ ಬಾರಿಗೆ ಇವರು ಸುಣ್ಣದಕೇರಿಯ ವಾರ್ಡ್ ನಲ್ಲಿ 2008ರಲ್ಲಿ ಸ್ಪರ್ಧಿಸಿ ಜಯಗಳಿಸಿದ್ದರು. 2013ರಲ್ಲಿ 2ನೇ ಬಾರಿಗೆ ಜಯಗಳಿಸಿದ್ದ ಶಿವಕುಮಾರ್ ವಿರೋಧ ಪಕ್ಷದ ನಾಯಕ, ಹಣಕಾಸು ಸ್ಥಾಯಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದರು.

ವಿದ್ಯುತ್ ಗುತ್ತಿಗೆದಾರರಾಗಿ ಕೆಲಸ
2018ರಲ್ಲಿ ಕುವೆಂಪುನಗರ ವಾರ್ಡಿನಲ್ಲಿ ಸ್ಪರ್ಧಿಸಿ 3ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಸುನಂದ ಪಾಲನೇತ್ರ ಮಹಾಪೌರರಾಗಿ ಆಯ್ಕೆಯಾದಾಗ ಆಡಳಿತ ಪಕ್ಷದ ನಾಯಕರಾಗಿ ಶಿವಕುಮಾರ್ ಕರ್ತವ್ಯ ನಿರ್ವಹಿಸಿದರು. ಮರಿಮಲ್ಲಪ್ಪ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮುಗಿಸಿ ನಂತರ ಡಿಪ್ಲೊಮಾ ವ್ಯಾಸಂಗ ಮಾಡಿದ್ದ ಶಿವಕುಮಾರ್ ವಿದ್ಯುತ್ ಗುತ್ತಿಗೆದಾರರಾಗಿ ಕೆಲಸ ಮಾಡಿದ ಅನುಭವ ಇದೆ.

ಅನಿರೀಕ್ಷಿತವಾಗಿ ಮಹಾಪೌರ ಪಟ್ಟ
"ಮೇಯರ್ ಹುದ್ದೆಯ ನಿರೀಕ್ಷೆ ಇರಲಿಲ್ಲ. ಆದರೆ, ಅನಿರೀಕ್ಷಿತವಾಗಿ ಮಹಾಪೌರ ಪಟ್ಟ ಒಲಿದು ಬಂದಿದೆ. ಅದನ್ನು ಸದ್ಬಳಸಿಕೊಂಡು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವೆ. ನಾನು ಮೂರು ಬಾರಿ ಪಾಲಿಕೆ ಸದಸ್ಯನಾಗಿ ಜನರ ಕಷ್ಟ- ಕಾರ್ಪಣ್ಯ , ಆಗಬೇಕಿರುವ ಕೆಲಸಗಳ ಬಗ್ಗೆ ಅರಿವಿದ್ದು, ಜನರ ಹಾಗೂ ಪಕ್ಷದ ನಿರೀಕ್ಷೆಗೂ ಮೀರಿ ಕೆಲಸ ಮಾಡುವೆ" ಎಂದು ಹೇಳಿದರು.











Click it and Unblock the Notifications