ವಿಶ್ವನಾಥ್ ಅನರ್ಹತೆ ಹಿಂದೆ ಬಾಂಬೆ ಟೀಂ ಕರಾಮತ್ತಿದೆ; ಹೊಸ ಬಾಂಬ್ ಸಿಡಿಸಿದ ಸಾರಾ ಮಹೇಶ್
ಮೈಸೂರು, ಡಿಸೆಂಬರ್ 01: ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಸಚಿವರಾಗಲು ಅರ್ಹರಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದ್ದು, ಇದರ ಹಿಂದೆ ಬಾಂಬೆ ಟೀಂ ಕರಾಮತ್ತು ಇದೆ. ಬಾಂಬೆ ಟೀಂನಲ್ಲಿರುವ ಸಚಿವಾಕಾಂಕ್ಷಿಗಳು ಹೈಕೋರ್ಟ್ ನಲ್ಲಿ ಪಿಐಎಲ್ ಹಾಕಿಸಿ ವಿಶ್ವನಾಥ್ ಗೆ ಅತಂತ್ರ ಪರಿಸ್ಥಿತಿ ತಂದಿಟ್ಟಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ಹೊಸ ಬಾಂಬ್ ಸಿಡಿಸಿದರು.
ಮೈಸೂರಿನಲ್ಲಿ ಮಂಗಳವಾರ ಮಾತನಾಡಿದ ಅವರು, ಕಳೆದ ವರ್ಷ ಇದೇ ಸಮಯದಲ್ಲಿ ನಾನು ಚಾಮುಂಡಿ ಬೆಟ್ಟದಲ್ಲಿ ಆಣೆ ಪ್ರಮಾಣ ಮಾಡುವ ವಿಚಾರದಲ್ಲಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕುಳಿತು ಕಣ್ಣೀರು ಇಟ್ಟಿದ್ದೆ. ಗ್ರಾಮ ದೇವತೆ ತಾಯಿ ಚಾಮುಂಡೇಶ್ವರಿ ದೇವಿ ನ್ಯಾಯ ದೇವತೆಯಾಗಿ ಈಗ ವಿಶ್ವನಾಥ್ ಗೆ ಈ ರೀತಿಯ ಶಿಕ್ಷೆ ಕೊಡಿಸಿದ್ದಾಳೆ ಎಂದು ಸಾ.ರಾ.ಮಹೇಶ್ ತಿಳಿಸಿದರು.
ಸಚಿವರಾಗುವಂತಿಲ್ಲ: ಎಚ್ ವಿಶ್ವನಾಥ್ ಅವರಿಗೆ ಭಾರಿ ಆಘಾತ ನೀಡಿದ ಹೈಕೋರ್ಟ್
ಈ ಕಾರಣದಿಂದ ಇಂದು ಮತ್ತೆ ಚಾಮುಂಡೇಶ್ವರಿ ಸನ್ನಿಧಿಗೆ ಹೋಗಿ 1001 ರೂಪಾಯಿ ತಪ್ಪು ಕಾಣಿಕೆಯನ್ನು ಹುಂಡಿಯಲ್ಲಿ ಹಾಕಿ ನನ್ನಿಂದ ಏನಾದರೂ ತಪ್ಪಾಗಿದ್ರೆ ಕ್ಷಮಿಸು ಎಂದು ದೇವರನ್ನು ಕೇಳಿಕೊಂಡಿದ್ದೇನೆ. ನಿನ್ನ ಕ್ಷೇತ್ರವನ್ನು ಸಾಕ್ಷಿಯಾಗಿಟ್ಟಿದ್ದಕ್ಕೆ ಕ್ಷಮಿಸು ತಾಯಿ ಎಂದು ಕೇಳಿಕೊಂಡು ಬಂದೆ. ವಿಶ್ವನಾಥ್ ಅವರನ್ನು ಮಂತ್ರಿ ಮಾಡುವ ಇರಾದೆ ಬಿಜೆಪಿಯವರಿಗೆ ಇರಲಿಲ್ಲ. ಈ ಕಾರಣದಿಂದಲೇ ನಾಮ ನಿರ್ದೇಶನ ಮಾಡಿದ್ದಾರೆ. ಈಗ ಈ ಇಳಿವಯಸ್ಸಲ್ಲಿ ಪಾಪ ವಿಶ್ವನಾಥ್ ಗೆ ಈ ಗತಿ ಬಂತಲ್ಲ ಅಂತ ಸಾ.ರಾ.ಮಹೇಶ್ ವ್ಯಂಗೋಕ್ತಿಯಲ್ಲಿ ಮರುಕ ಪಟ್ಟರು.
ವಾಹನದ ಇಂಜಿನ್ ಸೀಜ್ ಆಗಿ ಕಾಂಗ್ರೆಸ್ ಪಕ್ಷದಲ್ಲಿ ಓಡದೆ ನಿಂತಿದ್ದ ಗಾಡಿಯನ್ನು ನಾವು ಜೆಡಿಎಸ್ ಗೆ ತಂದು ರಿಪೇರಿ ಮಾಡಿಸಿ ಬಣ್ಣ ಹೊಡೆಸಿ ಹೊಸದಾಗಿ ರೂಪಿಸಿದ್ದೆವು. ವಿಶ್ವನಾಥ್ ಕಾಗೆ ಅಲ್ಲ ಕೋಗಿಲೆ ಎಂದು ನಂಬಿಸಿದ್ದೆವು. ಈ ಎಲ್ಲಾ ಬೆಳವಣಿಗೆಗಳಿಂದ ವಿಶ್ವನಾಥ್ ರಾಜಕೀಯ ಭವಿಷ್ಯ ಮಂಕಾಗುತ್ತದೆ ಎಂದು ಸಾ.ರಾ.ಮಹೇಶ್ ಹೇಳಿದರು.