ಮೈಸೂರು ದಸರಾಗೆ ‘ಗುಂಡಿ’ ರಸ್ತೆಗಳೇ ‘ಸ್ವಾಗತ’ ಕಮಾನು
ಮೈಸೂರು, ಸೆಪ್ಟೆಂಬರ್ 11: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಇನ್ನು 16 ದಿನ ಬಾಕಿ ಇದೆ. ಆದರೆ ಮೈಸೂರು ರಸ್ತೆಗಳನ್ನು ನೋಡಿದರೆ ಸಾಕು ಎಲ್ಲೆಲ್ಲೂ 'ಗುಂಡಿ'ಮಯ ಆಗಿವೆ. ಹೆಜ್ಜೆಹೆಜ್ಜೆಗೂ ಗುಂಡಿ ರಸ್ತೆಗಳೇ ಪ್ರವಾಸಿಗರಿಗೆ ಸ್ವಾಗತ ಕಮಾನುಗಳಂತೆ ಗೋಚರಿಸುತ್ತಿವೆ.
ದಸರಾ ಮಹೋತ್ಸವದ ಪ್ರಯುಕ್ತ ನಡೆಯುವ ನಗರ ಸೌಂದರೀಕರಣ ಕಾಮಗಾರಿ ಇಂದಿಗೂ ಆರಂಭ ಆಗಿಲ್ಲ. ಎಂದಿನಂತೆ ಈ ಬಾರಿಯೂ ತರಾತುರಿಯಲ್ಲಿ ಕಾಮಗಾರಿ ಕೈಗೊಳ್ಳಬೇಕಾದ ಸನ್ನಿವೇಶ ಸೃಷ್ಟಿ ಆಗಿದೆ. ಒಂದೆಡೆ ಬಿಡುವಿಲ್ಲದ ಮಳೆ, ಮತ್ತೊಂದು ಆರಂಭವಾಗದ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ನಿತ್ಯ ಗುಂಡಿ ರಸ್ತೆಯಲ್ಲಿ ಸಂಚರಿಸುವ ನಾಗರಿಕರು ನಗರ ಪಾಲಿಕೆಗೆ ಹಿಡಿಶಾಪ ಹಾಕಿಯೇ ಮುಂದೆ ಹೆಜ್ಜೆ ಇಡುತ್ತಿದ್ದಾರೆ.
ದಸರಾ ಅಂದರೆ ಅದು ನವರಾತ್ರಿ ಸಂಭ್ರಮ. ಈ ವೇಳೆ ರಾಜ್ಯ, ದೇಶ ಸೇರಿದಂತೆ ವಿವಿಧೆಡೆಯಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಹೀಗಿರುವಾ ರಸ್ತೆ ದುರಸ್ತಿ ಆಗದಿದ್ದರೆ ಮೈಸೂರಿನ ಬಗ್ಗೆ ಅವರಿಗಿದ್ದ ಅಭಿಪ್ರಾಯಗಳು ಬದಲಾಗಬಹುದು. ನೂರಾರು ಕಿಲೋ ಮೀಟರ್ಗಟ್ಟಲೇ ದೀಪಾಲಂಕಾರ ಮಾಡಿ ಕಟ್ಟಡ, ವೃತ್ತಗಳು ಸುಂದರವಾಗಿ ಕಾಣಿಸಿದರೂ ಕೂಡ ರಸ್ತೆ ದುಸ್ಥಿತಿಯನ್ನು ಮರೆಮಾಚಲು ಆಗುವುದಿಲ್ಲ ಎಂಬುದು ಸ್ಥಳೀಯರ ಆಕ್ರೋಶ ಆಗಿದೆ.

