ಮೈಸೂರಲ್ಲಿ ಗಂಟೆ ಲೆಕ್ಕದಲ್ಲಿ ಮನೆ ಪಡೆದು ವೇಶ್ಯಾವಾಟಿಕೆ
ಮೈಸೂರು, ಫೆಬ್ರವರಿ 14: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೇಶ್ಯಾವಾಟಿಕೆ ಜಾಲ ವ್ಯಾಪಿಸುತ್ತಿದ್ದು, ನಾಗರಿಕರಲ್ಲಿ ಆತಂಕಕ್ಕೆ ಎಡೆ ಮಾಡಿದೆ. ನಗರದ ಕೇಂದ್ರ ಭಾಗದಲ್ಲಿ ಕೇಂದ್ರೀಕೃತವಾಗಿದ್ದ ವೇಶ್ಯಾವಾಟಿಕೆ ಜಾಲವೀಗ ಬಡಾವಣೆಗಳಿಗೂ ವ್ಯಾಪಿಸಿದೆ. ಅಷ್ಟೇ ಅಲ್ಲ, ಪೊಲೀಸರ ಮಾಹಿತಿ ಪ್ರಕಾರ, ಪ್ರತಿ ತಿಂಗಳು ನಗರದ ವಿವಿಧ ಠಾಣೆಗಳಲ್ಲಿ ವೇಶ್ಯಾವಾಟಿಕೆಯ ಕನಿಷ್ಠ 10 ಪ್ರಕರಣಗಳು ದಾಖಲಾಗುತ್ತಿವೆ.
ಗಂಟೆ ಆಧಾರದಲ್ಲಿ ಮನೆ ಬಾಡಿಗೆ
ಪೊಲೀಸರು ನಿಗಾ ವಹಿಸಿದ ಹೊರತಾಗಿಯೂ, ದಾಳಿಗಳ ಮಧ್ಯೆಯೂ ಕೆಲವರು ದಂಧೆ ಮುಂದುವರಿಸಿದ್ದಾರೆ. ತಮ್ಮ ದಂಧೆಗಾಗಿ ಹೊಸ ದಾರಿಗಳನ್ನು ಕಂಡುಕೊಳ್ಳುತ್ತಿದ್ದಾರೆ. ಮೊದಲು ಬಾಡಿಗೆ ಮನೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದವರು, ಈಗ ಬಡಾವಣೆಗಳಲ್ಲಿ ಕೆಲವು ಮಹಿಳೆಯರ ಸ್ನೇಹ ಬೆಳೆಸಿ, ಕೊಠಡಿಗಳನ್ನು ಗಂಟೆಯ ಆಧಾರದ ಮೇಲೆ 300 ರಿಂದ 500 ರುಪಾಯಿವರೆಗೆ ಬಾಡಿಗೆಗೆ ಪಡೆಯುತ್ತಾರೆ. ಅಲ್ಲಿಗೆ ಗಿರಾಕಿಗಳನ್ನು ಬರಮಾಡಿಕೊಂಡು ದಂಧೆ ಮುಂದುವರಿಸಿದ್ದಾರೆ.[ಮಂಗಳೂರಿನಲ್ಲಿ ವೆಬ್ ಸೈಟ್ ಮೂಲಕ ವೇಶ್ಯಾವಾಟಿಕೆ, ಇಬ್ಬರು ಪೊಲೀಸ್ ವಶಕ್ಕೆ]

ಕಾನೂನುಬಾಹಿರ ಚಟುವಟಿಕೆಗಳಿಗೆ ಜಾಗ ನೀಡುವುದು ಕೂಡ ವ್ಯವಸ್ಥಿತ ಜಾಲ. ಕೆಲ ಮನೆಗಳನ್ನು ಗೊತ್ತು ಮಾಡಿಕೊಳ್ಳುವ ಯುವತಿಯರು ಗಿರಾಕಿಗಳ ಜತೆಗೆ ನೆಂಟರಂತೆ ಬಂದು, 1 ಗಂಟೆಗೆ ಕೊಠಡಿಯನ್ನು ಬಾಡಿಗೆಗೆ ಪಡೆದು ವೇಶ್ಯಾವಾಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.
