ಬಿಸಿಯೂಟದ ಅಕ್ಕಿ ಮಾರಾಟಕ್ಕೆ ಯತ್ನ, ಶಾಲಾ ಶಿಕ್ಷಕಿ ಶಾಮೀಲು
ಮೈಸೂರು,ಏಪ್ರಿಲ್,02: ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅಕ್ಕಿಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಕೆಲವು ಮಂದಿ ಮಾಲು ಸಹಿತ ಶ್ರೀರಂಗಪಟ್ಟಣ ಗಂಜಾಂ ಆರ್.ಸಿ. ಅನುದಾನಿತ ಶಾಲೆಯಲ್ಲಿ ಸಿಕ್ಕಿಬಿದ್ದಿದ್ದಾರೆ.
ಶಾಲೆಯ ಕಾಂಪೌಂಡ್ ನೊಳಗೆ ವಾಹನವೊಂದನ್ನು ನಿಲ್ಲಿಸಿಕೊಂಡು ಬಿಸಿಯೂಟದ ಅಕ್ಕಿ ಮೂಟೆಗಳನ್ನು ಸಾಗಿಸುವ ವೇಳೆ ಮಾಲು ಸಮೇತ ಸಿಕ್ಕಿ ಬಿದ್ದಿದ್ದ ತಕ್ಷಣವೇ ಸ್ಥಳದಲ್ಲಿದ್ದ ಅಕ್ಕಿ ಮೂಟೆ ತುಂಬಿದ ವಾಹನವನ್ನು ಬಿಟ್ಟು ಮುಖ್ಯ ಶಿಕ್ಷಕಿ ಸ್ಥಳದಿಂದ ಪರಾರಿಯಾಗಿದ್ದಾರೆ.[ಮೈಸೂರಿನಲ್ಲಿ ಬಿಸಿ ಊಟಕ್ಕೆ ಬಿಸಿಬಿಸಿ ರಾಗಿ ಮುದ್ದೆ]
ಶಾಲೆಯಲ್ಲಿ ಬಿಸಿಯೂಟದ ಅಕ್ಕಿ ದುರ್ಬಳಕೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಗ್ರಾಮಸ್ಥರು ಶಾಲೆಯ ಮೇಲೆ ಕಣ್ಣಿಟ್ಟಿದ್ದರು. ವಾಹನಕ್ಕೆ ಅಕ್ಕಿ ಮೂಟೆಯನ್ನು ತುಂಬಿಸುತ್ತಿದ್ದ ಸಂದರ್ಭ ಸ್ಥಳಕ್ಕೆ ತೆರಳಿ ವಿಚಾರಿಸಿದವರಿಗೆ ಇದು ಸೊಸೈಟಿಯಿಂದ ತಂದ ಅಕ್ಕಿ ಮೂಟೆಯಾಗಿದ್ದು, ಇಲ್ಲಿಂದ ಬೇರೆಡೆಗೆ ಸಾಗಿಸುತ್ತಿರುವುದಾಗಿ ಮುಖ್ಯ ಶಿಕ್ಷಕಿ ಹಾರಿಕೆ ಉತ್ತರ ನೀಡಿದ್ದಾರೆ.
ಸರ್ಕಾರ ಅನುದಾನಿತ ಶಾಲೆಗಳಿಗೂ ಬಿಸಿಯೂಟದ ಸೌಲಭ್ಯ ಕಲ್ಪಿಸಿದ್ದು ಇದನ್ನು ಕೆಲವು ಮಕ್ಕಳು ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಆದರೆ ಕೆಲವು ಶಾಲೆಗಳಲ್ಲಿ ಹೆಚ್ಚಿನ ಲೆಕ್ಕ ತೋರಿಸಿ ಕಾಳಸಂತೆಯಲ್ಲಿ ಅಕ್ಕಿಯನ್ನು ಮಾರಾಟ ಮಾಡುವ ದಂಧೆ ನಡೆಯುತ್ತಿದೆ. ಆದರೆ ಯಾರೂ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.[ಸರ್ಕಾರಿ ಕಾಲೇಜುಗಳಲ್ಲಿ 5ರೂ.ಗೆ ಬಿಸಿಯೂಟ]
ಸರ್ಕಾರ ಕೇವಲ ಯೋಜನೆಯನ್ನು ಜಾರಿಗೆ ತಂದರೆ ಸಾಲದು ಅದು ಸಮರ್ಪಕವಾಗಿ ತಲುಪುತ್ತಿದೆಯಾ ಎಂಬುದನ್ನು ಪರಿಶೀಲಿಸಬೇಕು. ಆದರೆ ಅದ್ಯಾವುದು ಆಗದಿರುವುದರಿಂದಾಗಿ ಯೋಜನೆಯ ಲಾಭ ಬಡವರಿಗಿಂತ ಮತ್ಯಾರಿಗೋ ಆಗುತ್ತಿರುವುದು ವಿಷಾದದ ಸಂಗತಿಯಾಗಿದೆ.