ನಗರದಲ್ಲಿ ಅರೆಬರೆ ಕಾಮಗಾರಿ ದರ್ಶನ
ಸೆಪ್ಟೆಂಬರ್ 26ರಿಂದ ನವವರಾತ್ರಿ ಆರಂಭ ಆಗುತ್ತದೆ. ಅಕ್ಟೋಬರ್ 5ಕ್ಕೆ ವಿಜಯದಶಮಿಯಂದು ದಸರಾ ಜಂಬೂಸವಾರಿ ನಡೆಯುತ್ತದೆ. ಅದಕ್ಕಾಗಿ ನಿಯೋಜಿಸಿರುವ ಅಧಿಕಾರಿಗಳನ್ನು ಒಳಗೊಂಡ ಉಪ ಸಮಿತಿಗಳು ದಸರಾ ಸಿದ್ಧತೆಯಲ್ಲಿ ತೊಡಗಿಸಿಕೊಂಡಿವೆ. ದಸರಾ ಹಿನ್ನೆಲೆಯಲ್ಲಿ ಈಗಾಗಲೇ ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಆದರೆ ದಸರಾಗೆ ಮೈಸೂರು ನಗರವನ್ನು ಸುಂದರವಾಗಿ ಕಾಣುವಂತೆ ಮಾಡುವ ಕಾಮವಾರಿಗಳೇ ಇನ್ನೂ ಆರಂಭ ಆಗಿಲ್ಲ.

ಹಣ ಬಿಡುಗಡೆ ಆದ್ರೂ ಆರಂಭವಾಗದ ಕಾಮಗಾರಿ
''ನರಸಿಂಹರಾಜ ಕ್ಷೇತ್ರದಲ್ಲಿ ಈಗಾಗಲೇ ಒಂದಷ್ಟು ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಉಳಿದಂತೆ ಚಾಮರಾಜ ಕ್ಷೇತ್ರದ ರಸ್ತೆ ದುರಸ್ತಿಗೆ 100 ಕೋಟಿ ರೂಪಾಯಿ., ಕೃಷ್ಣರಾಜ ಕ್ಷೇತ್ರಕ್ಕೆ 50 ಕೋಟಿ ರೂಪಾಯಿ ಸೇರಿದಂತೆ ಒಟ್ಟಾರೆ 250 ಕೋಟಿ ರೂಪಾಯಿ ಬಿಡುಗಡೆ ಆಗಿದೆ. ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಇದು ಪೂರ್ಣಗೊಂಡ ನಂತರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಇದಲ್ಲದೆ ನಗರದೊಳಗಿನ ನಾನಾ ಬಡಾವಣೆಗಳ ರಸ್ತೆ ದುರಸ್ಥಿಗೆಂದು ವಾರ್ಡ್ ಒಂದಕ್ಕೆ 10 ಲಕ್ಷ ರೂಪಾಯಿ ಬಿಡುಗಡೆ ಆಗಿದೆ,'' ಎಂದು ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿ ವರ್ಷ ಕಳೆದಿದೆ. ಇನ್ನೂ ಕೆಲಸಗಳು ಪ್ರಾರಂಭ ಆಗಿಲ್ಲ.

ರಾಜಮಾರ್ಗ ಸೌಂದರೀಕರಣ, ದುರಸ್ತಿ
ರಾಜಮಾರ್ಗ ಸೌಂದರೀಕರಣ, ವಲಯ ಕಚೇರಿ-6ರ ರಾಜಮಾರ್ಗದ ಪುಟ್ಪಾತ್ ದುರಸ್ಥಿ, ಟೌನ್ಹಾಲ್ ಮುಂಭಾಗದ ಕಾಂಪೌಂಡ್ ದುರಸ್ಥಿ, ಗ್ರಿಲ್ ಪೈಂಟಿಂಗ್ಗೆ 17.98 ಲಕ್ಷ ರೂಪಾಯಿ, ವಲಯ ಕಚೇರಿ-6ರ ವ್ಯಾಪ್ತಿಯಲ್ಲಿ ಪ್ರಮುಖ ರಸ್ತೆಗಳಿಗೆ ಲೈನ್ ಪೇಟಿಂಗ್ ಮತ್ತು ಕರ್ಬ್ಗಳಿಗೆ ಬಣ್ಣ ಬಳಿಯುವುದಕ್ಕೆ 19.82 ಲಕ್ಷ ರೂಪಾಯಿ, ರಾಜಮಾರ್ಗದಲ್ಲಿನ ವೃತ್ತಗಳಿಗೆ ಬಣ್ಣ ಬಳಿಯುವುದು, ಮೀಡಿಯನ್ ಸ್ಥಳಾಂತರ, ದಸರಾ ಮೆಟ್ಟಿಲುಗಳ ದುರಸ್ಥಿಗೆ, ಮತ್ತು ಪ್ರಮುಖ ರಸ್ತೆಗಳಲ್ಲಿ ಗ್ರೇಟಿಂಗ್ ದುರಸ್ತಿಗೆ 18.20 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದಾರೆ.