ತಪ್ಪು ಎಂದು ತಿಳಿದಿದ್ದರೂ ಜಾಗ ನೀಡಿ, ಜನರು ಸಿಕ್ಕಿಬೀಳುತ್ತಿದ್ದಾರೆ. ಇತ್ತೀಚೆಗೆ ನಡೆದ ಕೆಲವು ದಾಳಿಗಳಲ್ಲಿ ಈ ಸತ್ಯ ಹೊರಬಿದ್ದಿದೆ. ಕಳೆದ ತಿಂಗಳು ವಿದ್ಯಾರಣ್ಯಪುರಂ ಪೊಲೀಸ್ ಠಾಣೆ ವ್ಯಾಪ್ತಿಯ ಜೆ.ಪಿ.ನಗರದ ನಿವಾಸವೊಂದರ ಮೇಲಿನ ದಾಳಿ ಹಾಗೂ ಕಳೆದ ವಾರ ಕುವೆಂಪುನಗರ ಠಾಣೆ ವ್ಯಾಪ್ತಿಯ ವಿವೇಕಾನಂದನಗರದ ಬಳಿಯ ನಿವಾಸದ ಮೇಲೆ ಸಿಸಿಬಿ ಪೊಲೀಸರು ನಡೆಸಿದ ದಾಳಿ ಇದಕ್ಕೆ ಸಾಕ್ಷಿಯಾಗಿದೆ.[ಮೈಸೂರು, ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ : ಐವರ ಬಂಧನ]
ಬಾಂಗ್ಲಾ ವಲಸಿಗರೇ ಹೆಚ್ಚು
ಇತ್ತೀಚೆಗೆ ಪೊಲೀಸರು ನಡೆಸಿದ ದಾಳಿ ವೇಳೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದವರಲ್ಲಿ ಬಾಂಗ್ಲಾ ದೇಶದ ಯುವತಿಯರನ್ನೇ ಹೆಚ್ಚಾಗಿ ರಕ್ಷಿಸಲಾಗಿದೆ. ಹಣದಾಸೆಗಾಗಿ ಮಧ್ಯವರ್ತಿಗಳು ವಿದೇಶಿ ಹಾಗೂ ಅನ್ಯ ರಾಜ್ಯಗಳ ಯುವತಿಯರನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ದು, ನಗರದಲ್ಲಿಯೂ ಇಂತಹ ಜಾಲವೊಂದು ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸುತ್ತಿದೆ.
ಆಯಾ ಬಡಾವಣೆ ವ್ಯಾಪ್ತಿಯ ಪೊಲೀಸರು ಹಾಗೂ ಸಿಸಿಬಿ ಪೊಲೀಸರ ಜೊತೆ ಜಂಟಿಯಾಗಿ ದಾಳಿ ನಡೆಸುವ ಮೂಲಕ ವೇಶ್ಯಾವಾಟಿಕೆಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.[ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ತು ಕಾರ್ಡ್ ಸ್ವೈಪಿಂಗ್ ಮೆಷಿನ್!]
ದಂಧೆ ಹತ್ತಿಕ್ಕಲು ಅರಿವು ಅತ್ಯಗತ್ಯ
ಇಂತಹವರನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸ. ಇದನ್ನು ತಡೆಗಟ್ಟುವುದು ಪೊಲೀಸರಿಗೂ ಕಷ್ಟ. ಹೀಗಾಗಿ ಸಾರ್ವಜನಿಕರು ಸಹಕಾರ ನೀಡಬೇಕು. ಇಂತಹ ಪ್ರಕರಣಗಳಲ್ಲಿ ಸಾರ್ವಜನಿಕರ ಪಾತ್ರವೇನು ಎಂಬುದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಫೆಬ್ರವರಿ 17ರಂದು ಒಡನಾಡಿ ಆವರಣದಲ್ಲಿ 1 ದಿನದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು ಒಡನಾಡಿ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ.











Click it and Unblock the Notifications