ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಎಷ್ಟು ವರ್ಷ ಇರುತ್ತಾರೆ ಗೊತ್ತಿಲ್ಲ! ಸತೀಶ್ ಜಾರಕಿಹೊಳಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿ ಐದು ವರ್ಷ ಇರುತ್ತಾರೋ ಅಥವಾ ಮೂರು ವರ್ಷ ಇರುತ್ತಾರೋ ಅದು ನನಗೆ ಗೊತ್ತಿಲ್ಲ. ಸದ್ಯಕ್ಕೆ ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವಿಸಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದು, ಹಲವು ದಿನಗಳಿಂದ ಉಂಟಾಗಿದ್ದ ಸಿಎಂ ಬದಲಾವಣೆ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಆದರೂ ಸಿದ್ದರಾಮಯ್ಯ ಎಷ್ಟು ವರ್ಷ ಸಿಎಂ ಆಗಿರುತ್ತಾರೆ ಗೊತ್ತಿಲ್ಲ ಎನ್ನುವ ಮೂಲಕ ಮುಂದಿನ ದಿನಗಳಲ್ಲಿ ಸಿಎಂ ಬದಲಾವಣೆಯ ಸುಳಿವು ಕೊಟ್ರಾ ಎನ್ನುವ ಕುತೂಹಲ ಉಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಸಿದ್ದರಾಮಯ್ಯನವರು ಎಷ್ಟು ವರ್ಷ ಸಿಎಂ ಆಗಿರುತ್ತಾರೆ ಎನ್ನುವುದನ್ನು ಹೈಕಮಾಂಡ್ಗೆ ಕೇಳಬೇಕು. ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿಯಾಗಿದ್ದು, ಅವರ ಬದಲಾವಣೆ ಚರ್ಚೆಗಳೂ ನಡೆದಿಲ್ಲ. ಆದರೆ ಪ್ರತಿಪಕ್ಷಗಳು, ಮಾಧ್ಯಮಗಳಲ್ಲಷ್ಟೇ ಈ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಹೇಳಿದರು.

ಸಿಎಂ ಆಗಲು ಯಾರಿಗೆ ತಾನೆ ಇಷ್ಟ ಇರುವುದಿಲ್ಲ? ನನ್ನ ಮಗಳು ಆಸೆ ಪಡುವುದರಲ್ಲಿ ತಪ್ಪೇನಿದೆ? ಕಳೆದ ಐದು ವರ್ಷದಿಂದ ಎಲ್ಲರೂ ಸಿಎಂ ಆಗಬೇಕು ಅಂತಿದ್ದಾರೆ. ಸದ್ಯಕ್ಕೆ ಸಿಎಂ ಇದ್ದಾರೆ, ಪಕ್ಷದಲ್ಲಿ ಅಂತ ಬೆಳವಣಿಗೆ ನಡೆದಿಲ್ಲ. ನಾನು ಈ ವಿಚಾರವನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದರು.
ರಾಜಕಾರಣದಲ್ಲಿ ಚರ್ಚೆ ಸಾಮಾನ್ಯ
ಸಚಿವ ಮಹದೇವಪ್ಪ ಜತೆಗಿನ ಭೇಟಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜಕಾರಣಿಗಳು ಸೇರಿದ ಮೇಲೆ ರಾಜಕಾರಣದ ಚರ್ಚೆ ಸಾಮಾನ್ಯ. ಇವತ್ತಿನ ಭೇಟಿಯಲ್ಲಿ ಮಹತ್ವದ ವಿಚಾರವೇನೂ ಇಲ್ಲ. ಡಿ.ಕೆ.ಶಿವಕುಮಾರ್ ವಿಚಾರ ಮತ್ತೊಬ್ಬರ ವಿಚಾರ ನಾನೇನೂ ಹೇಳಲು ಸಾಧ್ಯವಿಲ್ಲ. ಹರಿಯಾಣ, ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ಗೆ ಹೆಚ್ಚು ಸ್ಥಾನ ಸಿಕ್ಕಿದೆ. ದೇಶಾದ್ಯಂತ ಕಾಂಗ್ರೆಸ್ ಪರ ಅಲೆ ಇದೆ ಎಂದರು.
ಮಂಗಳವಾರ ಬೆಳಗ್ಗೆ ಮೈಸೂರಿಗೆ ಆಗಮಿಸಿದ ಸಚಿವ ಸತೀಶ್ ಜಾರಕಿಹೊಳಿ ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಅವರ ನಗರದ ಸುಣ್ಣದ ಕೇರಿಯಲ್ಲಿರುವ ನಿವಾಸಕ್ಕೆ ತೆರಳಿ ಉಪಾಹಾರ ಸೇವಿಸಿದರು. ಈ ವೇಳೆ ಎಚ್.ಡಿ. ಕೋಟೆ ಶಾಸಕ ಅನಿಲ್ ಚಿಕ್ಕಮಾದು ಕೂಡ ಹಾಜರಿದ್ದು ಜಾರಕಿಹೊಳಿಯೊಂದಿಗೆ ಮಾತುಕತೆ ನಡೆಸಿದರು.
ಬಳಿಕ ಶಾಸಕ ಕೆ. ಹರೀಶ್ಗೌಡ ಅವರ ಕೆ.ಜಿ. ಕೊಪ್ಪಲಿನಲ್ಲಿರುವ ಮನೆಗೆ ಭೇಟಿ ನೀಡಿ, ಮಾತುಕತೆ ನಡೆಸಿದರು. ಈ ವೇಳೆ ಕೆ.ಆರ್. ನಗರ ಶಾಸಕ ಡಿ. ರವಿಶಂಕರ್, ಮುಡಾ ಅಧ್ಯಕ್ಷ ಮರಿಗೌಡ ಕೂಡ ಜೊತೆಗಿದ್ದರು.












Click it and Unblock the Notifications