ಅಂಬಿ ವಿರುದ್ಧ ಮಾತನಾಡಿದ ಸಿಎಂಗೆ ರಾಕ್ಲೈನ್ ಮಾತಿನ ಗುದ್ದು
ಮೈಸೂರು, ಮಾರ್ಚ್ 2 : ಅಂಬರೀಶ್ ಬಗ್ಗೆ ಮಂಡ್ಯಕ್ಕೆ ಅವರ ಕೊಡುಗೆಯೇನು ಎಂದು ಹಗುರವಾಗಿ ಮಾತನಾಡಿದ ಸಿಎಂ ಕುಮಾರಸ್ವಾಮಿ ವಿರುದ್ಧ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕಿಡಿಕಾರಿದ್ದಾರೆ.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಶ್ರೀಗಳನ್ನು ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಅಂಬರೀಶ್ ಅವರು ಶಾಲಾ ದಿನಗಳಿಂದಲೂ ಅವರ ಜೊತೆ ಇದ್ದಿದ್ದೆ.
ಈಗ ಅವರು ಇಲ್ಲ, ನಾನು ಸುಮಲತ ಅಕ್ಕ ಅವರ ಜೊತೆ ಇದ್ದೀನಿ. ಅವರು ರಾಜಕೀಯದಲ್ಲಿ ಇದ್ದರೂ, ಸಿನಿಮಾದಲ್ಲಿ ಇದ್ದರೂ ಅವರ ಜೊತೆಯಲ್ಲೇ ಇರುವೆ. ಅಂಬರೀಶ್ ಅವರು ಬದುಕಿದ್ದಾಗ ಒಂದು ರೀತಿ, ಈಗಿನ ಪರಿಸ್ಥಿತಿ ಬೇರೆ.

ಅವರು ಬದುಕಿದ್ದಾಗ ಅವರ ಮುಂದೆ ಮಾತನಾಡಲು ಆಗದಿದ್ದವರು ಈಗ ಅವರು ಇಲ್ಲದಿದ್ದಾಗ ಮಾತನಾಡುತ್ತಿದ್ದಾರೆ. ಕೆಲವರು ಅವರು ಬದುಕಿದ್ದಾಗ ಗೌರವ ಕೊಡುತ್ತಿದ್ದವರು ಈಗ ವ್ಯತಿರಿಕ್ತವಾಗಿ ಮಾತನಾಡುತ್ತಿದ್ದಾರೆ. ಅವರು ಮಾತನಾಡುವುದು ನಮಗೆ ಹೆಚ್ಚು ಧೈರ್ಯ ತರುತ್ತಿದೆ. ಅದಕ್ಕೆ ಮುಂದೆ ಜನ ಉತ್ತರ ಕೊಡುತ್ತಾರೆ ಎಂದು ಪರೋಕ್ಷವಾಗಿ ಸಿಎಂ ಕುಮಾರಸ್ವಾಮಿಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಟಾಂಗ್ ನೀಡಿದರು.
ಅಂಬರೀಶ್ ತಮ್ಮ ಕುಟುಂಬ ರಾಜಕೀಯಕ್ಕೆ ತರಬೇಕು ಎಂದು ಅಂದುಕೊಂಡಿರಲಿಲ್ಲ. ಆದರೆ ಮಂಡ್ಯ ಜನರ ಋಣ ತಿರಿಸಲು ಸುಮಲತಾರವರು ರಾಜಕೀಯಕ್ಕೆ ಬರುವ ಯೋಚನೆ ಮಾಡಿದ್ದಾರೆ. ಇಲ್ಲಿ ಸೋಲು ಗೆಲುವಿನ ಪ್ರಶ್ನೆ ಇಲ್ಲ. ನಾನು ಮಂಡ್ಯ ಜನರ ಭಾವನೆಗೆ ಸ್ಪಂಸಿಸಿದೆವು ಎಂಬುದು ಮಾತ್ರ ಮುಖ್ಯವಾಗುತ್ತದೆ ಎಂದರು.
ಕುಮಾರಸ್ವಾಮಿ ಹಾಗೂ ನಿಖಿಲ್ ನನಗೆ ತುಂಬಾ ಆತ್ಮೀಯರೆ. ಅವರು ರಾಜಕೀಯಕ್ಕೆ ಬರಬೇಕು. ಎಲ್ಲಿಂದ ಬೇಕಾದರೂ ಸ್ಪರ್ಧೆ ಮಾಡಲಿ. ಅವರೇ ಬೇಕಾದರೇ ಗೆಲ್ಲಲಿ. ಆದರೆ ಇನ್ನೊಬ್ಬರ ಬಗ್ಗೆ ವ್ಯತಿರಿಕ್ತವಾಗಿ ಹಗುರವಾಗಿ ಮಾತನಾಡುವುದು ಬೇಡ. ಅಂಬರೀಶ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೇ ನೋವಾಗುತ್ತದೆ ಎಂದು ನೆಚ್ಚಿನ ಅಣ್ಣ ಅಂಬಿ ನೆನೆದು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಗದ್ಗದಿತರಾದರು.
ಅಂಬರೀಶ್ ಅವರ ಆರೋಗ್ಯ ಕ್ಷೀಣಿಸಿದ ನಂತರ ಅವರು ನನಗೆ ತಂದೆಯೇ ಆಗಿಬಿಟ್ಟಿದ್ದರು. ಮಂಡ್ಯ ಜನರನ್ನು ಸಕ್ಕರೆ ಜನರು ಎಂದು ಕರೆಯುತ್ತಿದ್ದರು. ಅವರು ಇದ್ದಾಗ ಪರಿಸ್ಥಿತಿಯೇ ಬೇರೆ. ಈಗ ಪರಿಸ್ಥಿತಿಯೇ ಬೇರೆ ಆಗಿದೆ. ನಾನು ಸದಾ ಅವರ ಕುಟುಂಬದ ಜೊತೆ ಇರುವೆ ಎಂದು ಭರವಸೆ ನೀಡಿದರು.












Click it and Unblock the Notifications