ವಂಚಕ ಯುವರಾಜ್ ಬಗ್ಗೆ ಆರ್ಎಸ್ಎಸ್ ಮುಖಂಡರ ಸ್ಪಷ್ಟನೆ
ಮೈಸೂರು, ಜನವರಿ 07: ವಂಚಕ ಯುವರಾಜ್ ಸ್ವಾಮಿ ಬಗ್ಗೆ ಕರ್ನಾಟಕದಲ್ಲಿ ಚರ್ಚೆಗಳು ಜೋರಾಗಿದೆ. ಹಣ ವಂಚನೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಯುವರಾಜ್ ಸ್ವಾಮಿ ಆರ್ಎಸ್ಎಸ್ಗೆ ಸೇರಿದವನು ಎಂಬ ಸುದ್ದಿಗಳು ಹಬ್ಬಿವೆ.
ಗುರುವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಮುಖಂಡ ಮಾ. ವೆಂಕಟರಾಮು, "ಯುವರಾಜ್ ಎಂಬ ವ್ಯಕ್ತಿ ಆರ್ಎಸ್ಎಸ್ನವನಲ್ಲ. ಅವನಿಗೂ ಸಂಘಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಸ್ಪಷ್ಟಪಡಿಸಿದರು.
"ಯುವರಾಜ್ ಸ್ವಾಮಿ ತಾನೊಬ್ಬ ಆರ್ಎಸ್ಎಸ್ ಮುಖಂಡನೆಂದು ಹೇಳಿಕೊಂಡು ಹಲವರು ಗಣ್ಯರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ" ಎಂದು ಹೇಳಿದರು.

"ನನ್ನ ಜೀವಮಾನದಲ್ಲಿ ಅವನನ್ನು ನೋಡಿಲ್ಲ. ನಮ್ಮ ಸಂಘಕ್ಕೆ ಮಸಿ ಬಳಿಯುವುದಕ್ಕೆ ನಡೆದಿರುವ ಷಡ್ಯಂತ್ರ ಇದಾಗಿದೆ. ಸಾರ್ವಜನಿಕರು ಇಂತಹ ಮೋಸಗಾರರಿಗೆ ಬಲಿಯಾಗಬಾರದು" ಎಂದು ಮಾ. ವೆಂಕಟರಾಮು ಕರೆ ನೀಡಿದರು.
ಶ್ರೀ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣ ಟ್ರಸ್ಟ್ ಕರ್ನಾಟಕದ ಸಹ ಪ್ರಮುಖರಾದ ಬಸವರಾಜು ಮಾತನಾಡಿ, "ರಾಮ ಜನ್ಮಭೂಮಿಯಲ್ಲಿ ಬೃಹತ್ ರಾಮಮಂದಿರ ನಿರ್ಮಾಣಕ್ಕಾಗಿ ಜ.15 ರಿಂದ ಫೆ.27ರವರೆಗೆ ನಿಧಿ ಸಮರ್ಪಣೆ ನಡೆಸಲಾಗುತ್ತಿದೆ. ರಾಜ್ಯಾದ್ಯಂತ 27,500 ಗ್ರಾಮಗಳಲ್ಲಿ ನಿಧಿ ಸಂಗ್ರಹಿಸಲಾಗುವುದು. ಕರ್ನಾಟಕದಲ್ಲಿ 90 ಲಕ್ಷ ಹಿಂದೂಗಳ ಮನೆ ತಲುಪುವ ಗುರಿ ಹೊಂದಲಾಗಿದೆ" ಎಂದರು.
"ಕೂಪನ್ಗಳನ್ನು ನೀಡಿ ಧನ ಸಂಗ್ರಹ ಮಾಡಲು ನಿರ್ಧರಿಸಲಾಗಿದೆ. 10, 100, 1,000 ರೂ.ಗಳ ಕೂಪನ್ ಮೂಲಕ ಧನ ಸಂಗ್ರಹ ಮಾಡಲಾಗುವುದು. 2,000 ರೂ. ಅಥವಾ ಅದಕ್ಕಿಂತ ಹೆಚ್ಚು ಹಣ ಅರ್ಪಿಸಿದವರಿಗೆ ರಶೀದಿ ನೀಡಲಾಗುವುದು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಹಣ ಪಡೆಯದೇ ರಾಮಮಂದಿರ ನಿರ್ಮಾಣ ಮಾಡಲು ಸಂಕಲ್ಪ ಮಾಡಲಾಗಿದೆ" ಎಂದು ಮಾಹಿತಿ ನೀಡಿದರು.
"ದೇಶದ ಪ್ರತಿಯೊಬ್ಬ ರಾಮಭಕ್ತರಿಂದಲೇ ಹಣ ಸಂಗ್ರಹಿಸಿ ಮಂದಿರ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಕರ್ನಾಟದಲ್ಲಿ ನಿಧಿ ಸಂಗ್ರಹಕ್ಕಾಗಿ 5 ಕಾರ್ಯಕರ್ತರನ್ನೊಳಗೊಂಡ 28 ಸಾವಿರ ತಂಡಗಳು ರಚಿಸಲಾಗುವುದು. ಹಣ ಸಂಗ್ರಹಣೆ ಹಾಗೂ ಖಾತೆಗೆ ಜಮಾವಣೆ ವಿಚಾರದಲ್ಲಿ ಸಂಪೂರ್ಣ ಪಾರದರ್ಶಕತೆ ಇರಲಿದೆ" ಎಂದು ವಿವರಣೆ ನೀಡಿದರು.












Click it and Unblock the Notifications