ಪಾಲಿಕೆ ವತಿಯಿಂದ ಹಣ ನೀಡುವಂತೆ ಪ್ರಸ್ತಾವನೆ
''ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮೈಸೂ ನಗರವನ್ನು ಸುಂದರವಾಗಿ ಕಾಣಿಸುವಂತೆ ಮಾಡುವ ಕಾಮಗಾರಿ ಸೇರಿದಂತೆ ನಾನಾ ಕೆಲಸಗಳಿಗೆ ಪಾಲಿಕೆ ವತಿಯಿಂದ 15 ಕೋಟಿ ರೂಪಾಯಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ನೀಡುವವರೆಗೆ ಕಾಯವುದು ಬೇಡ ಎಂದು ಈಗಾಗಲೇ ಪಾಲಿಕೆ ವತಿಯಿಂದ 2 ಕೋಟ ರೂಪಾಯಿ ವೆಚ್ಚದಲ್ಲಿ ಬ್ಯೂಟಿಫಿಕೇಷನ್ ಕಾಮಗಾರಿ ಕೈಗೊಳ್ಳಲಾಗಿದೆ. ಇರುವ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸುತ್ತೇವೆ,'' ಎಂದು ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ ತಿಳಿಸಿದ್ದಾರೆ.
ಮೈಸೂರು-ಬೆಂಗಳೂರು ರಸ್ತೆಯ ವೃತ್ತ, ಸರ್ಕಾರಿ ಅತಿಥಿ ಗೃಹದ ರಸ್ತೆ ಹಾಗೂ ಲೈವ್ಲೈಟ್ ವೃತ್ತದ ಆಯ್ದ ಭಾಗಗಳಲ್ಲಿ ಮರು ಡಾಂಬರೀಕರಣ ಹಾಗೂ ಪೇಂಟಿಂಗ್ಗೆ 20 ಲಕ್ಷ ರೂಪಾಯಿ, ವಲಯ ಕಚೇರಿ-7ರ ವ್ಯಾಪ್ತಿಯ ನೆಲ್ಸನ್ ಮಂಡೇಲಾ ರಸ್ತೆ, ಹೊಸ ಹಾಗೂ ಮೈಸೂರು -ಬೆಂಗಳೂರು ರಸ್ತೆಯಲ್ಲಿ ಪಾದಚಾರಿ ಮಾರ್ಗ ದುರಸ್ತಿಪಡಿಸಿ ಲೇನ್ ಪೇಂಟಿಂಗ್, ಗುಂಡಿ ಮುಚ್ಚುವುದು, ಎಲ್ಐಸಿ ಮತ್ತು ಹೈವೇ ವೃತ್ತಕ್ಕೆ ಮರು ಡಾಂಬರೀಕರಣ ಮಾಡಿ ಕರ್ಬ್ಗಳಿಗೆ ಬಣ್ಣ ಬಳಿಯುವುದಕ್ಕೆ 40 ಲಕ್ಷ ರೂಪಾಯಿ ಬಿಡುಗಡೆಗೊಳಿಸಲಾಗಿದೆ.












Click it and Unblock the Notifications