ಈ ಬಾರಿ ಮೈಸೂರು ದಸರೆ ಕಾಮಗಾರಿಗೆ ಬೇಕು ಬರೋಬ್ಬರಿ 27 ಕೋಟಿ!
ಮೈಸೂರು, ಸೆಪ್ಟೆಂಬರ್.25: ಅಕ್ಟೋಬರ್ 10 ರಿಂದ 19ರವರೆಗೆ ನಡೆಯಲಿರುವ ವಿಶ್ವವಿಖ್ಯಾತ ಮೈಸೂರು ದಸರೆಯ ಕಾಮಗಾರಿಗಳಿಗೆ ಬರೋಬ್ಬರಿ 27 ಕೋಟಿ ಖರ್ಚಾಗಲಿದೆ. ಸಾಂಸ್ಕೃತಿಕ ನಗರಿಯ ಸೌಂದರ್ಯದ ವೃದ್ಧಿಗಾಗಿ ಅಂದಾಜು 27 ಕೋಟಿ ವ್ಯಯಿಸಲು ಪಾಲಿಕೆ ಚಿಂತಿಸಿದ್ದು, ಈ ಸಂಬಂಧ ಅಂದಾಜು ಪಟ್ಟಿಯನ್ನು ಸಹ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ.
ಕಳೆದ ಬಾರಿ ಕಾಮಗಾರಿಗೆ 25 ಕೋಟಿ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಸರಕಾರ ಬಿಡುಗಡೆ ಮಾಡಿದ್ದು 10 ಕೋಟಿ ರೂ.ಮಾತ್ರ. ಈ ಬಾರಿ ಖಾಸಗಿಯವರನ್ನು ದಸರಾ ಸಂಭ್ರಮದ ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿಸಲು ಚಿಂತನೆ ನಡೆದಿದೆ.
ಅವರಿಂದ ಪ್ರಾಯೋಜಕತ್ವ ಪಡೆದು ಪ್ರಮುಖ ರಸ್ತೆಗಳ ಗೋಡೆಗಳ ಮೇಲೆ ಕಲಾಕೃತಿಗಳ ರಚನೆ, ರಸ್ತೆಗಳ ಮಧ್ಯೆ ಸಸಿ ಬೆಳೆಸುವುದು ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪ್ರಾಯೋಜಕತ್ವ ನೀಡುವಂತೆ ಮೈಸೂರು ಹೋಟೆಲ್ ಮಾಲೀಕರ ಸಂಘ, ಜಿಲ್ಲಾಡಳಿತ ಮತ್ತು ಇನ್ನಿತರ ಪ್ರಾಯೋಜಕರೊಂದಿಗೆ ಮೈಸೂರು ಮಹಾನಗರ ಪಾಲಿಕೆ ಮಾತುಕತೆ ನಡೆಸಿ, ಸಹಕಾರ ಕೇಳಿದೆ. ಪ್ರಾಯೋಜಕರಾದ ಮಹಾಲಕ್ಷ್ಮಿ ಸ್ವೀಟ್ಸ್, ಭೀಮ ಜ್ಯುವೆಲರ್ಸ್ ಹಾಗೂ ಬ್ರಿಗೇಡ್ ಗ್ರೂಪ್ ಸಂಸ್ಥೆಗಳು ಈಗಾಗಲೇ ನಗರ ಸೌಂದರ್ಯ ಕಾಮಗಾರಿಗೆ ಹಣವನ್ನು ನೀಡಿವೆ.
ಭಾರತದ ಸರ್ಫಾಕೋಟ್ಸ್ ಸಂಸ್ಥೆ ಕಲಾಕೃತಿಗಳ ರಚನೆಗೆ ಬೇಕಾಗುವ ಸಂಪೂರ್ಣ ಬಣ್ಣ, ಬ್ರಷ್, ಇನ್ನಿತರ ಬಣ್ಣಗಳು ಹಾಗೂ ಬಣ್ಣಕ್ಕೆ ಬೇಕಾಗುವ ಬಿಡಿ ಭಾಗಗಳನ್ನು ನೀಡಲಿದೆ. ಇನ್ನು ಕೆಲವು ಸಂಸ್ಥೆ ಗಳು ಕಲಾತ್ಮಕ ಹೂ-ಗಿಡಗಳು ಹಾಗೂ ವಸ್ತು ಗಳನ್ನು ನೀಡಲು ಮುಂದೆ ಬಂದಿವೆ.
ಸಾರ್ವಜನಿಕರು ಗೋಡೆಗಳನ್ನು ಶೌಚಾಲಯದಂತೆ ಬಳಸುವುದನ್ನು ತಪ್ಪಿಸಲು ಗೋಡೆಗಳ ಮೇಲೆ ಕಲಾ ಕೃತಿಗಳನ್ನು ಬಿಡಿಸುವುದು ಮುಖ್ಯ ಉದ್ದೇಶವಾಗಿದೆ. ಇಡೀ ದಿನ ಸ್ವಚ್ಛತೆ ಬಗ್ಗೆ ಗಮನಹರಿಸಲು ಹೆಚ್ಚಿನ ಸ್ವಚ್ಛತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಆರೋಗ್ಯ, ಸ್ವಚ್ಛತೆ ಬಗ್ಗೆ ಗಮನ ನೀಡುವ ಜತೆಗೆ ಮೊಬೈಲ್ ಶೌಚಾಲಯಗಳನ್ನು ಬಳಸಲಾಗುತ್ತಿದೆ ಎಂಬುದು ವಿಶೇಷ.












Click it and Unblock the Notifications