ಗಜಪಡೆ ಅರಮನೆಗೆ ಪ್ರವೇಶ... ಶ್ರೀರಾಮ, ಸುಗ್ರೀವ, ಪಾರ್ಥಸಾರಥಿಗೆ ಇದು ಮೊದಲ ದಸರಾ
ಮೈಸೂರು, ಸೆಪ್ಟೆಂಬರ್ 7 : ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಎರಡನೇ ಹಂತದ ಗಜಪಡೆ ಬುಧವಾರ ಅರಮನೆಯನ್ನು ಪ್ರವೇಶಿಸಿದೆ.
ಗೋಪಿ ನೇತೃತ್ವದಲ್ಲಿ 5 ಆನೆಗಳು ಮೈಸೂರು ನಗರಕ್ಕೆ ಆಗಮಿಸಿವೆ. ಬಂಡೀಪುರದ ರಾಮಪುರಂ ಆನೆ ಕ್ಯಾಂಪ್ನಿಂದ ಪಾರ್ಥಸಾರಥಿ ಹಾಗೂ ದುಬಾರೆ ಆನೆ ಶಿಬಿರದಿಂದ ಗೋಪಿ, ಶ್ರೀರಾಮ, ಸುಗ್ರೀವ, ವಿಜಯ ಆನೆಗಳು ಬಂದಿದೆ. ಈ ಐದು ಆನೆಗಳಿಗೆ ಅರಮನೆ ಆವರಣದಲ್ಲಿ ಸಾಂಕೇತಿಕವಾಗಿ ಸ್ವಾಗತ ಕೋರಲಾಯಿತು.
ಮೊದಲ ಬ್ಯಾಚ್ನಲ್ಲಿ ಒಂದು ಹೊಸ ಆನೆ ಮಹೇಂದ್ರ ಆಗಮಿಸಿದರೆ, ಎರಡನೇ ತಂಡದಲ್ಲಿ ಶ್ರೀರಾಮ, ಸುಗ್ರೀವ, ಪಾರ್ಥಸಾರಥಿ ಇದೇ ಮೊದಲ ಬಾರಿಗೆ ಜಂಬೂಸವಾರಿಯಲ್ಲಿ ಭಾಗವಹಿಸಲು ಬಂದಿವೆ. ಇಡೀ ದಸರೆಯಲ್ಲಿ ಅತ್ಯಂತ ಚಿಕ್ಕ ವಯಸ್ಸಿನ ಆನೆ ಪಾರ್ಥಸಾರಥಿಯಾಗಿದೆ. ಗಜಪಡೆ ಕ್ಯಾಪ್ಟನ್ ಅಭಿಮಯ್ಯ ನೇತೃತ್ವದಲ್ಲಿ ನಾಗರಹೊಳೆಯ ವೀರನಹೊಸಳ್ಳಿಯಿಂದ ಆಗಸ್ಟ್ 10ರಂದು ಮೊದಲ ಹಂತದ ಗಜಪಡೆ ತಂಡವು, ಅರಮನೆ ಪ್ರವೇಶಿಸಿತ್ತು.

ಈ ಬಾರಿಯ ದಸರಾ ಮಹೋತ್ಸವದಲ್ಲಿ 14 ಆನೆಗಳು ಪಾಲ್ಗೊಳ್ಳುತ್ತಿದ್ದು, ಈಗಾಗಲೇ ಮೊದಲ ತಂಡದಲ್ಲಿ ಅಂಬಾರಿ ಹೊರಲಿರುವ ಅಭಿಮನ್ಯು, ಅರ್ಜುನ, ಗೋಪಾಲಸ್ವಾಮಿ, ಧನಂಜಯ, ಭೀಮ, ಮಹೇಂದ್ರ, ಕಾವೇರಿ, ಚೈತ್ರ, ಲಕ್ಷ್ಮೀ ಆನೆಗಳು ಅರಮನೆ ಪ್ರವೇಶಿಸಿ ಯಶಸ್ವಿಯಾಗಿ ತಾಲೀಮು ನಡೆಸುತ್ತಿವೆ. ಇನ್ನು ಜಂಬೂಸವಾರಿ ಒಂದು ತಿಂಗಳು ಇರುವಂತೆ ಎರಡನೇ ತಂಡದ ಆನೆಗಳನ್ನು ಅರಮನೆ ಆವರಣಕ್ಕೆ ಅರಣ್ಯ ಇಲಾಖೆ ಬುಧವಾರ ಕರೆತಂದಿತು. ಆಯಾಯ ಕ್ಯಾಂಪ್ಗಳಲ್ಲೇ ಆನೆಗಳಿಗೆ ಪೂಜೆ ಮಾಡಿ ನಂತರ ನೇರ ಅರಮನೆಗೆ ಕರೆತರಲಾಯಿತು.
ಕುಂತಿ ಬದಲು ಸುಗ್ರೀವ
ಬಂಡೀಪುರದ ರಾಂಪುರ ಕ್ಯಾಂಪ್ ಶಿಬಿರದಲ್ಲಿರುವ 36 ವರ್ಷದ ಕುಂತಿ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿತ್ತು. ಇದೇ ಮೊದಲ ಬಾರಿಗೆ ಕುಂತಿ ದಸರಾದಲ್ಲಿ ಭಾಗವಹಿಸಬೇಕಿತ್ತು. ಆದರೆ, ಕುಂತಿ ಗರ್ಭಿಣಿಯಾದ ಕಾರಣ ಸುಗ್ರೀವನಿಗೆ ದಸರಾದಲ್ಲಿ ಹೆಜ್ಜೆ ಹಾಕುವ ಅವಕಾಶ ಒಲಿದಿದೆ.
ಸೆ.12ರಂದು ಕುಶಾಲುತೋಪು ತಾಲೀಮು
ಸೆಪ್ಟೆಂಬರ್ 12ರಂದು ಗಜಪಡೆಗೆ ಮೂರು ಹಂತದಲ್ಲಿ ಕುಶಾಲತೋಪಿನ ತಾಲೀಮು ನಡೆಸಲಾಗುತ್ತದೆ. 6 ಫಿರಂಗಿಗಳಿಂದ ತಲಾ 3 ಸುತ್ತಿನಂತೆ ಒಟ್ಟು 18 ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ. ಬಲರಾಮ ಗೇಟ್ನಿಂದ ಬನ್ನಿಮಂಟಪದವರೆಗೆ ಗಜಪಡೆ ಸಾಗುವ 5 ಕಿ.ಮೀ. ಹಾದಿಯಲ್ಲಿ ನಾಲ್ಕು ದಿನಗಳ ಮುಂಚಿತವಾಗಿ ದಸರಾ ದೀಪಾಲಂಕಾರ ವ್ಯವಸ್ಥೆ ಕಲ್ಪಿಸಬೇಕೆಂದು ಡಿಸಿಎಫ್ ಡಾ.ವಿ.ಕರಿಕಾಳನ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.












Click it and Unblock the Notifications